ಚಿಕ್ಕಮಗಳೂರು: ಜಿಲ್ಲೆಯ 112 ಸೇವೆಗೆ ಒಟ್ಟು 16 ವಾಹನಗಳು ಸೇರ್ಪಡೆಗೊಂಡಿದ್ದು, ಹಲವು ಸಂದರ್ಭಗಳಲ್ಲಿ ಸಾರ್ವಜನಿಕರ ನೆರವಿಗೆ ಬಂದು ಅಪರಾಧ ಪ್ರಕರಣಗಳನ್ನು ತಪ್ಪಿಸಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದರು.
ಅವರು ೧೧೨ ಸೇವೆ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಏರ್ಪಡಿಸಲಾಗಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚೆಗೆ ನಗರದಲ್ಲಿ ಕಾಣೆಯಾಗಿದ್ದ ಚಿಕ್ಕ ಮಗುವನ್ನೂ ನಮ್ಮ ೧೧೨ ವಾಹನದ ಸಿಬ್ಬಂದಿ ಹುಡುಕಿಕೊಟ್ಟಿದ್ದಾರೆ. ರಸ್ತೆ ದರೋಡೆ, ಕುರಿಗಳ ಕಳ್ಳತನ, ಕಳುವಿಗೆ ಸಂಚು ರೂಪಿಸುವಾಗ ಕರೆ ಬಂದ ಕೂಡಲೇ ೧೧೨ ವಾಹನ ಸ್ಥಳಕ್ಕೆ ಧಾವಿಸಿ ಹಲವು ಅಪರಾಧ ಪ್ರಕರಣಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಹೆಚ್ಚು ಪ್ರಮಾಣದ ಮಳೆ ಬಂದಾಗ ಯಾವ ಅನಾಹುತ ಆಗಬಾರದು ಎನ್ನುವ ನಿಟ್ಟಿನಲ್ಲಿ ೧೧೨ ನಿಂದ ಹೆಚ್ಚಿನ ಸಹಾಯವಾಗಿದೆ. ಆದರೂ ಈ ಸೇವೆ ಬಗ್ಗೆ ಇನ್ನಷ್ಟು ಪ್ರಚಾರ ಕಾರ್ಯವನ್ನು ಮಾಡುತ್ತಿದ್ದೇವೆ. ಗಣಪತಿ ಉತ್ಸವಗಳಲ್ಲಿ, ಲಸಿಕಾ ಕೇಂದ್ರಗಳಲ್ಲಿ ಮಾಹಿತಿ ನೀಡಲಾಗಿದೆ ಎಂದರು.
ಇದರೊಂದಿಗೆ ೧೧೨ ಬಗ್ಗೆ ಅರಿವು ಮೂಡಿಸಲು ಸೈಕಲ್ ಜಾಥ ಹಮ್ಮಿಕೊಳ್ಳಾಗಿದೆ. ಜಿಲ್ಲಾ ಪೊಲೀಸ್ ಘಟಕ ಅಧಿಕಾರಿಗಳು, ಸಿಬ್ಬಂದಿಗಳು ನಗರದ ಕೆಲವು ರಸ್ತೆಗಳಲ್ಲಿ ಸಂಚರಿಸಿ, ವಸ್ತಾರೆ ಮುಖಾಂತರ ಆಲ್ದೂರು ವರೆಗೆ ತೆರಳಲಿದ್ದಾರೆ. ಮಾರ್ಗಮಧ್ಯೆ ಅಲ್ಲಲ್ಲಿ ಜನರನ್ನು ಸೇರಿಸಿ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

























Discussion about this post