ಚಿಕ್ಕಮಗಳೂರು : ತಾಲ್ಲೂಕು ಕುರುಬರ ಸಂಘದ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪುಟ್ಟೇಗೌಡ ಟೀಕಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸ್ಥಳೀಯ ಶಾಸಕರ ವಿರುದ್ದ ನಡೆದ ಪ್ರತಿಭಟನೆಯ ಉದ್ದೇಶ ರಾಜಕೀಯ ಬಿಟ್ಟರೇ ಬೇರೆನು ಇಲ್ಲ, ಆದರೆ ಕುರುಬರ ಸಂಘದ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುವ ಅಗತ್ಯವೇನಿತ್ತು, ಶಾಸಕರು ಪ್ರಶ್ನಿಸಿರುವುದು ಸಿದ್ದರಾಮಯ್ಯವನರನ್ನೇ ವಿನಃ ಸಮಾಜಕ್ಕಲ್ಲ, ಅವರು ದೇಶದ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳನ್ನು ಸಂಬೋಧಿಸುವ ರೀತಿ ಅವರ ಸಂಸ್ಕೃತಿಯನ್ನು ವ್ಯಕ್ತಪಡಿಸುತ್ತದೆ ಎಂದು ದೂಷಿಸಿದರು.
ಜಾತಿ ರಾಜಕೀಯ ಮಾಡುವ ಉದ್ದೇಶದಿಂದಲೇ ಜಿಲ್ಲೆಯ ಕಾಂಗ್ರೆಸ್ ನಾಯಕರು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಉಂಡ ಮನೆಗೆ ಎರಡು ಬಗೆದು ಇಂದು ಅವರ ವಿರುದ್ದ ಪ್ರತಿಭಟನೆ ಕೈಗೊಂಡಿದ್ದಾರೆ ಎಂದು ಟೀಕಿಸಿದರು.
ಶಾಸಕರು ಜಾತಿ ಸಂಘರ್ಷ ಮಾಡುವವರಲ್ಲ ಬದಲಾಗಿ ಪ್ರೀತಿ, ವಿಶ್ವಾಸದ ರಾಜಕಾರಣ ನಡೆಸುವವರು, ಕನಕದಾಸ ಜಯಂತಿ ಆಚರಣೆ ಜತೆಗೆ ಕಾಗಿನೆಲೆ ಪೀಠಕ್ಕೆ ಅನುದಾನ ನೀಡಿದ್ದು ಬಿಜೆಪಿ ಅವಧಿಯಲ್ಲೇ ಅಂತಾ ಸಮರ್ಥನೆ ಮಾಡಿಕೊಂಡರು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಸಕರ ವಿರುದ್ದ ಜಾತಿ ಹೆಸರಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಅವರು ಎಂದಿಗೂ ಜಾತಿ ವಿರೋಧಿಯಲ್ಲ ಎಂದರು.
ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್ ಆರ್ಥಿಕ ಸಮತೋಲನಕ್ಕಾಗಿ ಏರಿಕೆಯಾಗಿದ್ದ ತೈಲ ಬೆಲೆಯ ತೆರಿಗೆಯನ್ನು ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಡಿಮೆಗೊಳಿಸುವ ಮೂಲಕ ತೈಲ ಬೆಲೆಯನ್ನು ಇಳಿಕೆ ಮಾಡಿರುವುದು ಸ್ವಾಗತಾರ್ಹ ಎಂದು ಸಮರ್ಥನೆ ಮಾಡಿಕೊಂಡರು. ಪಂಜಾಬ್ ಹೊರತುಪಡಿಸಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತೈಲದರವನ್ನು ಇಳಿಕೆ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ, ಆಲ್ದೂರು ಮಂಡಲದ ಹಿಂದುಳಿದ ವರ್ಗದ ಮೋರ್ಚಾದ ರಾಜು, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಸುಧೀರ್ ಇದ್ದರು.
Discussion about this post