ಚಿಕ್ಕಮಗಳೂರು : ನವೆಂಬರ್ ೧೪ ರಂದು ಶೃಂಗೇರಿ ಸಮೀಪದಲ್ಲಿರುವ ಹರಿಹರಪುರದಲ್ಲಿರುವ ಪ್ರಬೋದಿನಿ ಗುರುಕುಲದ ನೂತನ ಛಾತ್ರ ಪ್ರವೇಶಕ್ಕೆ ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು ಭಾಗವಹಿಸಿ ಮಕ್ಕಳಿಗೆ ಪ್ರಥಮ ಪಾಠ ಪ್ರವಚನ ನೀಡಲಿದ್ದಾರೆ ಎಂದು ಪ್ರಭೋದಿನಿ ಗುರುಕುಲದ ಸಲಹಾ ಮಂಡಳಿ ಸದಸ್ಯ ಮಲ್ಲಿಕಾರ್ಜುನ್ ರಾವ್ ತಿಳಿಸಿದರು.
ವೇದ, ವಿಜ್ಞಾನ, ಯೋಗ, ಕೃಷಿ ಒಳಗೊಂಡಂತೆ ವಿಶೇಷ ಕೌಶಲ್ಯವನ್ನು ನೀಡುವ ಕೇಂದ್ರ ಇದಾಗಿದ್ದು ಪಂಚಮುಖಿ ಶಿಕ್ಷಣವನ್ನು ನೀಡಲಾಗುತ್ತಿದೆ. ಪ್ರತಿ ವರ್ಷದಂತೆ ಇಲ್ಲಿನ ಪ್ರಥಮ ಶಾಲಾ ಪ್ರವೇಶವಾದಾಗ ಪಾಠ ಪ್ರವಚನಕ್ಕೆ ಮಠ, ಮಂದಿರಗಳ ಪೂಜ್ಯ ಶ್ರೀಗಳನ್ನು ಆಹ್ವಾನಿಸುವುದು ವಾಡಿಕೆ ಅದರಂತೆ ಈ ಬಾರಿ ಪ್ರವೇಶೋತ್ಸವಕ್ಕೆ ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳನ್ನು ಆಹ್ವಾನಿಸಲಾಗಿದೆ. ಅವರುಗಳು ವಿದ್ಯಾರ್ಥಿಗಳಿಗೆ ಪ್ರಥಮ ಪಾಠ ಹಾಗೂ ಆರ್ಶಿವಚನ ನೀಡಲಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಇಲ್ಲಿ ಪ್ರಸ್ತುತ ವಿವಿಧ ಜಿಲ್ಲೆಗಳಿಂದ ಆಯ್ಕೆಯಾಗಿರುವ ೧೦೮ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು ೬ ನೇ ತರಗತಿ ಪೂರೈಸಿ ಬಂದ ಗಂಡು ಮಕ್ಕಳಿಗೆ ೧೨ ವರ್ಷದ ಕಾಲ ಗುರುಕುಲ ಮಾದರಿಯ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ವಿಶೇಷವಾಗಿ ವೇದ, ಸಂಸ್ಕೃತ, ಕೃಷಿ, ಯೋಗ, ತರ್ಕಶಾಸ್ತ್ರ ಪುರಾಣ, ಉಪನಿಷತ್ತುಗಳ ಜತೆಗೆ ಇತಿಹಾಸ, ವಿಜ್ಞಾನ, ಹಿಂದಿ, ಕಂಪ್ಯೂಟರ್, ಆಂಗ್ಲಭಾಷೆಗಳನ್ನು ಕಲಿಸಲಾಗುತ್ತದೆ ಎಂದು ತಿಳಿಸಿದರು.
ನ. ೧೪ ರ ಭಾನುವಾರದ ಕಾರ್ಯಕ್ರಮವು ಪ್ರಭೋದಿನಿ ಟ್ರಸ್ಟ್ ನಿರ್ವಾಹಕ ರಾಜ್ಗೋಪಾಲ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸ್ಟೆಪ್ಪಿಂಗ್ ಸ್ಟೋನ್ ಅಂಡ್ ಸಮ್ಮಿಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಎಸ್.ರಮೇಶ್, ಆರ್ಎಸ್ಎಸ್ನ ಕೃಷ್ಣಪ್ರಸಾದ್, ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗುರುಕುಲದ ಸಲಹಾ ಮಂಡಳಿ ಸದಸ್ಯ ದೀಪಕ್ ದೊಡ್ಡಯ್ಯ ಉಪಸ್ಥಿತರಿದ್ದರು.
Discussion about this post