ಕನ್ನಡ ನಾಡಿ ಸುದ್ಧಿಜಾಲ: ರಾಷ್ಟ್ರಪತಿ ರಾಮನಾಥ ಕೋವಿಂದ್ 1945ರ ಅಕ್ಟೋಬರ್ 1ರಂದು ಉತ್ತರಪ್ರದೇಶ ಕಾನ್ಪುರ ಜಿಲ್ಲೆಯ ಪರೌಂಖ್ ಎಂಬ ಪುಟ್ಟ ಹಳ್ಳಿಯಲ್ಲಿ ರೈತನ ಮಗನಾಗಿ ಜನಿಸಿದ್ದಾರೆ. ಕುಟುಂಬದವರು ಸಣ್ಣ ಕಿರಾಣಿ ಅಂಗಡಿಯನ್ನೂ ನಡೆಸುತ್ತಿದ್ದರು. ರಾಮನಾಥ ಕೋವಿಂದ್ ಅವರು ಚಿಕ್ಕವರಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಾರೆ.
ವಿದ್ಯಾಭ್ಯಾಸದಲ್ಲಿ ಮುಂದಿದ್ದ ಅವರು ಕಾನ್ಪುರ ಯೂನಿವರ್ಸಿಟಿಯಿಂದ ಕಾಮರ್ಸ್ ಮತ್ತು ಕಾನೂನು ವಿಷಯದಲ್ಲಿ ಪದವಿ ಪಡೆದರು. ಅದಾದ ಬಳಿಕ ನಾಗರಿಕ ಸೇವಾ ಪರೀಕ್ಷೆ ಬರೆಯಲು ದೆಹಲಿಗೆ ತೆರಳಿದರು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕಾನೂನು ಪ್ರ್ಯಾಕ್ಟೀಸ್ ಆಯ್ಕೆ ಮಾಡಿಕೊಂಡು 1971ರಲ್ಲಿ ಬಾರ್ ಕೌನ್ಸಿಲ್ ಸೇರ್ಪಡೆಯಾದರು.
1993ರವರೆಗೆ ಅಂದರೆ 16 ವರ್ಷ ದೆಹಲಿಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳಲ್ಲಿ ಕಾನೂನು ಅಭ್ಯಾಸ ಮಾಡಿದ್ದಾರೆ. ಅದಕ್ಕೂ ಮೊದಲು 1977ರಿಂದ 1979ರಲ್ಲಿ ದೆಹಲಿ ಹೈಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಸಲಹೆಗಾರರಾಗಿ ಕೆಲಸ ಮಾಡಿದರು.
1978ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಅಡ್ವೋಕೇಟ್ ಆನ್ ರೆಕಾರ್ಡ್ ಆದರು. ನಂತರ 1980ರಿಂದ 1993ರವರೆಗೆ ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ಸಲಹೆಗಾರರಾಗಿದ್ದರು. 1977ರಲ್ಲಿ ಬಿಜೆಪಿ ಸೇರ್ಪಡೆಯಾಗುವುದಕ್ಕೂ ಮೊದಲು ಅವರು ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿಯವರ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
2002ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಷಣ ಮಾಡಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಟ್ವಿಟ್ಟರ್ ನಲ್ಲಿ ಶುಭಾಷಯ ಕೋರಿದ್ದಾರೆ. ಇದಲ್ಲದೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರಾಜಕೀಯ ಮುತ್ಸದ್ಧಿಗಳು ಸೇರಿದಂತೆ ಅಪಾರ ಅಭಿಮಾನಿಗಳು ವಿಶ್ ಮಾಡಿದ್ದಾರೆ
Discussion about this post