ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣ ಸಂಬಂಧ ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ತಜ್ಞರ ಜೊತೆ ಸಭೆ ಮಾಡಲಾಗಿದೆ. ಅವರ ಸಲಹೆ, ಪರಿಕರ ಗಳ ಖರೀದಿ ಇನ್ನಿತರೆ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಇಎಸ್ಎ ಪ್ಲಾಂಟ್ ನಿರ್ಮಾಣ ಕಾಮಗಾರಿ ಪ್ಲಾಸ್ಟಿಂಗ್ ಹಂತದಲ್ಲಿದೆ. ಮುಂದಿನ ೧೦ ರಿಂದ ೧೨ ದಿನಗಳಲ್ಲಿ ಅದು ಅನುಷ್ಟಾನಗೊಳ್ಳಲಿದೆ. ಶೃಂಗೇರಿಯಲ್ಲಿ ಪ್ಲಾಂಟ್ ನಿರ್ಮಾಣ ಗೋಡೆ ಹಂತಕ್ಕೆ ಬಂದಿದ್ದು, ಮುಂದಿನ ೨೫ ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ ಎಂದರು.
ಕಡೂರಿನಲ್ಲಿ ಸಿವಿಲ್ ಕಾಮಾರಿ ಒಂದು ಹಂತಕ್ಕೆ ಬಂದಿದೆ. ಆಗಸ್ಟ್ ೨೦ ರವೇಳಗೆ ಯಂತ್ರೋಪಕರಣಗಳು ಚೆನ್ನೈಗೆ ಬರಲಿದ್ದು, ಪ್ರತಿದಿನ ಆ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸೆಪ್ಟೆಂಬರ್ ವೇಳೆಗೆ ಅದೂ ಸಹ ಅನುಷ್ಠಾನಗೊಳ್ಳಲಿದೆ. ಉಳಿದಂತೆ ತರೀಕೆರೆ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರಗಳಲ್ಲಿ ಸಿವಿಲ್ ಕಾಮಗಾರಿಗಳನ್ನು ನಡೆಸಲು ಜಿ.ಪಂ.ಗೆ ಅನುಮೋದನೆ ಕೊಡಲಾಗಿದೆ. ಕೆಆರ್ಎಡಿಎಲ್ ಸಂಸ್ಥೆ ಕಾಮಗಾರಿಯನ್ನು ಆರಂಭಿಸಿದ್ದು, ಕನಿಷ್ಟ ೨೦ ದಿನಗಳ ಒಳಗಾಗಿ ಕಾಮಗಾರಿ ಸಿವಿಲ್ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ್ಲ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಕ್ಸಿಜನ್ ಪ್ಲಾಂಟ್ ಬರಲೇ ಬೇಕೆಂಬ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಜೊತೆಗೆ ರಾಜ್ಯ ಸರ್ಕಾರಕ್ಕೆ ಏನೇನು ಅಗತ್ಯವಿದೆ ಎನ್ನುವುದರ ಕುರಿತು ಮಾಹಿತಿ ನೀಡಿದ್ದೇವೆ. ಒಂದು ತಿಂಗಳಿಗೆ ಅಗತ್ಯವಿರುವಷ್ಟು ಔಷಧಿಯನ್ನು ಖರೀದಿ ಮಾಡಲು ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.
ಖಾಸಗಿ ಸಹಭಾಗಿತ್ವದಲ್ಲಿ ಆಕ್ಸಿಜನ್ ರೀ ಫಿಲ್ಲಿಂಗ್ ಪ್ಲಾಂಟ್ ಅಳವಡಿಸಲು ಉದ್ದೇಶಿಸಲಾಗಿದ್ದು, ಯಾರಾದರೂ ಇಷ್ಟಪಟ್ಟಲ್ಲಿ ಜಮೀನು ಒದಗಿಸುತ್ತೇವೆ. ಆದಷ್ಟು ಬೇಗ ಒಂದು ಪ್ಲಾಂಟ್ ಹಾಕುವ ಕೆಲಸ ನಿಮ್ಮಿಂದಾಗಬೇಕು ಎಂದು ಕೈಗಾರಿಕೋದ್ಯಮಿಗಳ ಸಂಘಟನೆಗೆ ತಿಳಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಹೇಳಿದ್ದಾರೆ ಎಂದರು.
ಕೇರಳ, ಮಹರಾಷ್ಟ್ರ ಗಡಿ ಭಾಗದಲ್ಲಿ ನಿರ್ಬಂಧಗಳು ಈಗಾಗಲೇ ಇರುವುದರಿಂದ ಈ ವಾರಕ್ಕೆ ನಮ್ಮ ಜಿಲ್ಲೆಗೆ ಪ್ರವಾಸಿಗರ ಭೇಟಿಗೆ ಸಂಬಂಧಿಸಿದಂತೆ ಏನೂ ತೀರ್ಮಾನ ಮಾಡಿಲ್ಲ. ರಾಜ್ಯ ಸರ್ಕಾರದ ಆದೇಶದಲ್ಲೂ ಈ ಎರಡು ರಾಜ್ಯ ಬಿಟ್ಟರೆ ಬೇರಾವ ರಾಜ್ಯದ ಪ್ರವಾಸಿಗರಿಗೂ ನಿರ್ಬಂಧಗಳನ್ನು ಹಾಕಿಲ್ಲ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಪಾಸಿಟೀವ್ ಪ್ರಕರಣಗಳ ಕುರಿತು ಅಧ್ಯಯನ ಮಾಡುತ್ತಿದ್ದೇವೆ. ನಿನ್ನೆ ಸಹ ೯೭ ಪ್ರಕರಣ ವರದಿಯಾಗಿದೆ. ಆದರೂ ಒಂದೇ ಕಡೆ ಹೆಚ್ಚಿನ ಪ್ರಕರಣಗಳು ಎಲ್ಲೂ ಕಂಡುಬಂದಿಲ್ಲವಾದರೂ ಅದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.
ಎನ್ಆರ್ಪುರ, ಕೊಪ್ಪ ಭಾಗದಲ್ಲಿ ಸ್ವಲ್ಪ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಕ್ವಾರೆಂಟೈನ್ ಸೆಂಟರ್ಗೆ ಕರೆತರಲಾಗುತ್ತಿದೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದರು. ಮಕ್ಕಳಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ ಎಂದು ಕೆಲವು ತಜ್ಞರ ಅಭಿಪ್ರಾಯವಾಗಿದೆ. ಒಟ್ಟಾರೆ ಪಾಸಿಟೀವ್ ಪ್ರಕರಣಗಳಲ್ಲಿ ಶೇ.೧೨ ರಷ್ಟು ಮಕ್ಕಳ ಮೇಲೆ ಪರಿಣಾಮ ಬೀರಬಹುದು, ಮೊದಲನೇ ಮತ್ತು ಎರಡನೇ ಅಲೆ ಸಂದರ್ಭದಲ್ಲೂ ಇಷ್ಟೇ ಪ್ರಮಾಣದಲ್ಲಿ ಮಕ್ಕಳಿಗೆ ಸೋಂಕು ತಗುಲಿದೆ. ಎರಡನೇ ಅಲೆಯಲ್ಲಿ ಸುಮಾರು ೫ ಸಾವಿರ ಮಕ್ಕಳಿಗೆ ಸೋಂಕು ತಗುಲಿದರೂ ಒಂದು ಮಗು ಸಹ ಐಸಿಯುಗೆ ಹೋಗಲಿಲ್ಲ. ಮೂರನೇ ಅಲೆಯಲ್ಲೂ ಮಕ್ಕಳಿಗೆ ಸೋಂಕು ತಗುಲಿದರೂ ಹೆಚ್ಚಿನ ತೊಂದರೆ ಆಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ೫೦ ಐಸಿಯು ಬೆಡ್ಗಳು, ತಾಲ್ಲೂಕು ಕೇಂದ್ರಗಳಲ್ಲಿ ಕನಿಷ್ಠ ೨೦ ಐಸಿಯು, ವೆಂಟಿಲೇಟರ್ ಬೆಡ್ಗಳನ್ನ ಅಲವಡಿಸಲು ಯೋಜಿಸಲಾಗಿದ್ದು, ಅದಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ೧೫ ಬೆಡ್ಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳ ಐಸಿಯೂವನ್ನು ಹೇಗೆ ಬಳಸಬೇಕು ಎನ್ನುವ ಕುರಿತು ಸಿಬ್ಬಂದಿಗಳಿಗೆ ತರಬೇತಿ ಕೊಡುತ್ತಿದ್ದೇವೆ ಎಂದರು.
ಅಸ್ಸಾಂ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಕಾರ್ಮಿಕರು ಇನ್ನಿತರರು ಬರುತ್ತಿದ್ದಾರೆ. ಸಧ್ಯದ ಪರಿಸ್ಥಿತಿಯಲ್ಲಿ ಕೇರಳ, ಮಹರಾಷ್ಟ್ರ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ನೆಗೆಟೀವ್ ವರದಿ ಇರಬೇಕು ಎಂದು ನಿರ್ಬಂಧ ಹಾಕಿದ್ದೇವೆ. ಬೇರೆ ರಾಜ್ಯಗಳಿಂದಲೂ ಕೋವಿಡ್ ಹರಡುತ್ತಿದೆ ಎನ್ನುವ ಮುನ್ಸೂಚನೆಗಳು ನಮ್ಮಲ್ಲಿ ಇಲ್ಲ. ಹಾಗೇನಾದರೂ ಇದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

























Discussion about this post