ಕಡೇನಂದಿಹಳ್ಳಿ: ಇಂದಿನ ಯಾಂತ್ರಿಕ ಬದುಕಿನಲ್ಲಿ ಮಾನವೀಯ ಸಂಬಂಧಗಳು ಬಹಳಷ್ಟು ಶಿಥಿಲಗೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶಿಕಾರಿಪುರ ತಾಲೂಕ ಕಡೇನಂದಿಹಳ್ಳಿಯಲ್ಲಿ ನಡೆದ ಶರನ್ನವರಾತ್ರಿ ದಸರಾ ೨ನೇ ದಿನದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಸತ್ಯದ ತಳಹದಿಯ ಮೇಲೆ ಸೈದ್ಧಾಂತಿಕ ನಿಲುವುಗಳು ಗಟ್ಟಿಗೊಳ್ಳಬೇಕಾಗಿದೆ. ನಂಬಿಕೆ ಮತ್ತು ಛಲ ಇದ್ದರೆ ಗುರಿ ತಲುಪುವುದು ಬಲು ಸುಲಭ. ಸಾಧನೆಯ ಹಾದಿಯಲ್ಲಿ ಏನೆಲ್ಲ ಕಷ್ಟಗಳು ಬಂದರೂ ಅವೆಲ್ಲವುಗಳನ್ನು ಎದುರಿಸುವಂಥ ಶಕ್ತಿಯನ್ನು ಗಳಿಸಿಕೊಳ್ಳಬೇಕಾಗಿದೆ. ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜೊತೆಗೆ ಹೋರಾಟ ಅನಿವಾರ್ಯವಾಗಬೇಕಾಗುತ್ತದೆ. ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಿವ ಜೀವ ಮತ್ತು ಜಗತ್ತು ಎಂದೆಂದಿಗೂ ಸತ್ಯ ಶಾಶ್ವತ. ಶಕ್ತಿ ವಿಶಿಷ್ಟಾದೈತ ಸಿದ್ದಾಂತದಲ್ಲಿ ಜೀವಾತ್ಮ ಪರಮಾತ್ಮನೆಡೆಗೆ ಸಾಗುವ ಗುರಿಯನ್ನು ಅರಿಯಬೇಕಾಗುತ್ತದೆ ಎಂದರು.
ರಂಭಾಪುರಿ ಬೆಳಗು ಅಕ್ಟೋಬರ್ ಸಂಚಿಕೆಯನ್ನು ಬಿಡುಗಡೆ ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷರಾದ ಬಿ.ವೈ. ಅರುಣಾದೇವಿ ಮಾತನಾಡಿ ಶಾಂತಿ ನೆಮ್ಮದಿಯ ಬದುಕಿಗೆ ನಂಬಿಕೆ ಮತ್ತು ಆಧ್ಯಾತ್ಮದ ಅರಿವು ಬೇಕಾಗಿದೆ. ಉನ್ನತ ಗುರಿ ಮತ್ತು ಉತ್ತಮ ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ಯುವ ಜನಾಂಗ ಧರ್ಮ ಮರೆತು ನಡೆದರೆ ಅಪಾಯ ತಪ್ಪಿದ್ದಲ್ಲ. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಯಜ್ಞ ನಮ್ಮೆಲ್ಲರ ಬಾಳಿಗೆ ಬಲವನ್ನು ತಂದು ಕೊಡಲೆಂದು ಬಯಸಿದ ಅವರು ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳ ಮಂದಹಾಸ ಮರೆಯಾಗುತ್ತಿದೆ. ಚಿಕ್ಕ ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಸಬೇಕಾಗಿದೆ. ಸಂಸ್ಕಾರ ಸಂಸ್ಕೃತಿ ವ್ಮರೆಯಾದರೆ ದರ್ಮದ ಬುಡ ಅಲ್ಲಾಡುತ್ತಿದೆ ಇದು ಭವಿಷ್ಯತ್ತಿಗೆ ಮಾರಕ ಎಂದರು. ಅ.ಭಾ.ವೀರಶೈವ ಮಹಾಸಭಾದ ಮಹಿಳಾ ತಾಲೂಕ ಘಟಕದ ಕಾರ್ಯದರ್ಶಿ ನಿವೇದಿತಾ ರಾಜು ಪಾಲ್ಗೊಂಡಿದ್ದರು.
ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ರಂಭಾಪುರಿ ದಸರಾ ಮಹೋತ್ಸವ ನಾಡಿಗೆಲ್ಲ ಚಿರಪರಿಚಿತ. ಶಕ್ತಿ ಆರಾಧನೆಯ ಮೂಲಕ ಜೀವ ಸಂಕುಲಕ್ಕೆ ಯಾವುದೇ ತೊಂದರೆಯಾಗದೇ ಮುನ್ನಡೆಸಿಕೊಂಡು ಬಂದಿದ್ದಾರೆ ಎಂದರು. ಮೈಸೂರಿನ ಅರಮನೆ ಜಪದಕಟ್ಟಿಮಠದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಕಡೇನಂದಿಹಳ್ಳಿ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.
ಕಡೇನಂದಿಹಳ್ಳಿಯ ವೀರಭದ್ರ ಶಿವಾಚಾರ್ಯರು, ದಿಂಡದಹಳ್ಳಿಯ ಪಶುಪತಿ ಶಿವಾಚಾರ್ಯರು, ಪುಟ್ಟಯ್ಯ ಶಾಸ್ತ್ರಿಗಳು, ಹಾಲಸ್ವಾಮಿ ಹಿರೇಮಠ, ನೀಲಕಂಠಯ್ಯ ಶಾಸ್ತ್ರಿಗಳು ಹಾಗೂ ವೇ. ಮುದುಕಯ್ಯ ಸ್ವಾಮಿಗಳು ಮೊದಲಾದ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಸಿದ್ಧರಬೆಟ್ಟ, ಕಲಾದಗಿ, ಹಾರನಹಳ್ಳಿ, ಸಂಗೊಳ್ಳಿ ಸೇರಿದಂತೆ ಹಲವಾರು ಮಠಾಧೀಶರು ಉಪಸ್ಥಿತರಿದ್ದರು.
ಆನವಟ್ಟಿಯ ಕುಮಾರಿ ನಿತ್ಯಶ್ರೀ ಆರಾಧ್ಯ ಮಠದ ಇವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ತಡಸನಹಳ್ಳಿ ಮುಖ್ಯಶಿಕ್ಷಕ ವೀರೇಶಗೌಡ್ರು ಇವರಿಂದ ಸ್ವಾಗತ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ಹಾಗೂ ಮೈಸೂರಿನ ಶ್ರೀಮತಿ ಸಿ.ಹೆಚ್. ರೇಣುಕಾಪ್ರಸಾದ್ ನಿರೂಪಿಸಿದರು. ಸಮಾರಂಭದ ಕೊನೆಗೆ ಶ್ರೀ ಪೀಠದ ಸಿಬ್ಬಂದಿ ಮತ್ತು ಭಕ್ತರಿಂದ ಆಕರ್ಷಕ ನಜರ್ ಸಮರ್ಪಣೆ ಜರುಗಿತು.
ಇಷ್ಟಲಿಂಗ ಮಹಾಪೂಜೆ: ಶರನ್ನವರಾತ್ರಿ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಬಂದ ಭಕ್ತರಿಗೆ ಶುಭ ಹಾರೈಸಿದರು.

























Discussion about this post