ಶ್ರೇಷ್ಠ ಸಮಾಜಶಾಸ್ತ್ರಜ್ಞೆ, ಸ್ತ್ರೀವಾದಿ ಚಿಂತಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ, ಜಾತಿ ವಿನಾಶ ಚಳವಳಿಯ ಬಹು ಮುಖ್ಯ ಧ್ವನಿ, ಬಹುಜನ ಚಳವಳಿಯ ಮೇರು ಚಿಂತಕರಲ್ಲಿ ಒಬ್ಬರಾಗಿದ್ದ ಗೇಲ್ ಓಂವೆಡ್ತ್ ಅಗಲಿದ್ದಾರೆ.
ಅಮೆರಿಕಾದಲ್ಲಿ ಜನಿಸಿದ ಗೇಲ್ ತಮ್ಮ ಪಿ ಎಚ್ ಡಿ ಅಧ್ಯಯನಕ್ಕೆಂದು ಭಾರತಕ್ಕೆ ಬಂದವರು. ‘ಅಂಬೇಡ್ಕರ್ ಚಿಂತನೆ ಮತ್ತು ಹೋರಾಟ’ದ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದು ಭಾರತದಲ್ಲಿಯೇ ನೆಲೆಸಿ ತಮ್ಮ ಇಡೀ ಬದುಕನ್ನು ದಮನಿತ ಸಮುದಾಯಗಳ ಅಧ್ಯಯನಕ್ಕೆ ತೆತ್ತುಕೊಂಡವರು. ತಮ್ಮ ಪ್ರಖರ ಬೌದ್ಧಿಕತೆಯ ಮೂಲಕ ಅಂಬೇಡ್ಕರ್ ಚಿಂತನೆ ಮತ್ತು ದಲಿತ ಅಧ್ಯಯನವನ್ನು ವಿಶ್ವಮಟ್ಟಕ್ಕೆ ಬೆಳೆಸಿದ ಈ ಮೇರು ಚಿಂತಕಿಗೆ ಈ ದೇಶದ ದಮನಿತ ಸಮುದಾಯಗಳು ಯಾವತ್ತೂ ಋಣಿಯಾಗಿರುತ್ತವೆ.
ಅಂದ್ಹಾಗೆ, ಗೇಲ್ ಓಂವೆಡ್ತ್ ಅವರು ಬುದ್ಧಪೂರ್ವ ಯುಗದಲ್ಲಿ ಜೀವಿಸಿದ್ದು ಬೌದ್ಧಧಮ್ಮವನ್ನು ಮೊದಲಿಗೆ ಪ್ರತಿಪಾದಿಸುವ ಮೂಲಕ ಆದಿಬುದ್ಧ ಎನ್ನಿಸಿದ ಕಸ್ಸಪ ಮಾತಂಗನನ್ನು ಕುರಿತು, The Dalit ಎಂಬ ಇಂಗ್ಲಿಷ್ ಮ್ಯಾಗಜೀನ್ ನಲ್ಲಿ ಪ್ರಕಟಿಸಿದ್ದ Reclaiming Matanga ಎಂಬ ಸಂಶೋಧನಾ ಲೇಖನವನ್ನು ವಡ್ಡಗೆರೆಯವರು ಕನ್ನಡಕ್ಕೆ ಅನುವಾದಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ ಹಂಪಿ ಯಲ್ಲಿ ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ವಡ್ಡಗೆರೆ ನಾಗರಾಜಯ್ಯ ರೂಪಿಸಿದ “ಕರ್ನಾಟಕದ ಆದಿಜಾಂಬವ ಮಾತಂಗ ಪರಂಪರೆ” ಎಂಬ ಪಿಎಚ್.ಡಿ ಮಹಾಪ್ರಬಂಧದಲ್ಲಿಯೂ ಓಂವೆಡ್ತ್ ಅವರ ಚಿಂತನೆಗಳನ್ನು ದಾಖಲಿಸಿದ್ದಾರೆ.
ಓಂ ವೆಡ್ತ್ ಅವರಿಗೆ ೮೧ ವರ್ಷ ವಯಸ್ಸಾಗಿತ್ತು. ನಾಳೆ (ಅ.೨೬) ಸಾಂಗ್ಲಿ ಜಿಲ್ಲೆಯಕಾಸೆಗಾಂವ್ನಲ್ಲಿ ಗೇಲ್ ಓಂ ವೆಡ್ತ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
Discussion about this post