ಚಿಕ್ಕಮಗಳೂರು: ಯಾವುದೇ ಜಾತಿ ಧರ್ಮವಿಲ್ಲದೇ ಕ್ಷೇತ್ರದಲ್ಲಿ ಅಭಿವೃದ್ಧಿ ಮೂಲಕವೇ ಜನರ ವಿಶ್ವಾಸ ಗಳಿಸಿ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡವರು ಕ್ಷೇತ್ರದ ಶಾಸಕರು ಸಿ.ಟಿ ರವಿ ಅವರ ಏಳಿಗೆಯನ್ನು ಸಹಿಸಲಾಗದೆ ಅನಗತ್ಯ ಆರೋಪಗಳ ಮೂಲಕ ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸುವುದು ಖಂಡನೀಯ ಎಂದು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಂದೀಪ್ ಹರವಿನಗಂಡಿ ಹೇಳಿದರು.
ದೇಶದಲ್ಲಿ ಬಿಜೆಪಿ ಪಕ್ಷವು ತತ್ವ ಸಿದ್ದಾಂತಗಳ ಅಡಿಯಲ್ಲಿ ರಾಜಕಾರಣ ನಡೆಸುತ್ತಿದ್ದು. ಪಕ್ಷದ ಶಿಸ್ತಿನ ನಾಯಕರಾಗಿ ಜನತೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಜನರ ವಿಶ್ವಾಸ ಗಳಿಸಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ವಿರೋಧಿಸಿ ಪ್ರತಿಭಟಿಸುವುದು ಸರಿಯಲ್ಲ ಎಂದರು.
ನೆಹರೂ, ಇಂದಿರಾಗಾಂಧಿ ಕುರಿತಾಗಿ ಶಾಸಕರು ನೀಡಿರುವ ಹೇಳಿಕೆಗಳು ಸಮಂಜಸವಾಗಿವೆ. ಪಕ್ಷದಲ್ಲಿ ಪ್ರಾಮಾಣಿಕತೆ, ಬದ್ದತೆ, ಉಳ್ಳ ಕಾರ್ಯಕರ್ತರಿದ್ದು ಪಕ್ಷದಲ್ಲಿ ಆರೋಪ ಪ್ರತ್ಯಾರೋಪಗಳು ಸಹಜ ಆದರೆ ಶಾಸಕರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ ಎಂಬುದು ಖಂಡನೀಯ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದೆವೆ ಎಂದರು.
ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಪಲ್ಲವಿ ಸಿ.ಟಿ ರವಿ ಮಾತನಾಡಿ ಕಾಂಗ್ರೆಸ್ನವರು ಸ್ಥಳೀಯ ಶಾಸಕರ ಮನೆಗೆ ಮುತ್ತಿಗೆ ಹಾಕುತ್ತೇವೆಂದು ಹೇಳಿದ್ದಾರೆ. ಆದರೆ ಅವರು ಮುತ್ತಿಗೆ ಹಾಕುವಂತಹ ಯಾವುದೇ ತಪ್ಪು ಮಾಡಿಲ್ಲ, ಅನ್ನಕ್ಕೆ ಅಧಿದೇವತೆಯಾದ ಅನ್ನಪೂರ್ಣೇಶ್ವರಿ ಹೆಸರನ್ನು ಇಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ. ಕಾಂಗ್ರೆಸ್ನವರು ಇಲ್ಲಿನ ಶಾಸಕರನ್ನು ಟೀಕಿಸಲು ಇಂತಹ ವಿಚಾರಗಳನ್ನು ಬಿಟ್ಟು ಬೇರೆ ತಂತ್ರಗಳನ್ನು ರೂಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಅಂತಲೂ ಅಥವಾ ಭ್ರಷ್ಟಾಚಾರ ನಡೆಸಲಾಗಿದೆದೆ ಎನ್ನುವ ಬಗ್ಗೆ ಸಾಬೀತುಪಡಿಸಿ ಪ್ರತಿಭಟಿಸಿದ್ದಲ್ಲಿ ಅದಕ್ಕೊಂದು ಅರ್ಥವಿದೆ ಆದರೆ ನೆಹರೂ, ಇಂದಿರಾಗಾಂಧಿಯವರ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಮನೆಗೆ ಮುತ್ತಿಗೆ ಹಾಕವುದು ಎಷ್ಟು ಸರಿ? ಇವರು ಸತ್ಯಾಂಶದ ವಿಚಾರವನ್ನೇ ಅವರು ಹೇಳಿದ್ದಾರೆ. ಬಿಜೆಪಿಯು ತತ್ವ, ಸಿದ್ದಾಂತದ ಮೇಲೆ ನಡೆಯುವ ಪಕ್ಷ, ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ಸಾಮಾನ್ಯ ಇದನ್ನೆ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡು ಶಾಸಕರ ಮನೆಗೆ ಮುತ್ತಿಗೆ ಹಾಕುತ್ತೇವೆಂದು ಹೇಳುವುದು ಖಂಡನೀಯ ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಬಿಜೆಪಿ ಮುಖಂಡ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ. ತಮ್ಮಯ್ಯ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ, ಆದರೆ ಅದು ನ್ಯಾಯಯುತವಾಗಿರಬೇಕು, ಬಿಜೆಪಿ ಪಕ್ಷವು ರಾಷ್ಟ್ರೀಯ ಪಕ್ಷವಾಗಿದ್ದು ಹಲವು ತತ್ವ ಸಿದ್ದಾಂತಗಳ ಮೇಲೆ ಆಡಳಿತ ನಡೆಸುತ್ತದೆ, ಹಾಗಿದ್ದಲ್ಲಿ ಆ ಪಕ್ಷವನ್ನು ಪ್ರತಿ ಪಕ್ಷಗಳ ನಾಯಕರು ಟೀಕಿಸಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಡಿಕೆಶಿವಕುಮಾರ್, ಸಿದ್ದರಾಮಯ್ಯರಂತಹ ನಾಯಕರು ಅಟಲ್ ಬಿಹಾರಿ ವಾಜಪೇಯಿ, ಮೋದಿಯವರ ಬಗ್ಗೆ ಕೆಳಮಟ್ಟದ ಭಾಷೆ ಬಳಸಿ ನಿಂದಿಸಿದ್ದಾರೆ, ಬಿಜೆಪಿ ಕಾರ್ಯಕರ್ತರಿಗೆ ಯಾವುದೇ ಪಕ್ಷಗಳು ಸಂಸ್ಕಾರ ಕಲಿಸುವ ಅಗತ್ಯವಿಲ್ಲ, ಜಿಲ್ಲಾಡಳಿತ ಶಾಸಕರ ಮನೆಗೆ ಮುತ್ತಿಗೆ ಹಾಕುವುದನ್ನು ತಡೆದು ಬೇರೆಡೆ ಪ್ರತಿಭಟನೆಗೆ ಅವಕಾಶ ನೀಡಲಿ ಇಲ್ಲವಾದಲ್ಲಿ ಬಿಜೆಪಿಯ ಬಲಾ ಎಷ್ಟಿದೆ ಎಂಬುದನ್ನು ಕಾರ್ಯಕರ್ತರು ತೋರಿಸಲಿದ್ದಾರೆ ಎಂದು ವಿಪಕ್ಷಗಳಿಗೆ ಎಚ್ಚರಿಸಿದರು.
ನಗರಸಭೆ ಮಾಜಿ ಸದಸ್ಯ ಟಿ. ರಾಜಶೇಖರ್ ಮಾತನಾಡಿ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಉದ್ದೇಶದಿಂದಲೇ ಕಾಂಗ್ರೆಸ್ ಈ ರೀತಿಯ ಶಾಸಕರ ಮನೆಗೆ ಮುತ್ತಿಗೆ ಹಾಕುವ ಹುನ್ನಾರ ನಡೆಸಿದೆ. ಜಿಲ್ಲೆಯಲ್ಲಿ ಸಿ.ಟಿ ರವಿಯವರ ಅಪಾರ ಅಭಿಮಾನಿಗಳ ಬಳಗವಿದ್ದು ಮುತ್ತಿಗೆ ಮಾಡಲು ಯತ್ನಿಸಿದ್ದಲ್ಲಿ ಯಾವುದೇ ನಾಯಕರಾದರು ಅವರ ಮುಖಕ್ಕೆ ಮಸಿ ಬಳಿದು ಎಚ್ಚರಿಸಲಾಗುವುದು. ರಾಷ್ಟ್ರೀಯ ನಾಯಕರಾದ ಸಿ.ಟಿ ರವಿಯವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಜನರು ಅವರನ್ನು ವಿಶ್ವಾಸವಿಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಆದರೆ ಅವರ ಹೆಸರಿಗೆ ಕಳಂಕ ತರಲು ವಿಪಕ್ಷಗಳು ಮುಂದಾಗಿವೆ. ಇಂತಹ ವ್ಯರ್ಥವಾದ ಪ್ರತಿಭಟನೆಗಳನ್ನು ಕಾಂಗ್ರೆಸ್ ಕೈಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರು ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ ಅವರು ಇಂದಿರಾಗಾಂಧಿ, ನೆಹರೂ ಬಗ್ಗೆ ನೀಡಿರುವ ಹೇಳಿಕೆಗಳು ಸಮಂಜಸವಾಗಿವೆ ಎಂದು ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮೂಗ್ತಿಹಳ್ಳಿ ಆನಂದ್, ಪುಪ್ಪರಾಜ್, ಶಿವಕುಮಾರ್, ಪಾಪಣ್ಣ, ರೇವುನಾಥ್, ಯುವಮೋರ್ಚಾ ಕಾರ್ಯದರ್ಶಿ ಶಶಿ, ಸದಸ್ಯರಾದ ಸಮೃದ್ದ ಪೈ, ಕನಕರಾಜ್, ಮಂಜುನಾಥ್, ಪ್ರಶಾಂತ್, ರಾಜೇಶ್ ಇದ್ದರು

























Discussion about this post