ಚಿಕ್ಕಮಗಳೂರು: ದೇಶದಲ್ಲಿ ಸಾಮರಸ್ಯದೊಂದಿಗೆ ಸಂಸ್ಕೃತಿಯನ್ನು ಪಸರಿಸುತ್ತಿರುವ ಧರ್ಮಗಳಲ್ಲಿ ಹಿಂದೂ ಧರ್ಮವು ಜಗತ್ತಿಗೆ ಮಾದರಿಯಾಗಿದೆ ಎಂದು ಬಸವ ತತ್ವ ಪೀಠದ ಪೀಠಾಧ್ಯಕ್ಷರಾದ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳು ಹೇಳಿದರು.
ನಗರದ ಬಸವನಹಳ್ಳಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಂಘದಿಂದ ಆಯೋಜಿಸಿದ್ದ ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಎಲ್ಲಾ ದೇಶಗಳಿಗೆ ಭಾರತೀಯ ಸಂಸ್ಕೃತಿ ಸಾಮರಸ್ಯ, ಸಂಸ್ಕೃತಿಯ ಮಾರ್ಗದರ್ಶನ ನೀಡುವ ಮಾದರಿಯಾಗಿದೆ. ಭರತ ಖಂಡ, ಭರತವರ್ಷ ಎಂದೆಲ್ಲ ಕರೆಯುವ ನಮ್ಮ ದೇಶವು ಹಲವು ವಿಭಿನ್ನ ಸಂಸ್ಕೃತಿ ಆಚಾರ, ವಿಚಾರಗಳನ್ನು ಒಳಗೊಂಡಿದೆ. ಹಿಂದೂ ಧರ್ಮದಲ್ಲಿ ಶಂಕರಾಚಾರ್ಯರು, ಮಧ್ವಚಾರ್ಯರು ಹಾಗೂ ರಾಮಾನುಜಚಾರ್ಯರು ತಮ್ಮದೇ ಆದ ತತ್ವ ಸಂದೇಶಗಳನ್ನು ಜನತೆಗೆ ನೀಡಿದ್ದಾರೆ ಎಲ್ಲವೂ ವಿಭಿನ್ನತೆಯನ್ನು ಒಳಗೊಂಡಿದೆ ಎಂದರು.
ಭಾರತೀಯ ಸಂಸ್ಕೃತಿ, ಪರಂಪರೆ, ವೇದ ಉಪನಿಷತ್ತು, ವಚನಗಳು, ಆಚರಣೆಗಳು ಎಲ್ಲಾ ದೇಶಗಳಿಗೂ ವಿಶ್ವಗುರುವಾಗುವ ಅರ್ಹತೆ ಪಡೆದಿದೆ. ಹಿಂದೂ ಸಂಸ್ಕೃತಿಯನ್ನು ಧರ್ಮದ ಸರಕನ್ನಾಗಿಸದೆ ಜೀವನದಲ್ಲಿ ಮೌಲ್ಯಯುತವಾಗಿ ಬದುಕುವ ಪರಂಪರೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.
ಹಿಂದೂ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳಿಗೆ ವಿಶೇಷ ಪ್ರಾಧನ್ಯತೆ ಇದೆ. ಆ ನಿಟ್ಟಿನಲ್ಲಿ ಸ್ವಾತಂತ್ರ್ಯ ಚಳುವಳಿಗೆ ಜನರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಒಗ್ಗಟ್ಟಿನ ಮಂತ್ರವನ್ನು ಪಠಿಸುವಂತೆ ಮಾಡಿದರು. ಮಹಾರಾಷ್ಟ್ರ, ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿದವರು ಎಂದು ಸ್ಮರಿಸಿದರು.
ಚಿಕ್ಕಮಗಳೂರು ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷ ಶ್ರೀಕಾಂತ್ ಪೈ ಮಾತನಾಡಿ ಹಿಂದೂಗಳನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಳೆದ ೫೭ ವರ್ಷಗಳಿಂದ ವಿಶ್ವ ಹಿಂದೂ ಪರಿಷದ್ ಮಹಾಸಭಾ ಹಲವು ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಬಾಂಗ್ಲಾ ನುಸುಳುಕೋರರು, ಗೋಹತ್ಯೆ ನಿಷೇಧ, ಲವ್ ಜಿಹಾದ್ ಸೇರಿದಂತೆ ಹಲವು ವಿಚಾರಗಳಿಗೆ ಸಂಘವು ಸರ್ಕಾರವನ್ನು ಒತ್ತಾಯಿಸಿ ಗಮನ ಸೆಳೆದಿದೆ ಎಂದರು.
ಕೋಟೆ ಶ್ಯಾಮ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೮ ವರ್ಷಗಳಿಂದ ನಿರಂತರವಾಗಿ ಹಿಂದೂ ಮಹಾಗಣಪತಿ ಸೇವಾ ಸಂಘದಿಂದ ಗಣೇಶೋತ್ಸವ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯು ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ಗಣಪತಿ ಸೇವಾ ಸಂಘದ ಅಧ್ಯಕ್ಷ ಶಿವಣ್ಣ, ಸೇರಿದಂತೆ ವಿವಿಧ ಸಂಘಟನೆಗಳು ಪ್ರಮುಖರು ಸೇರಿದಂತೆ ಮತ್ತಿತರರು ಇದ್ದರು.

























Discussion about this post