ಚೆನ್ನೈ: ವಿಪರೀತ ಮಳೆ, ಪ್ರವಾಹದಿಂದ ನಲುಗಿರುವ ತಮಿಳುನಾಡಿನಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಇಂದು ಮತ್ತು ನಾಳೆ ಕೂಡ ಭಾರಿ ವರ್ಷಧಾರೆ ಆಗುವ ಮನ್ಸೂಚನೆಯನ್ನು ಭಾರತೀಯ ಹವಮಾನ ಇಲಾಖೆ (ಐಎಂಡಿ) ನೀಡಿದೆ. 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. 12 ಜಿಲ್ಲೆಗಳಲ್ಲಿ ಎರಡು ದಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಪಶ್ಚಿ ಮತ್ತು ವಾಯವ್ಯ ದಿಕ್ಕಿನತ್ತ ಚಲಿಸುತ್ತಿದೆ. ಹೀಗಾಗಿ ರಾಜ್ಯದ ಉತ್ತರ ಕರಾವಳಿ ಮತ್ತು ಪುದುಚೇರಿ, ಕರೈಕಲ್ನಲ್ಲಿ ಗುರುವಾರ ಭಾರಿ ಮಳೆ ಮುಂದುವರಿಯಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಈ ಮಧ್ಯೆ, ತಮಿಳುನಾಡಿನ ಡಿಎಂಕೆ ಸರ್ಕಾರವು ಪ್ರವಾಹ ಎಚ್ಚರಿಕೆ ನೀಡಲು 434 ಕಡೆ ಸೈರನ್ ಟವರ್ಗಳನ್ನು ನಿರ್ಮಿಸಿದೆ. ಮೊಬೈಲ್ಗಳ ಸಿಗ್ನಲ್ ಸಿಗುವಂತೆ ಖಾತರಿ ಪಡಿಸಲು ದೂರಸಂಪರ್ಕ ಕಂಪನಿಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ 50 ಸಂಚಾರಿ ಟವರ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಪ್ರವಾಹ ಪೀಡಿತವಾಗಿರುವ ರಾಜಧಾನಿ ಚೆನ್ನೈನಲ್ಲಿ 46 ಬೋಟ್ಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ತಗ್ಗು ಪ್ರದೇಶದಲ್ಲಿ ನಿಂತಿರುವ ನೀರನ್ನು ಹೊರಹಾಕಲು 500 ದೈತ್ಯ ಶಕ್ತಿಯ ಮೋಟಾರ್ಪಂಪ್ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಚೆನ್ನೈ ಮಹಾನಗರ ಪಾಲಿಕೆ ಆಯುಕ್ತ ಗಗನದೀಪ್ ಸಿಂಗ್ ತಿಳಿಸಿದ್ದಾರೆ.
ಪ್ರವಾಹ ಪೀಡಿತ ಸ್ಥಳಕ್ಕೆ ಸಿಎಂ ಭೇಟಿ:
ಪ್ರವಾಹ ಪೀಡಿತ ಪ್ರದೇಶಗಳಲ್ಲಿ 160 ಶಿಬಿರಗಳನ್ನು ತೆರೆಯಲಾಗಿದೆ. ‘ಅಮ್ಮಾ’ ಕ್ಯಾಂಟೀನ್ ಮೂಲಕ ಆಹಾರ ಪೂರೈಕೆ ಮಾಡಲಾಗುತ್ತಿದೆ. ಪ್ರವಾಹ ಉಂಟಾಗಿದ್ದ ಸ್ಥಳಗಳಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆಯ ಭರವಸೆಯನ್ನು ನೀಡಿದ್ದಾರೆ.
ಶೇ. 45ರಷ್ಟು ಅಧಿಕ ಮಳೆ:
ತಮಿಳುನಾಡಿನಲ್ಲಿ ನವೆಂಬರ್ ತಿಂಗಳು ವಾಡಿಕೆಯಂತೆ ಸುರಿಯಬೇಕಿದ್ದ ಮಳೆಗಿಂತ ಶೇ. 45ರಷ್ಟು ಅಧಿಕ ವರ್ಷಧಾರೆ ಈಗಾಗಲೇ ಸುರಿದಿದೆ. ಚೆನ್ನೈನಲ್ಲಿ ಬುಧವಾರ ಬೆಳಗ್ಗೆಯ ವರೆಗೆ 14.7 ಎಂ.ಎಂ. ಮಳೆ ಆಗಿದೆ. ನಾಗಪಟ್ಟಣಂ ಮತ್ತು ಕರೈಕಲ್ನಲ್ಲಿ 24.5 ಮತ್ತು 27.2 ಸೆಂಟಿ ಮೀಟರ್ ಮಳೆ ಸುರಿದಿದೆ.
ಸತ್ತವರ ಸಂಖ್ಯೆ 5ಕ್ಕೆ ಏರಿಕೆ:
ಮಳೆಯ ಅನಾಹುತದಿಂದ ರಾಜ್ಯದ ವಿವಿಧೆಡೆ ಸತ್ತವರ ಸಂಖ್ಯೆ ಐದಕ್ಕೆ ಏರಿದೆ. 530 ಮನೆಗಳಿಗೆ ಹಾನಿ ಆಗಿದೆ. 1,700 ಮಂದಿ ನಿರಾಶ್ರಿತರ ಶಿಬಿರದಲ್ಲಿ ಇದ್ದಾರೆ.
Red Alert For Heavy Rainfall Flood-Hit Tamil Nadu
ಇದನ್ನು ಓದಿ: ಚೆನ್ನೈನಲ್ಲಿ ಕುಂಭದ್ರೋಣ ಮಳೆಗೆ ರಸ್ತೆಯಲ್ಲಿ ಪ್ರವಾಹ
ಇದನ್ನು ಓದಿ: Heavy rain: ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ
Discussion about this post