ನಮ್ಮ ಪರಂಪರೆಯ ಮಹತ್ವವನ್ನು ಸಾರುವ ಪ್ರಧಾನ ಕುರುಹುಗಳೆಂದರೆ ಶಿಲ್ಪಿಗಳ ಭಾವಾನುಭಾವಗಳ ಮಂಥನದಿಂದ ಮೂಡಿಬಂದ ಅಪೂರ್ವ ಶಿಲ್ಪಗಳು, ಗುಡಿಮಂದಿರಗಳು, ಕುಸುರಿಕಲೆಗಳ ಕಲಾಜಾಲಗಳು. ಅದಕ್ಕೇ ಅಮರಶಿಲ್ಪಿಗಳ ಮಹತ್ವವನ್ನು ಸಾರುತ್ತ “ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ?” ಎಂದರು ಮಹಾಕವಿ ಕುವೆಂಪು. ಎಂತಹ ಧ್ವನಿ ಪರಂಪರೆ! ಈ ಜಗವನ್ನು, ಜಗದ ಸಮಸ್ತವನ್ನು ಸೃಷ್ಟಿಸಿದ ಆ ದಿವ್ಯ ದೇವಶಿಲ್ಪಿ ಯಾರಿಗೂ ಕಾಣುವುದಿಲ್ಲ. ಆದರೆ ಆ ಚೆಲುವಿನೋಕುಳಿಯ ಹನಿಗಳನ್ನು ತಮ್ಮ ಭಾವದೀಪ್ತಿಗೆ ಹೊಳೆದಂತೆ ಬಳಸಿಕೊಳ್ಳುತ್ತ ಮನೋಚಿತ್ತಾರಗಳನ್ನು ಅರಳಿಸಿದ, ಅರಳಿಸುತ್ತಿರುವ ಭಾವ ಶಿಲ್ಪಿಗಳನ್ನು ಮರೆಯುವಂತಿಲ್ಲ. ಶಿಲ್ಪ, ಚಿತ್ರ, ಕಾವ್ಯ- ಈ ಮೂರು ಪ್ರಕಾರಗಳು ದೇವನೊಲುಮೆಯ ಭಾವ ಕುಸುಮಗಳನ್ನು ಮರ್ತ್ಯದ ಎದೆಗಳಲ್ಲಿ ಅರಳಿಸುವ ವಿಶಿಷ್ಟ ಕಲಾಪ್ರಕಾರಗಳು. ಅದರಲ್ಲೂ ಶಿಲ್ಪ! ದೇವನಿತ್ತ ಶಿಲೆಯಲ್ಲಿ ಕಲ್ಪನೆಯ ಕಲೆಗಳನ್ನು ನಿತ್ಯವೂ ಅರಳಿಸುತ್ತಿರುವ ಶಿಲ್ಪ! ಈ ಶಿಲ್ಪಪ್ರಕಾರ ಸದಾ ವಂದನೀಯ, ಅದರ ಕರ್ತೃ ಶಿಲ್ಪಿ ಸದಾ ಅಭಿನಂದನೀಯ!
ಆದರೆ, ನಮ್ಮ ಮಹಾನ್ ಶಿಲ್ಪಿಗಳು ಯಾರೆಲ್ಲಾ ಎಂದರೆ ಇತಿಹಾಸ ಮೌನದ ಮೊರೆ ಹೋಗುತ್ತದೆ. ಕರುನಾಡಿನ ಶ್ರೇಷ್ಠ ಶಿಲ್ಪಿ ಎಂದು ನಾವೆಲ್ಲ ಭಾವಿಸಿಕೊಂಡಿರುವ, ಮನಸಾರೆ ಒಪ್ಪಿಕೊಂಡಿರುವ ಜಕಣಾಚಾರ್ಯರ ಹೆಸರೂ ಇತಿಹಾಸೋಕ್ತವಲ್ಲ!
ನಮ್ಮ ಚರಿತ್ರೆಯ ಈ ಅನುಲ್ಲೇಖಗಳು ಶಿಲ್ಪಿಗಳ ಇತಿಹಾಸದಲ್ಲಿ ಒಂದು ಶೂನ್ಯವನ್ನುಂಟು ಮಾಡಿರಬಹುದು. ಆದರೆ ಪರಂಪರೆಗೆ ಅಲ್ಲ! ನಮ್ಮ ಪರಂಪರೆಗೆ ಇತಿಹಾಸದ ಮೌನವನ್ನು ಧಿಕ್ಕರಿಸಿ ನಿಲ್ಲುವ ತಾಕತ್ತಿದೆ. ನಮ್ಮ ಜನಪದರಿಗೆ ಇತಿಹಾಸವನ್ನು ಮರುಸೃಷ್ಟಿಸುವ ಹುಮ್ಮಸ್ಸಿದೆ. ದಿವ್ಯಮಂಗಳ ಶಿಲ್ಪ ಸಮೂಹಗಳನ್ನು ಸೃಷ್ಟಿಸಿದ ಮಹಾಶಿಲ್ಪಿಗಳು ತಮ್ಮ ಹೆಸರನ್ನು ಎಲ್ಲಿಯೂ ಸೂಕ್ತವಾಗಿ ಉಲ್ಲೇಖ ಮಾಡಿಕೊಳ್ಳದಿದ್ದರೂ ಎಲ್ಲರನ್ನೂ ಜಕಣಾಚಾರ್ಯರ ಹೆಸರಿನಲ್ಲಿ ಗುರುತಿಸಿಕೊಳ್ಳುವ ಸಂಕಲ್ಪ ನಮ್ಮ ಜನಪದರವಾಯಿತು. ಎಲ್ಲಾ ಮಹಾಶಿಲ್ಪಿಗಳಲ್ಲೂ ಜಕಣಾಚಾರ್ಯರ ಪ್ರಭಾವಳಿ ಅರಳಿಕೊಂಡಿತು. ಮಲ್ಲಿತಮ್ಮ, ಮಸಣಿತಮ್ಮರಂಥ ಹಲವು ಹೆಸರುಗಳು ಅಲ್ಲಲ್ಲಿ ಕಂಡರಿತವಾಗಿದ್ದರೂ ಹೊಯ್ಸಳ ಶಿಲ್ಪಗಳೆಲ್ಲರನ್ನೂ ಜಕಣಾಚಾರ್ಯರ ಹೆಸರಿನಲ್ಲಿ ಗುರುತಿಸಿಕೊಳ್ಳುವ ಪರಂಪರೆ ಬೆಳೆದು ಬಂದಿತು. ಜೊತೆಗೆ ಜಕಣಾಚಾರ್ಯರ ಬಗ್ಗೆ ಒಂದು ಆಪ್ತ ಕಲ್ಪನೆಯೂ! ಅದು ಹೀಗಿದೆ:
ಜಕಣಾಚಾರ್ಯರು ಬೇಲೂರು ಗುಡಿ ನಿರ್ಮಿಸುವ ಸಂದರ್ಭ. ಗರ್ಭಿಣಿ ಪತ್ನಿಯನ್ನೂ ಮರೆತು ವರ್ಷಗಳ ಕಾಲ ತಮ್ಮನ್ನು ಕಾಯಕಕ್ಕೆ ಸಮರ್ಪಿಸಿಕೊಂಡರು. ಇವರು ತಮ್ಮ ಕೌಶಲವನ್ನೆಲ್ಲ ಪಣಕ್ಕಿಟ್ಟು ನಿರ್ಮಿಸಿದ ಚೆನ್ನಿಗರಾಯನ ವಿಗ್ರಹದಲ್ಲಿ ದೋಷವಿದೆ ಎಂದು ತೋರಿಸಿದ ಯುವಶಿಲ್ಪಿಯ ಜ್ಞಾನಕ್ಕೆ ಸೋತು ದೋಷಪೂರಿತ ಶಿಲೆಯಿಂದ ವಿಗ್ರಹ ನಿರ್ಮಿಸಿದ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು. ಆ ಯುವಶಿಲ್ಪಿ ತಮ್ಮ ಮಗನೇ ಎಂದು ತಿಳಿಯಿತು! ಹುಟ್ಟಿದ ಊರು ತುಮಕೂರು ಜಿಲ್ಲೆ ಕೈದಾಳದಲ್ಲಿ ಈ ಜಕಣಾಚಾರ್ಯರು ಮತ್ತು ಡಂಕಣಾಚಾರ್ಯರು, ತಂದೆ-ಮಕ್ಕಳು ಸೇರಿ ಚೆನ್ನಕೇಶವ ದೇವಾಲಯ ನಿರ್ಮಿಸಿದರು. ಜಕಣಾಚಾರ್ಯರ ಕೈ ಮತ್ತೆ ಬಂದಿತು!
ಕೈದಾಳದ ಚನ್ನಕೇಶವ ವಿಗ್ರಹ ಬೇಲೂರು ಚನ್ನಕೇಶವನಷ್ಟೇ ಸುಂದರ, ಮನೋಹರ! ಸುಮಾರು ಎಂಟು ಅಡಿ ಎತ್ತರ! ಸೂಕ್ಷ್ಮ ಕೆತ್ತನೆಯ ಕುಸುರಿ ಕೆಲಸವಂತೂ ಅದ್ಭುತ, ಅಪೂರ್ವ! ಕಪ್ಪುಶಿಲೆಯಲ್ಲಿ ಮೂಡಿದ ಮಂದಸ್ಮಿತ ವದನಾರವಿಂದ; ಪ್ರಮಾಣಬದ್ಧ ಅಂಗಾಂಗಗಳು; ಕಿರೀಟ, ಎದೆ ಹಾರಗಳು, ಉಂಗುರಗಳು, ಸೊಂಟ ಪಟ್ಟಿಗಳು, ಕಾಲ್ ಕಡಗಗಳು, ಪ್ರಭಾವಳಿಯ ಸೂಕ್ಷ್ಮ ದಶಾವತಾರದ ಕೆತ್ತನೆಗಳು, ನಾಲ್ಕು ಕೈಗಳ ಶಂಖ, ಚಕ್ರ, ಗದಾಹಸ್ತಗಳು- ಸುಂದರ, ಅತಿಸುಂದರ! ಗದೆ ನೆಲಕ್ಕೆ ತಾಗದಂತೆ ಹಿಡಿದ ಎಡಗೈಯ ಉಂಗುರಗಳ ನಡುವೆ ಸಣ್ಣ ಕಡ್ಡಿಯೊಂದನ್ನು ತೋರಿಸಬಹುದು ಎಂದರೆ ಶಿಲ್ಪ ಚಾತುರ್ಯ ಅದೆಷ್ಟು ನಾಜೂಕಿನದು ಎಂದು ಅರ್ಥೈಸಿಕೊಳ್ಳಬಹುದು. ಹೀಗಾಗಿ ಕೈದಾಳದ ಜನತೆಗೆ, ಸಹೃದಯರಿಗೆ ಚೆನ್ನಕೇಶವ, ಜಕಣಾಚಾರ್ಯ ಎಂದರೆ ಹೃದಯಕ್ಕೆ ಹತ್ತಿರವಾದವರು, ಹೃದಯವೇ ಆದವರು!
ಆದರೆ ಆಗಸ್ಟ್ 2006ರ ಒಂದು ದಿನ. ದೇಗುಲದ ಜಮೀನನ್ನು ಅತಿಕ್ರಮಿಸಿಕೊಂಡವರಿಂದ ಜಮೀನು ಬಿಡಿಸಿಕೊಳ್ಳುತ್ತಾರೆ ಎಂಬ ಮಾತು ಕೈದಾಳದಲ್ಲಿ ಹರಡಿತ್ತು. ಇದರಿಂದ ತಪ್ತನಾದ ವ್ಯಕ್ತಿಯೊಬ್ಬ ಕುಡಿತದ ಅಮಲಿನಲ್ಲಿ ‘ಈ ದೇವರಿದ್ದರೆ ತಾನೇ ಪೂಜೆ’ ಎಂಬ ಭಾವದಿಂದ ಇರುಳು ದೇಗುಲ ತೆರೆದು ಅಲ್ಲೇ ಸಿಕ್ಕಿದ ಕಬ್ಬಿಣದ ಸಲಾಕೆಯಿಂದ ಸ್ವಾಮಿಯ ಎಡಗೈಗೆ ಅಪ್ಪಳಿಸಿ ಬಿಟ್ಟ. ಗದೆ ಹಿಡಿದ ಚೆನ್ನಕೇಶವನ ಎಡಗೈ ತುಂಡುತುಂಡುಗಳಾಗಿ ಕೆಳಬಿತ್ತು. ತನ್ನ ಕೃತ್ಯಕ್ಕೆ ತತ್ತರಿಸಿದ ಅವನೂ ಅಲ್ಲಿಯೇ ಕುಸಿದುಬಿದ್ದ.
ಮರುದಿನ ಬೆಳಗ್ಗೆ ಈ ಅಪೂರ್ವ ವಿಗ್ರಹದ ದುರವಸ್ಥೆಯನ್ನು ನೋಡಿದ ಕೈದಾಳ ತಲ್ಲಣಿಸಿ ಹೋಯಿತು. ಭಿನ್ನವಾದ ವಿಗ್ರಹ ಸರಿ ಮಾಡುವುದು ಹೇಗೆ ಎಂಬುದರ ಜೊತೆಗೆ ಈ ವಿಗ್ರಹವನ್ನು ಪೂಜಿಸುವ ಕುರಿತೂ ವಾದವಿವಾದಗಳು ನಡೆದುವು. ಈ ಎಲ್ಲಾ ತಲ್ಲಣಗಳನ್ನು ನೇರ್ಪು ಮಾಡಲು ಶ್ರೀಚೆನ್ನಕೇಶವನೇ ಆಯ್ಕೆಮಾಡಿಕೊಂಡ ಶಿಲ್ಪಿ ನಮ್ಮ ಚಿಕ್ಕಮಗಳೂರಿನ ಎಸ್.ಪಿ. ಜಯಣ್ಣಾಚಾರ್ಯರು!
ಜಯಣ್ಣಚಾರ್ಯರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಹುಲ್ಲೇಹಳ್ಳಿಯ ಪುಟ್ಟಶಾಮಾಚಾರ್ಯರ ಮಗ. ಶಿಲ್ಪಿಗಳ ಮನೆಯಲ್ಲೆ ಹುಟ್ಟಿದ್ದರೂ ಶಿಲಾಶಿಲ್ಪಕೆತ್ತನೆ, ನಕಾಶೆಲೇಖನ, ಚಿತ್ರಕಲೆ, ಸ್ವರ್ಣಶಿಲ್ಪ, ಎರಕಶಿಲ್ಪ, ಮೃತ್ತಿಕಶಿಲ್ಪ ಈ ಯಾವುದನ್ನೂ ಗುರುಮುಖೇನ ವಿದ್ಯುಕ್ತವಾಗಿ ಕಲಿತವರಲ್ಲ. ತಂದೆಯವರ ಕೈಕುಶಲತೆಯನ್ನು ಗಮನಿಸಿ ಬೆಳೆದುದು ಮೊದಲ ಹಂತ. ವಿದ್ಯಾರ್ಥಿಯಾಗಿದ್ದಾಗಲೇ ಚಿತ್ರಗಳಿಗೆ ಎಲ್ಲೆಲ್ಲಿ ಪ್ರೋತ್ಸಾಹವಿದೆಯೋ ಅಲ್ಲೆಲ್ಲ ಅಲೆದಾಡಿದ್ದು ನಂತರದ ಹಂತ. ಅಂಗಡಿ- ಮನೆಗಳ ಕಬ್ಬಿಣದ ಪೆಟ್ಟಿಗೆಗಳಿಗೆ ಲಕ್ಷ್ಮಿ ಚಿತ್ರ ಬರೆಸಲು ಬೇಡಿಕೆ ಇದ್ದುದರಿಂದ, ಇದಕ್ಕಾಗಿ ಚಿಕ್ಕಮಗಳೂರು, ಹಾಸನ, ತುಮಕೂರು, ಶಿವಮೊಗ್ಗ, ಚಿತ್ರದುರ್ಗಗಳ ಊರುಗಳನ್ನು ಸೈಕಲ್ನಲ್ಲಿ ಸುತ್ತುವ ಹವ್ಯಾಸ ರೂಢಿಸಿಕೊಂಡರು. ತಂದೆತಾಯಿಯರ 9 ಮಕ್ಕಳ ತುಂಬು ಸಂಸಾರದಲ್ಲಿ ಎರಡನೆಯ ಮಗನಾದ ಇವರಿಗೆ ವಿದ್ಯಾರ್ಥಿ ಜೀವನದ ಈ ದುಡಿಮೆ ಅತಿ ಅಗತ್ಯವೂ ಆಗಿತ್ತು.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ. ವರೆಗೆ ಓದುವ ಅಪೂರ್ವ ಅನುಭವ. ಅಲ್ಲಿ ಕವಿ ನಿಸಾರ್ ಅಹಮದ್ ಅವರ ಶಿಷ್ಯರಾದುದು ಒಂದು ಭಾಗ್ಯ. ಚಿತ್ರದುರ್ಗದ ಹೊಳಲ್ಕೆರೆಯ ಅಜ್ಜಿಹಳ್ಳಿಯವರಾದ, ಮೈಸೂರು ಮಹಾರಾಜರ ಆಸ್ಥಾನ ಕಲಾವಿದರೂ ಆಗಿದ್ದ ನಾಗೇಂದ್ರಾಚಾರ್ ಅವರ ಮೊಮ್ಮಗಳು, ಶಿಲ್ಪಿ ರುದ್ರಾಚಾರಿಯವರ ಮಗಳು ಕೌಸಲ್ಯ ರೊಡನೆ ವಿವಾಹವಾದದ್ದು ಮತ್ತೊಂದು ಪರ್ವ. ಭಾವನವರಾದ ಶಿಲ್ಪಿ ಕಾಳಾಚಾರಿ ಅವರಿಂದಲೂ ಶಿಲ್ಪಕಲೆಯ ಮಾರ್ಗದರ್ಶನ ದೊರೆಯಿತು. ಈ ಅವಧಿಯಲ್ಲೇ ಹೊಯ್ಸಳ ಶಿಲ್ಪಶೈಲಿಯ ಸೊಬಗಿಗೆ ಮಾರುಹೋಗಿ ಜಕ್ಕಣಾಚಾರ್ಯರನ್ನು ಮಾನಸಿಕ ಗುರುವಾಗಿ ಸ್ವೀಕರಿಸಿದರು. ಕೆಲಸಮಯದಲ್ಲೇ ಕೆಇಬಿಯಲ್ಲಿ ಕ್ಯಾಶಿಯರ್ ಕೆಲಸ ದೊರೆತು ಮೂಡುಬಿದರೆಗೆ ಹೋದರು. ಆ ಪ್ರಶಾಂತ ವಾತಾವರಣ ಮತ್ತು ವೃತ್ತಿಗೌರವ ಈ ಹೊಸ ದಂಪತಿಗಳು ನೆಮ್ಮದಿಯ ಜೀವನ ಸಾಗಿಸಲು ನೆರವಾದವು. ಜೊತೆಯಲ್ಲಿ ಹತ್ತರಿಂದ ಹನ್ನೆರಡು ಜನ ತಮ್ಮ, ತಂಗಿ, ಬಂಧು-ಬಾಂಧವರು!
ಇಲ್ಲಿ ತಗಡಿನ ಉಬ್ಬುಶಿಲ್ಪಗಳು, ಭೂತಾರಾಧನೆಗೆ ಬಳಸುವ ಕವಚ ಇತ್ಯಾದಿಗಳನ್ನು ರಚಿಸಲು ಜಯಣ್ಣರವರ ಕೈ ಕುದುರಿತು. ಶಿಲ್ಪಿ ಶಾಮಾಚಾರ್ ಮತ್ತು ರಂಜಾಳ ಗೋಪಾಲ ಶೆಣೈ ಅವರ ಒಡನಾಟ ಇವರು ಶಿಲಾಶಿಲ್ಪದ ನಾಜೂಕುಗಳಿಗೆ ತೆರೆದುಕೊಳ್ಳುವಂತೆ ಮಾಡಿತು. ನಂತರ ಚಿಕ್ಕಮಗಳೂರಿಗೆ ವರ್ಗವಾಗಿ ಬಂದು ಇಲ್ಲಿನ ನಾರಾಯಣಪುರದ ಕಲಾಕುಟೀರದಲ್ಲಿ ನೆಲೆನಿಂತರು. ವೃತ್ತಿಯೊಡನೆ ಶಿಲ್ಪ ಪ್ರವೃತ್ತಿಯನ್ನು ಹದವಾಗಿ ಬೆರೆಸಿಕೊಳ್ಳಲು ಅನುವಾಗುವಂತೆ ಒದಗಿಬಂದ ಮುಂಬಡ್ತಿಗಳೆಲ್ಲವನ್ನೂ ನಿರಾಕರಿಸಿದರು. ಹಿರೇಮಗಳೂರು ದೇಗುಲದ ಕವಚ,ಪ್ರಭಾವಳಿಗಳು; ಶಂಕರಮಠ, ರಾಘವೇಂದ್ರಮಠಗಳಿಗೆ ತಗಡಿನಕೆಲಸ, ಬೆಳ್ಳಿ ಮಂಟಪಗಳು; ಕಾಮಧೇನು ಗಣಪತಿ ದೇಗುಲದ ಉತ್ಸವ ಮೂರ್ತಿಗಳು; ಚಿಂತಾಮಣಿ ಸರಸ್ವತಿ ದೇಗುಲಕ್ಕೆ ಐದು ಅಡಿ ಎತ್ತರದ ಸರಸ್ವತಿ ವಿಗ್ರಹ; ಗೋಪಿಶೆಟ್ಟಿಪಾಳ್ಯಕ್ಕೆ ಮಾರಿಯಮ್ಮ ವಿಗ್ರಹ; ಹಿರೇನಲ್ಲೂರಿನ ಕೇಶವ, ಸೂರ್ಯ ವಿಗ್ರಹಗಳು- ಈ ಮುಂತಾದುವು ಜಯಣ್ಣನವರ ಕರಕುಶಲ ಕಲೆಗೆ ಸಾಕ್ಷಿಯಾದುವು. ಇಂತಹ ಜಯಣ್ಣಾಚಾರ್ಯರನ್ನು ಕೈದಾಳದ ಶ್ರೀಕೇಶವ ತನ್ನ ಸ್ವರೂಪ ಸರಿಪಡಿಸಲು ಆಯ್ಕೆ ಮಾಡಿಕೊಂಡದ್ದು!
ಇದಕ್ಕಾಗಿ, ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ನೀಡಿದ ಕರೆಯನ್ನು ಸ್ವೀಕರಿಸಿದ ಜಯಣ್ಣನವರು ಕೈದಾಳಕ್ಕೆ ತಲುಪಿ ಭಿನ್ನವಿಗ್ರಹದ ಪರಿಸ್ಥಿತಿ ಅವಲೋಕಿಸಿದರು. ತಮ್ಮ ಮಾನಸಗುರು ಜಕಣಾಚಾರ್ಯರ ಮೇರುಶಿಲ್ಪದ ದುರ್ಗತಿಗೆ ಕಣ್ಣುಗಳು ತುಂಬಿಬಂದುವು. ತಮ್ಮ ಜೀವಮಾನದ ಸಾಧನೆಗಳನ್ನು ಪಣಕ್ಕಿಟ್ಟು ವಿಗ್ರಹಕ್ಕೆ ಮೂಲಸ್ವರೂಪ ನೀಡಲೇಬೇಕೆಂಬ ಸಂಕಲ್ಪ ಹೃದಯದಾಳದಿಂದ ಒತ್ತರಿಸಿ ಬಂದಿತು. ವಿಗ್ರಹದ ಕೈ ಮಾತ್ರ ಭಿನ್ನ ಆಗಿರುವುದರಿಂದ ವ್ಯವಸ್ಥಿತವಾಗಿ ಪುನರ್ ರೂಪಿಸಿದರೆ ಪೂಜೆ ಮಾಡಬಹುದೆಂದು ಆಗಮ-ಶಾಸ್ತ್ರಗಳ ನಿರೂಪಗಳನ್ನೂ ಉಲ್ಲೇಖಿಸಿ ಎಲ್ಲರಿಗೆ ಮನವರಿಕೆ ಮಾಡಿಕೊಟ್ಟರು. ಮುಜರಾಯಿ ದೇಗುಲವಾದುದರಿಂದ ತಮ್ಮ ಕಾರ್ಯಕ್ಕೆ ದರಪಟ್ಟಿ ನೀಡಲೇಬೇಕಿತ್ತು. ಜಯಣ್ಣಾಚಾರ್ಯರು ನೀಡಿದ ದರಪಟ್ಟಿ ಎಲೆ ಅಡಿಕೆ ಮೇಲೆ ಒಂದು ರೂಪಾಯಿ!
ಶಿಲ್ಪಿ ಸಮೂಹಕ್ಕೆ ಜಕಣಾಚಾರ್ಯರ ಹೆಸರು ನೀಡಿರುವ ಮನೋಬಲವೇ ಅಗಾಧ. ಆ ಋಣವನ್ನು ಸಂದಾಯ ಮಾಡಲು ಇದು ತಮಗೆ ಸಿಕ್ಕ ಅಪೂರ್ವ ಅವಕಾಶ ಎಂಬ ವಿನೀತ ಭಾವನೆಯ ಜಯಣ್ಣಾಚಾರ್ಯರು ಗರ್ಭಗುಡಿಯಲ್ಲಿಯೇ ಬಿದ್ದಿದ್ದ ವಿಗ್ರಹದ ಚೂರುಚೂರುಗಳನ್ನು ಜತನವಾಗಿ ಆರಿಸಿಕೊಂಡರು. ಒಟ್ಟು 22 ತುಂಡುಗಳು ಸಿಕ್ಕಿದುವಂತೆ! ತಮ್ಮ ಮಗ ವಿಶ್ವಕರ್ಮ ಆಚಾರ್ಯ, ನಾಲ್ಕಾರು ಜನ ಸಹಾಯಕ ಶಿಲ್ಪಿಗಳು ಮತ್ತು ಊರಿನ ಉತ್ಸಾಹಿ ಜನರ ಸಹಕಾರದಿಂದ ವಿಗ್ರಹವನ್ನು ಶುಚಿ ಮಾಡುವ ಕೆಲಸವನ್ನು ಮೊದಲಿಗೆ ಕೈಗೆತ್ತಿಕೊಂಡರು. ಅತ್ಯಂತ ನಾಜೂಕಿನಿಂದ ನವುರಾಗಿ ತೊಳೆತೊಳೆದಷ್ಟು ವಿಗ್ರಹದ ಅಪಾರ ಸೌಂದರ್ಯದ ಮೆರಗು ಮಿರುಮಿರುಗಿ ಹೊಳೆದು ಕಾಣತೊಡಗಿತು!
ನಂತರ ಒಡೆದ ತುಂಡುಗಳನ್ನು ಮರು ಜೋಡಿಸುವ ಸೂಕ್ಷ್ಮ ಕಾರ್ಯವನ್ನು ಜತನವಾಗಿ ಕೈಗೆತ್ತಿಕೊಂಡ ಆಚಾರ್ಯರ ಕೈಚಳಕವನ್ನು ಹಗಲಿರುಳು ಗಮನಿಸುತ್ತಾ ಕುಳಿತ ಕೈದಾಳದ ಜನರಿಗೆ ಧನ್ಯಧನ್ಯ ಭಾವ. ಜಕಣಾಚಾರ್ಯರೇ ಮತ್ತೇ ಬಂದು ವಿಗ್ರಹ ರೂಪಿಸುತ್ತಿರುವ ಪುಳಕ!
ಎದುರಾದ ಅನೇಕ ಅಡೆ-ತಡೆ ಅಡ್ಡಿ-ಆತಂಕಗಳನ್ನು ಸಮಾಧಾನದಿಂದಲೇ ನಿವಾರಿಸಿಕೊಳ್ಳುತ್ತಾ ಕೈ ಹಿಡಿದ ಕೆಲಸದಲ್ಲಿ ಕೊಂಚವೂ ಕುಂದುಕೊರತೆ ತೋರದಂತೆ ಯಶಸ್ವಿಯಾಗಿ ಮುಕ್ತಾಯದ ಹಂತ ತಲುಪಿದಾಗ ಊರಿಗೆ ಊರೇ ಸಂಭ್ರಮಾಶ್ಚರ್ಯದಲ್ಲಿ ತೇಲಿತ್ತು. ಅರ್ಚಕರ ಕಣ್ಣುಗಳಲ್ಲಿ ಆನಂದಬಾಷ್ಪ. ವಿಗ್ರಹದ ಮರುಸಂಧಾನ ಕಾರ್ಯ ಅಚ್ಚುಕಟ್ಟಾಗಿ ಮುಗಿದು ನಿತ್ಯ ಪೂಜಾಕಾರ್ಯ ನೆಡೆಯುವಂತಾದಾಗ ಜಯಣ್ಣಚಾರ್ಯರು ಅನುಭವಿಸಿದ ಆತ್ಮತೃಪ್ತಿ, ಸಂತಸ, ಸಮಾಧಾನಗಳು ಜನ್ಮಜನ್ಮಕ್ಕೂ ಬುತ್ತಿ ಕಟ್ಟಿಕೊಳ್ಳುವಷ್ಟು!
‘ಜಕ್ಕಣಾಚಾರ್ಯರಿಗೆ ಭಗವಂತ ಕೈ ಮರಳಿಸಿ ಕೊಟ್ಟ ಋಣವನ್ನು ಅವನದೇ ಕೈ ಸರಿಮಾಡಿ ತೀರಿಸಿದ ಆಧುನಿಕ ಶಿಲ್ಪಿ ಎಂದು ಜನತೆ ಮಾಡಿದ ಉದ್ಘೋಷಗಳು’; ಇವರ ಜೊತೆಗೆ ಮಗ ವಿಶ್ವಕರ್ಮ ಆಚಾರ್ಯರು ಹಗಲಿರುಳು ಹೆಗಲು ಕೊಟ್ಟು ದುಡಿದುದಕ್ಕೆ ಆಧುನಿಕ “ಜಕ್ಕಣಾಚಾರ್ಯ- ಡಂಕಣಾಚಾರ್ಯರು” ಎಂದು ಮನಸಾರ ನೀಡಿದ ಬಿರುದುಗಳು; ಊರಿನ ಜನರೇ ರೂಪಾಯಿಗೆ ರೂಪಾಯಿ ಸೇರಿಸಿ ಹಣ ಒಟ್ಟು ಮಾಡಿ ಚಿನ್ನದುಂಗುರ ತಂದು ತಮಗೆ ತೊಡಿಸಿದ ಭಾವನಾತ್ಮಕ ಕ್ಷಣಗಳು- ಹದಿನೈದು ವರ್ಷ ಕಳೆದೇಹೋಗಿದ್ದರೂ ಇನ್ನೂ ಜಯಣ್ಣನವರ ಮನದಲ್ಲಿ ಹಸಿರಸಿರು ಹಸಿರಾಗಿವೆ. ಅವರೆದುರಿಗೆ ಕೈದಾಳವೆಂದರೆ ಸಾಕು ಭಾವಪರವಶರಾಗಿ ಹನಿಗಣ್ಣಾಗಿ ಕೈಮುಗಿಯುತ್ತಾರೆ. ಕೈದಾಳಕ್ಕೆ ಹೋಗಿ ವಿಗ್ರಹದ ಅಪೂರ್ವ ಚೆಲುವನ್ನು ನೋಡುತ್ತಾ ಆನಂದ ಪರವಶರಾಗಿ ಕೈಮುಗಿದರೆ ಸಾಕು ಅರ್ಚಕರ ಕಣ್ಣುಗಳು ಈಗಲೂ ಭಾವಾಶ್ರುಗಳನ್ನು ತುಂಬಿಕೊಳ್ಳುತ್ತವೆ. ಚಿಕ್ಕಮಗಳೂರು ಜಯಣ್ಣಾಚಾರ್ಯರು ವಿಗ್ರಹಕ್ಕೆ ಮರುಜನ್ಮ ನೀಡಿದ ಕಥೆಯನ್ನು ವರ್ಣಿಸುತ್ತಾರೆ, ಅಭಿನಂದಿಸುತ್ತಾರೆ, ಕೃತಜ್ಞತೆಯ ಮಹಾಪೂರವನ್ನೇ ಹರಿಸುತ್ತಾರೆ.
ಜಯಣ್ಣಚಾರ್ಯರ ಈ ಅಪರೂಪದ ಸೇವೆಯ ಕಾರಣದಿಂದ ಕೈದಾಳ ಗ್ರಾಮದಲ್ಲಿ ಚಿಕ್ಕಮಗಳೂರಿಗೇ ವಿಶೇಷ ಸ್ಥಾನವಿದೆ. ಕೈದಾಳಕ್ಕೆ ಹೋಗಿ ನೀವು ಚಿಕ್ಕಮಗಳೂರಿನವರು ಎಂದು ಹೇಳಿಬಿಡಿ. ಅವರ ಭಾವಸಂಭ್ರಮ ಮುಗಿಲು ಮುಟ್ಟುತ್ತದೆ. ಈಗಿನ್ನೂ ವಿಗ್ರಹದ ಮರುಸಂಧಾನಕಾರ್ಯ ಮುಗಿಯಿತೇನೋ ಎನ್ನುವಂತೆ ಆ ದಿನಗಳನ್ನು ಕಣ್ಣಿಗೆ, ಮನಕ್ಕೆ ತಂದುಕೊಳ್ಳುತ್ತಾರೆ.
ಜಯಣ್ಣಾಚಾರ್ಯರ ಶಿಲ್ಪಕಲಾ ಪ್ರಾವಿಣ್ಯತೆಗೆ ಹಲವು ಹತ್ತು ಪುರಸ್ಕಾರ ಗೌರವಗಳು ಸಂದಿವೆ. ಮೈಸೂರು ದಸರಾ ಪ್ರಶಸ್ತಿ, ಕರ್ನಾಟಕ ಕರಕುಶಲ ನಿಗಮದ ರಾಜ್ಯಪ್ರಶಸ್ತಿ, ಶಿಲ್ಪಿ ಡಂಕಣಾಚಾರ್ಯ ಪ್ರಶಸ್ತಿ, ಮಲೆನಾಡುಶಿಲ್ಪಿ, ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ ಇಂಥ ಹಲವಾರು ಪ್ರಶಸ್ತಿಗಳ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವೂ ಗೌರವಿಸಿದೆ. 73ರ ಹರೆಯದ ಜಯಣ್ಣಾಚಾರ್ ಅವರದು ಈಗಲೂ 37ರ ಉತ್ಸಾಹ. ಸದಾ ವಿನೀತಭಾವದ ವಿದ್ಯಾರ್ಥಿಯ ಭಾವಗೌರವ. ಕವಿ ಸಹೃದಯರೂ ಆಗಿರುವುದರಿಂದ ಇವರ ಶಿಲ್ಪ ಕೌಶಲ್ಯದಲ್ಲಿ ವಿವೇಚನಾ ಶಕ್ತಿ, ಹದವಾದ ಮಾಧುರ್ಯ ಬೆರೆತಿರುತ್ತದೆ. ಮೋರ್ಚಿಂಗ್, ತಬಲಾವಾದನ, ಕಾವ್ಯರಚನೆಯ ಹವ್ಯಾಸಗಳೂ ಜೊತೆಗಿವೆ. ಇವರೊಡನೆ ಮಾತುಕತೆ ಎಂದರೆ ವಿಶ್ವವಿದ್ಯಾನಿಲಯವೊಂದನ್ನು ಹೊಕ್ಕು ಬಂದಂತೆ!
ಈಗ ಬೇಲೂರು ಶಿಲಾಬಾಲಿಕೆಯರ ಸೂಕ್ಷ್ಮ ಕುಸುರಿ ಕೆಲಸಗಳಂತಹ ಹಲವು ಶಿಲ್ಪಕಾರ್ಯಗಳಿಗೆ ಉಳಿ ಹಿಡಿದಿರುವ ಜಯಣ್ಣನಂತಹ ಭಾವಶಿಲ್ಪಿಗಳು ನಮ್ಮ ಅಮರಶಿಲ್ಪಿ ಜಕಣಾಚಾರ್ಯರ ನಿಜದ ವಾರಸುದಾರರು. ಆತ್ಮಸಖರು. ತಮ್ಮ ಅನುಭವದ ವಿಶ್ವವಿದ್ಯಾಲಯದ ವಿದ್ಯೆಗಳನ್ನು ಆಸಕ್ತರಿಗೆ ಧಾರೆ ಎರೆಯಬೇಕೆನ್ನುವ ನಿಜದ ಪ್ರಾಚಾರ್ಯರು. ಇಂತಹ ಶಿಲ್ಪಿಗಳ ಸತ್ಸಂಗದಲ್ಲಿ ಆ ಮಹಾಶಿಲ್ಪಿ, ಅಮರಶಿಲ್ಪಿಯ ಸಂಸ್ಮರಣೆ ಮಾಡುವುದೂ ಭಾಗ್ಯ!
– ಡಾ. ಮಂಜುಳಾ ಹುಲ್ಲಹಳ್ಳಿ.
ಚಿಕ್ಕಮಗಳೂರು.

























Discussion about this post