ಚಿಕ್ಕಮಗಳೂರು: ಚಿಕ್ಕಮಗಳೂರು ಒಳಗೊಂಡಂತೆ ವಿವಿಧ ನಾಲ್ಕು ಜಿಲ್ಲೆಗಳಲ್ಲಿ ನಿವೃತ್ತಿ ಹೊಂದಿದ ೩೫೦ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ದೇವನಾಂಪ್ರಿಯ ಪ್ರಿಯದರ್ಶಿ ಸಾಮ್ರಾಟ್ ಅಶೋಕ ಚಕ್ರವರ್ತಿ ಟ್ರಸ್ಟ್ ವತಿಯಿಂದ ನಿವೃತ್ತಿ ವೇತನ ನೀಡಲಾಗಿದೆ ಎಂದು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಎಸ್.ಶ್ರೀಧರ್ಮೂರ್ತಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ದೇವನಾಂಪ್ರಿಯ ಪ್ರಿಯದರ್ಶಿ ಸಾಮ್ರಾಟ್ ಅಶೋಕ ಚಕ್ರವರ್ತಿ ಟ್ರಸ್ಟ್ನ ಜಿಲ್ಲಾ ಘಟಕದ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತಿ ವೇತನ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ದೇವನಾಂಪ್ರಿಯ ಪ್ರೋತ್ಸಾಹಧನ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಹಲವು ಸಂಘಟನೆಗಳು ಸಮಾಜಸೇವೆಯಲ್ಲಿ ತೊಡಗಿದ್ದು ಅದರಂತೆಯೇ ಅನೇಕ ವರ್ಷಗಳಿಂದ ಟ್ರಸ್ಟ್ ಹಿಂದುಳಿದ ಕುಟುಂಬದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಏಳಿಗೆಗಾಗಿ ಶ್ರಮಿಸುತ್ತಿದ್ದು ಅವರ ನಿವೃತ್ತಿ ವೇತನ ನೀಡುವ ಮೂಲಕ ಬದುಕಿಗೆ ಆಧಾರವಾಗಿದೆ. ಟ್ರಸ್ಟ್ ಈಗಾಗಲೇ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನಿವೃತ್ತಿ ಹೊಂದಿದ ಕಾರ್ಯಕರ್ತೆಯರಿಗೆ ನಿವೃತ್ತಿ ವೇತನ ನೀಡುವ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸುವ ಚಿಂತನೆ ಇದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಒಟ್ಟು ೧೮ ಸಾವಿರ ಸದಸ್ಯರನ್ನು ಟ್ರಸ್ಟ್ ಒಳಗೊಂಡಿದ್ದು ಇದರ ವತಿಯಿಂದ ಕೋಲಾರದಲ್ಲಿ ೧೦೬, ಚಿತ್ರದುರ್ಗದಲ್ಲಿ ೧೨೫, ಚಿಕ್ಕಬಳ್ಳಾಪುರದಲ್ಲಿ ೮೬ ಮತ್ತು ಚಿಕ್ಕಮಗಳೂರಿನಲ್ಲಿ ೧೯ ಮಂದಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೃತ್ತಿ ವೇತನ ನೀಡಲಾಗಿದೆ. ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದರು.
ಹಿಂದುಳಿದ ಕಾರ್ಯಕರ್ತೆಯರಿಗೆ ಉಚಿತ ಆರೋಗ್ಯ ಶಿಬಿರ, ತಪಾಸಣೆ, ಚಿಕಿತ್ಸೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಟ್ರಸ್ಟ್ಗೆ ಬದ್ದರಾಗಿರುವವರು, ನಂಬಿಕೆಯುಳ್ಳ ಯಾವುದೇ ವ್ಯಕ್ತಿ ಸದಸ್ಯರಾಗುವ ಮೂಲಕ ಇದರೊಂದಿಗೆ ಕೈಜೋಡಿಸಬಹುದಾಗಿದೆ ಎಂದು ಹೇಳಿದರು.’
ದೇವನಾಂಪ್ರಿಯ ಪ್ರಿಯದರ್ಶಿ ಸಾಮ್ರಾಟ್ ಅಶೋಕ ಚಕ್ರವರ್ತಿ ಟ್ರಸ್ಟ್ನ ಜಿಲ್ಲಾ ಮೇಲ್ವಿಚಾರಕ ಡಿ.ಹೆಚ್.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕೋವಿಡ್ ಸಂದರ್ಭದಲ್ಲಿ ಶಕ್ತಿಮೀರಿ ಶ್ರಮಿಸುತ್ತಿದ್ದು ಅವರ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಟ್ರಸ್ಟ್ ಅವರ ನಿವೃತ್ತಿ ಬಳಿಕ ಏಳಿಗೆಗೆ ಬೃಹತ್ ಮೊತ್ತವನ್ನು ಯೋಜನೆ ಮೂಲಕ ಮೀಸಲಿರಿಸಿ ನೀಡುತ್ತಿದೆ ಎಂದರು.
ಅವರಿಗೆ ಬಡ್ಡಿರಹಿತ ಧನಸಹಾಯ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ದೊಡ್ಡಮಟ್ಟದ ಕಾಯಿಲೆಗಳು ಎದುರಾದಲ್ಲಿ ಉಚಿತ ಚಿಕಿತ್ಸೆ ನೀಡುವ ಮೂಲಕ ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ಟ್ರಸ್ಟ್ನ ಕುರಿತು ಆರಂಭದಲ್ಲಿ ಅನೇಕರು ಅನುಮಾನ ವ್ಯಕ್ತಪಡಿಸಿದ್ದರೂ ಆದರೆ ಇದು ಐದು ವರ್ಷಗಳ ಕಾಲ ಚಿಂತನೆ ನಡೆಸಿ ಆರಂಭಿಸಿದ ಸಮಾಜಮುಖಿ ಟ್ರಸ್ಟ್ ಇದಾಗಿದ್ದು ಹಲವು ಚಿಂತಕರು ಇದರ ಸದಸ್ಯರಾಗಿದ್ದಾರೆ ಎಂದರು.
ವಿಭಾಗೀಯ ಸಂಚಾಲಕಿ ನಾಗರತ್ನ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬೇಡಿಕೆಯನ್ನು ಈಡೇರಿಸಿ ಪೋಷಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದೇಶದಲ್ಲಿ ಲಕ್ಷಾಂತರ ಮಂದಿ ಕೆಲಸ ನಿರ್ವಹಿಸುತ್ತಿದ್ದು ಬಹುತೇಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಅವರ ನಿವೃತ್ತಿ ಬಳಿಕ ಜೀವನ ನಿರ್ವಹಣೆ ಕಷ್ಟವಾಗಲಿದೆ ಎಂಬುದನ್ನು ಸರ್ಕಾರ ಅರಿತಿಲ್ಲ. ಆದರೆ ಟ್ರಸ್ಟ್ ಅವರ ಬದುಕಿಗೆ ನಿವೃತ್ತಿ ವೇತನ ನೀಡುವ ಮೂಲಕ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.೮೫ ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮಕ್ಕಳಿಗೆ ದೇವನಾಂಪ್ರಿಯ ಪ್ರೋತ್ಸಾಹಧನದ ಚೆಕ್ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ವಿಭಾಗೀಯ ಸಂಚಾಲಕರಾದ ಶಿವಕುಮಾರ್, ಲಿಂಗರಾಜ್, ಪಿಲೋಮಿನ, ತಿಪ್ಪೇಸ್ವಾಮಿಶೆಟ್ರು, ಅಂಗನವಾಡಿ ಕಾರ್ಯಕರ್ತೆಯರ ಮುಖಂಡರಾದ ಮಂಗಳ ಮತ್ತತಿರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಗತಿಸಿ, ಶ್ರೀಮತಿ ಶೈಲಾ ಪ್ರಾರ್ಥಿಸಿ, ಎನ್.ರವೀಂದ್ರ ಸಾಗರ ನಿರೂಪಿಸಿದರು.

























Discussion about this post