ಚಿಕ್ಕಮಗಳೂರು : ಶ್ರಮಜೀವಿಗಳಾಗಿ ನಗರವನ್ನು ಸುಂದರ ಹಾಗೂ ಸದಾ ಸ್ವಚ್ಚವಾಗಿರಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಶ್ರಮ ಅಪಾರವಾದುದು ಅವರ ಸರ್ವತೋಮುಖ ಅಭಿವೃದ್ಧಿ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ನಗರಸಭೆ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೯ನೇ ವರ್ಷದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪೌರಕಾರ್ಮಿಕರು ಶ್ರಮಜೀವಿಗಳು, ಪರಿಸರವನ್ನು ಸ್ವಚ್ಚಗೊಳಿಸುವ ಮೂಲಕ ಜನರ ಹಾಗೂ ನಗರದ ನೈರ್ಮಲ್ಯ ಕಾಪಾಡುತ್ತಿರುವ ಅವರ ಪ್ರಾಮಾಣಿಕ ಸೇವೆ ಸದಾಕಾಲ ಸ್ಮರಿಸುವಂತದ್ದು, ಪೌರಕಾರ್ಮಿಕರ ಸರ್ವತೋಮುಖ ಅಭಿವೃದ್ಧಿ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರವು ಪೌರಕಾರ್ಮಿಕರ ಸಮಗ್ರ ಏಳಿಗೆಗಾಗಿ ಹಲವು ಸವಲತ್ತುಗಳನ್ನು ನೀಡಿದೆ. ಪೌರಕಾರ್ಮಿಕರಿಗಾಗಿ ನಿವೇಶನ, ಮನೆ ನಿರ್ಮಾಣ, ವಿಶೇಷ ಭತ್ಯೆ, ಮಕ್ಕಳ ವಿದ್ಯಾಭಾಸ್ಯಕ್ಕೆ ನೆರವು, ನೀಡುತ್ತಿದೆ. ಜತೆಗೆ ಸರ್ಕಾರದ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ಮೂಲಕ ಅವರ ಸಮಸ್ಯೆಗಳನ್ನು ಆಲಿಸುವ, ಪ್ರೋತ್ಸಾಹಿಸಿ ಗೌರವಿಸುವ ಕೆಲಸ ಮಾಡುತ್ತಿದೆ ಎಂದರು.
ನಗರಸಭಾ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಮುಂದಿನ ವಾರದೊಳಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಅವರು ಪೌರಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ಅವರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸಲಿದೆೆ. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಆಯುಕ್ತರ ಮೂಲಕ ಅಥವಾ ನೇರವಾಗಿ ಭೇಟಿಯಾಗುವ ಮೂಲಕ ಅವುಗಳನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ ಪೌರಕಾರ್ಮಿಕರು ಹಾಗೂ ಪೊಲೀಸ್ ಇಲಾಖೆ ಸಮಾನ ರೀತಿಯಲ್ಲಿ ಕೆಲಸ ನಿರ್ವಹಿಸುವಂತವರು. ತಾವು ಮಾಡುವ ಕೆಲಸವನ್ನು ಕೆಲ ದಿನದ ಮಟ್ಟಿಗೆ ಸ್ಥಗಿತಗೊಳಿಸಿದ್ದೇ ಆದಲ್ಲಿ ಸಮಾಜದಲ್ಲಿ ಅಸ್ತವ್ಯಸ್ತ ಉಂಟಾಗಲಿದೆ. ಆನಿಟ್ಟಿನಲ್ಲಿ ಪೌರಕಾರ್ಮಿರನ್ನು ಪ್ರಾಮಾಣಿಕತೆ, ಕಷ್ಟಸಹಿಷ್ಣತೆ ಸದಾ ಸ್ಮರಿಸುವಂತಹದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೋನಾ ವಾರಿಯರ್ಸ್ಗಳಾಗಿ ನಗರವನ್ನು ಸ್ವಚ್ಚಗೊಳಿಸುವ ಜತೆಗೆ ಜನರ ಆರೋಗ್ಯವನ್ನು ಕಾಪಾಡುವ ಮೂಲಕ ಕೋವಿಡ್ ನಿಯಂತ್ರಿಸುಲ್ಲಿ ಪೊಲೀಸ್ ಇಲಾಖೆಯೊಂದಿಗೆ ಉತ್ತಮವಾಗಿ ಸ್ಪಂದಿಸಿ ಕಾರ್ಯನಿರ್ವಹಿಸಿದ್ದೀರಿ, ಜತೆಗೆ ಗಿರಿ ಸ್ವಚ್ಚತಾ ಅಭಿಯಾನದ ವೇಳೆಯೂ ಪೌರಕಾರ್ಮಿಕರು ಕೈಜೋಡಿಸಿದ್ದು ಅಭಿಯಾನ ಯಶಸ್ಸಿಗೆ ಕಾರಣರಾಗಿದ್ದೀರಿ ಎಂದರು.
ಪೌರಕಾರ್ಮಿಕರು ತಮ್ಮ ಆರೋಗ್ಯದ ಜತೆಗೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್ ಸಿ. ಮಾತನಾಡಿ ವರ್ಷವೀಡಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಒಂದು ದಿನದ ಮಟ್ಟಿಗೆ ಬಿಡುವು ನೀಡಿ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಹಬ್ಬದ ಸಂಭ್ರಮ ತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿವಿಧ ಬಗೆಯ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಯೋಜನೆ ರೂಪಿಸಬೇಕು ಎಂದರು.
ದೇಶದ ಸ್ವಚ್ಚನಗರಗಳಲ್ಲಿ ಅನುಸರಿಸುವ ತ್ಯಾಜ್ಯ ವಿಲೇವಾರಿ ವಿಧಾನ, ಸ್ವಚ್ಚತೆ ಸೇರಿದಂತೆ ಹೆಚ್ಚಿನ ತಿಳುವಳಿಕೆಗಾಗಿ ಪೌರಕಾರ್ಮಿಕರಿಗೆ ವರ್ಷದಲ್ಲಿ ಒಮ್ಮೆಯಾದರೂ ಪ್ರವಾಸ ಕೈಗೊಳ್ಳಬೇಕು. ಈ ಮೂಲಕ ಸಾರ್ವಜನಿಕರಲ್ಲಿಯೂ ಸ್ವಚ್ಚತೆ ಅರಿವು ಮೂಡಿಸಿ ನಗರವನ್ನು ಮಾದರಿ ಸ್ವಚ್ಚನಗರವನ್ನಾಗಿಸಲು ಸಾರ್ವಜನಿರಕರು ಕೈಜೋಡಿಸಬೇಕು ಎಂದು ಕೇಳಿಕೊಂಡರು.
ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ಪೌರಕಾರ್ಮಿಕರು ನಗರದ ತಂದೆ-ತಾಯಿಗಳಿದ್ದAತೆ ಅವರ ಏಳಿಗೆಗಾಗಿ ಸರ್ಕಾರವು ಹಲವು ಸವಲತ್ತುಗಳನ್ನು ನೀಡುತ್ತಿದೆ. ಉಚಿತ ಆರೋಗ್ಯ ತಪಾಸಣೆ, ಸಮವಸ್ತç್ತ, ಕೈಗವಸು, ಬೂಟ್, ರೈನ್ಕೋಟ್ ಸೇರಿದಂತೆ ಹಲವು ಪರಿಕರಗಳನ್ನು ನೀಡಿದೆ. ಜತೆಗೆ ೭ ಸಾವಿರ ರೂಗಳ ವಿಶೇಷ ಭತ್ಯೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ನಗರದ ಪೌರಕಾರ್ಮಿಕರ ಕುಟುಂಬಗಳು ವಾಸವಿರುವ ಸರ್ಕಾರದ ವಸತಿ ಗೃಹಗಳನ್ನು ಖಾಯಂ ನಿವಾಸಗಳಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು, ಜತೆಗೆ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರು ಕಾರ್ಮಿಕರನ್ನು ಖಾಯಂಗೊಳಿಸುವ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು. ನಗರದ ಕಲ್ಲುದೊಡ್ಡಿಯಲ್ಲಿ ಪೌರಕಾರ್ಮಿಕರಿಗೆ ೬೯ ಮನೆಗಳ ನಿರ್ಮಾಣವಾಗುತ್ತಿದ್ದು ಮುಂದಿನ ೩ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಮನೆ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.
ಪೌರಕಾರ್ಮಿಕರು ತಮ್ಮ ವೃತ್ತಿ ಪರತೆಯನ್ನು ಮರೆಯಬಾರದು, ನಗರವನ್ನು ಸ್ವಚ್ಚ, ಸುಂದರವಾಗಿಸವ ಮೂಲಕ ದೇಶದಲ್ಲಿ ಮಾದರಿ ನಗರವನ್ನಾಗಿಸಲು ಶ್ರಮಿಸಬೇಕು. ಹೊಸದಾಗಿ ನಿರ್ಮಾಣವಾಗುತ್ತಿರುವ ಜಿಪ್ಲಸ್ ೨ ಮಾದರಿಯ ಮನೆ ನಿರ್ಮಾಣದಲ್ಲಿ ಪೌರಕಾರ್ಮಿಕರಿಗೆ ಮೊದಲ ಆಧ್ಯತೆ ನೀಡಲಾಗುವುದು ಎಂದು ತಿಳಿಸಿದರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಅಣ್ಣಯ್ಯ ಪೌರಕಾರ್ಮಿರನ್ನು ಉದ್ದೇಶಿಸಿ ಮಾತನಾಡಿದರು. ಅವರಿಗಾಗಿ ನಿರ್ಮಾಣವಾಗುತ್ತಿರುವ ಮನೆ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಪೌರಕಾರ್ಮಿಕರ ದಿನಾಚರಣೆ ವಿಶೇಷವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪದಕ ಹಾಗೂ ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಲಾಯಿತು. ಜತೆಗೆ ವಿವಿಧ ಯೋಜನೆ ಅಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಚೆಕ್ ವಿತರಣೆ ಮತ್ತು ಉಪ್ಪಳ್ಳಿಯ ಮುಕ್ತಿಧಾಮ ಚಿತಾಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಾದ ಭಾಗ್ಯಮ್ಮ, ಗೌರಮ್ಮ ಅವರನ್ನು ಸನ್ಮಾನಿಸಲಾಯಿತು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಪೌರಕಾರ್ಮಿಕರಿಗೆ ಇಲಾಖೆಯಿಂದ ದೊರತೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರ ಆಶ್ರಯ ಸಮಿತಿ ಸದಸ್ಯ ನವೀನ್, ನಗರಸಭೆ ಇಂಜಿನಿಯರ್ ಚಂದನ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ, ನಗರಸಭೆ ಸಮುದಾಯ ಸಂಘಟನ ಅಧಿಕಾರಿ ಚಂದ್ರಶೇಖರ್, ಎಸ್.ವೆಂಕಟೇಶ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಮೂರ್ತಿ, ಕಂದಾಯಾಧಿಕಾರಿ ಬಸವರಾಜ್, ಯೋಜನಾ ನಿರ್ದೇಶಕ ಮನೋಹರ್, ಪೌರಸೇವಾ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post