ಚಿಕ್ಕಮಗಳೂರು : ಪ್ರತಿಪಕ್ಷಗಳ ಅಪಪ್ರಚಾರದ ನಡುವೆಯೂ ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ದಿಟ್ಟ ನಿಲುವು ಕೈಗೊಳ್ಳುವ ಮೂಲಕ ನೂರು ಕೋಟಿ ಕೋವಿಡ್ ಲಸಿಕೆ ನೀಡಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ತಿಳಿಸಿದರು.
ಜಿಲ್ಲಾ ಬಿಜೆಪಿ ಕೇಂದ್ರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವ ದೂರದೃಷ್ಟಿ ನಾಯಕತ್ವ ಗುಣದಿಂದಾಗಿ ಭಾರತ ಸಮರ್ಥವಾಗಿ ಕೋವಿಡ್ ನಿಯಂತ್ರಣ ಮಾಡುವಲ್ಲಿ ಸಫಲವಾಗಿದೆ. ೧೦೦ ಕೋಟಿ ಕೋವಿಡ್ ಲಸಿಕೆ ವಿತರಣೆ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಕೊಂಡಾಡಿದರು.
ಕೋವಿಡ್ ಎಂಬ ಮಹಾಮಾರಿ ಸೋಂಕು ದೇಶವನ್ನು ತತ್ತರಿಸುವಂತೆ ಮಾಡಿದೆ. ಸೋಂಕಿನ ವಿರುದ್ದದ ಹೋರಾಟದಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಭಾರತ ಲಸಿಕೆ ನೀಡಿಕೆಯಲ್ಲಿ ೧೦೦ ಕೋಟಿ ಡೋಸ್ ಪೂರ್ಣಗೊಳಿಸಿದ್ದು ಪಿಡುಗಿನ ವಿರುದ್ದದ ಹೋರಾಟದಲ್ಲಿ ಇದು ದೊಡ್ಡ ಮೈಲಿಗಲ್ಲು ಸೃಷ್ಟಿಸಿದೆ ಎಂದರು.
ದೇಶದ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಸ್ವದೇಶದಲ್ಲಿ ಕೋವಿಡ್ ಲಸಿಕೆ ಸಂಶೋಧನೆ ಮಾಡಲಾಯಿತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ ೧ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ ೪೫ ವರ್ಷ ಮೇಲ್ಪಟ್ಟ ಹಾಗೂ ೬೦ ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಜೂನ್ ೨೧ರಿಂದ ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿತ್ತು. ಇದೀಗ ಶತಕೋಟಿ ಡೋಸ್ ವಿತರಣೆ ಮಾಡಿರುವುದು ದೇಶದ ಪಾಲಿಗೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂದರು.
ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಅಪಪ್ರಚಾರ ಮಾಡಿತ್ತು. ಅದೆಲ್ಲವನ್ನು ಮೆಟ್ಟಿನಿಂತು ದೇಶವನ್ನು ಆರೋಗ್ಯಯುತವಾಗಿಸಲು, ಕೋವಿಡ್ ನಿಯಂತ್ರಣಕ್ಕೆ ಕೊರೊನಾ ವಾರಿಯರ್ಸ್ಳು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಕೊಂಡಾಡಿದರು.
ಜಿಲ್ಲೆಯಲ್ಲಿ ಒಟ್ಟು ೧೦ ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ನೀಡಲಾಗಿದೆ. ೯,೨೭,೩೨೦ ಕೋವಿಶೀಲ್ಡ್, ಮತ್ತು ೧,೧೩,೩೮೦ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ಕೋವಿಡ್ ಸನ್ನಿವೇಶದಲ್ಲಿ ಪಕ್ಷದ ಕಾರ್ಯಕರ್ತರು ಆಹಾರ, ನೀರು, ಔಷಧ ಪೂರೈಕೆ, ಮೂಲಕ ಪ್ರತಿ ಬೂತ್ಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಕೋವಿಡ್ ಲಸಿಕಾ ಅಭಿಯಾನ ಕೈಗೊಳ್ಳುವ ಮೂಲಕ ಭಾರತ ನೂರು ಕೋಟಿ ಕೋವಿಡ್ ಲಸಿಕೆ ನೀಡಿದ್ದು ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಕೊಂಡಾಡಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜ್ಶೆಟ್ಟಿ ಮಾತನಾಡಿ ಕೋವಿಡ್ ಕಳೆದ ಜನವರಿ ೧೬ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊವಿಡ್-೧೯ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿದರು. ಅಂದಿನಿAದ ೨೭೯ ದಿನಗಳಲ್ಲಿ ಲಸಿಕೆ ವಿತರಣೆಯು ಹಲವು ದಾಖಲೆಗಳನ್ನು ನಿರ್ಮಿಸುತ್ತಾ ಸಾಗಿದೆ. ಕೋವಿಡ್ ವಿತರಣೆಯಲ್ಲಿ ದೇಶ ಹೊಸ ಹೆಜ್ಜೆ ಇರಿಸಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್, ನಗರ ಮಂಡಲ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಮಾಧ್ಯಮ ಸಂಚಾಲಕ ಸುಧೀರ್ ಇದ್ದರು.
Discussion about this post