ಕಾಬೂಲ್: ಅಫ್ಘಾನಿಸ್ತಾನ ದೇಶವನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಂಡ ತಾಲಿಬಾನ್ ಮೊದಲ ಬಾರಿಗೆ ಸುದ್ದಿ ಗೋಷ್ಠಿ ನಡೆಸಿ, ದೇಶವನ್ನುದ್ದೇಶಿಸಿ ಮಾತನಾಡಿದೆ.
ಬಾಯಿಯಲ್ಲಿ ”ನೆರೆಹೊರೆಯ ರಾಷ್ಟ್ರಗಳ ವಿರುದ್ಧ ದುಷ್ಕೃತ್ಯ ಎಸಗಲು ನಮ್ಮ ನೆಲವನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದೇವೆ. ಅಫ್ಘಾನಿಸ್ತಾನ ವಿಮೋಚನೆ ಆಗಿರುವ ಈ ಸಂದರ್ಭದಲ್ಲಿ ತಾಲಿಬಾನ್ ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವುದಕ್ಕೆ ಬಯಸುವುದಿಲ್ಲ. ಅಂತರಾಷ್ಟ್ರೀಯ ಸಮುದಾಯವು ನಮ್ಮ ಸರ್ಕಾರವನ್ನು ಗುರುತಿಸಬೇಕು” ಎಂದು ಘೋಷಿಸಿದೆ.
ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ “ಕಾಬೂಲ್ನಲ್ಲಿ ಇರುವ ವಿದೇಶಿ ದೂತವಾಸ ಕಚೇರಿಗಳು, ರಾಯಭಾರಿ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಭದ್ರತೆ ಮತ್ತು ಸುರಕ್ಷತೆಗೆ ಧಕ್ಕೆ ಆಗುವುದಿಲ್ಲ ಎಂಬ ಭರವಸೆ ನೀಡುತ್ತೇವೆ. ಹಿಂದಿನ ಸರ್ಕಾರ ಅಸಮರ್ಥವಾಗಿತ್ತು. ಅವರಿಗೆ ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಾವು ಈಗ ಎಲ್ಲಾ ವಿದೇಶಿ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತೇವೆ. ನಾವು ದೇಶದ ಒಳಗೆ ಅಥವಾ ಹೊರಗೆ ಶತ್ರುಗಳನ್ನು ಹುಡುಕುವುದಿಲ್ಲ,” ಎಂದು ಶಾಂತಿಮಂತ್ರದ ಮಾತಾಡಿದ್ದಾರೆ.
ಇಸ್ಲಾಮಿಕ್ ಕಾನೂನಿನ ಚೌಕಟ್ಟಿನ ಒಳಗೆ ಮಹಿಳೆಯರ ರಕ್ಷಣೆ ಮರ್ತು ಸುರಕ್ಷತೆಗೆ ನಮ್ಮ ಸಂಘಟನೆ ಒತ್ತು ನೀಡಿದ್ದು ಮಹಿಳೆಯರು ಕಾರ್ಯಶೀಲರಾಗಿರಬೇಕು, ಆದರೆ ಇಸ್ಲಾಮಿಕ್ ಚೌಕಟ್ಟು ಮೀರಬಾರದು ಎಂದು ಎಚ್ಚರಿಸಿದೆ.
ಇಪ್ಪತ್ತು ವರ್ಷಗಳ ಹಿಂದೆಯೇ ಅಫ್ಘಾನಿಸ್ತಾನ ಮುಸ್ಲಿಂ ರಾಷ್ಟ್ರವಾಗಿರಬಹುದು, ಅಥವಾ ಇವತ್ತೇ ಆಗಿರಬಹುದು ಆದರೆ ಇವತ್ತಿನ ಪರಿಸ್ಥಿತಿ ಭಿನ್ನವಾಗಿದೆ. ಸರ್ಕಾರ ರಚನೆ ನಂತರ ಕಾನೂನು ರಚನೆ ಕುರಿತು ಮಾತನಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
Discussion about this post