ಚಿಕ್ಕಮಗಳೂರು: ಚರ್ಮೋದ್ಯಮವನ್ನು ಕೇವಲ ವೃತ್ತಿಯನ್ನಾಗಿ ಮಾಡಿಕೊಳ್ಳದೇ ಮಾರುಕಟ್ಟೆ ವಿಸ್ತರಣೆಯೊಂದಿಗೆ ದೊಡ್ಡ ಉದ್ಯಮವನ್ನಾಗಿಸಿಕೊಳ್ಳುವ ಮೂಲಕ ಆರ್ಥಿಕತೆವಾಗಿ ಪ್ರಗತಿ ಸಾಧಿಸುವಂತೆ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ(ಲಿಡ್ಕರ್)ದ ಅಧ್ಯಕ್ಷ ಪ್ರೋ.ಲಿಂಗಣ್ಣ ಸಲಹೆ ನೀಡಿದರು.
ಅವರು ನಗರದ ಪರಿವೀಕ್ಷಣ ಮಂದಿರದಲ್ಲಿ ಡಾ. ಬಾಬುಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ್ದ ಚರ್ಮ ಕುಶಲಕರ್ಮಿಗಳ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಚರ್ಮದ್ಯಮ ಬೆಳೆವಣಿಗೆ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಯ ಚರ್ಮ ಕುಶಲ ಕರ್ಮಿಗಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರವು ಹಲವು ಸವಲತ್ತುಗಳನ್ನು ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ನಾವು ಕೈಗೊಳ್ಳುವ ಚರ್ಮದ್ಯಮವನ್ನು ಕೇವಲ ವೃತ್ತಿಯನ್ನಾಗಿಸಿಕೊಳ್ಳದೇ ವ್ಯಾಪಾರ ಉದ್ಯಮವನ್ನಾಗಿ ರೂಪುಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಸರ್ಕಾರವು ಪ್ರತಿ ವರ್ಷವು ಸಮಾಜ ಕಲ್ಯಾಣ ಇಲಾಖೆಯ ಆಯವ್ಯದಲ್ಲಿ ಅನುದಾನವನ್ನು ನಿಗಧಿಪಡಿಸಿ ಅನುದಾನಕ್ಕೆ ತಕ್ಕಂತೆ ಮತ್ತು ಚರ್ಮ ಕುಶಲ ಕರ್ಮಿಗಳ ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲಾವಾರು ಗುರಿ ನಿಗಧಿಪಡಿಸಿದೆ, ಕೌಶಲ್ಯಾಭಿವೃದ್ಧಿ, ಮಾರುಕಟ್ಟೆ ಸಹಾಯ ಯೋಜನೆ, ಪಾದುಕೆ ಕುಟೀರ ಯೋಜನೆ, ಒಳಗೊಂಡಂತೆ ಹಲವು ಸಾಲ ಸೌಲಭ್ಯಗಳನ್ನು ನೀಡಲಿದ್ದು ಅವುಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ತಿಳಿಸಿದರು.
ಯಂತ್ರೋಪಕರಣಗಳು, ಕಚ್ಚಾವಸ್ತುಗಳು, ಕೊಳ್ಳಲು, ಕುಟೀರಗಳ ನಿರ್ಮಾಣಕ್ಕೆ ಬ್ಯಾಂಕ್ ಮೂಲಕ ಸಾಲಸೌಲಭ್ಯ ಒದಗಿಸಲಿದೆ. ಹಳೆಯ ವೃತ್ತಿಗೆ ತಮ್ಮ ಮಕ್ಕಳನ್ನು ಮುಂದುವರಿಸದೇ ಉತ್ತಮ ವಿದ್ಯಾಭ್ಯಾಸ ನೀಡಿ ಸುಶಿಕ್ಷಿತರನ್ನಾಗಿ ಮಾಡುವಂತೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿ ಕೈಗಾರಿಕೆ ಹಿನ್ನಲೆ ಜಿಲ್ಲೆಯು ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತವು ಕುಶಲಕರ್ಮಿಗಳಿಗೆ ಕೌಶಲ್ಯಾಬಿವೃದ್ಧಿ ತರಬೇತಿ ಮೂಲಕ ಸ್ವಯಂ ಉದ್ಯೋಗಕೈಗೊಳ್ಳಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ನಿಗಮದಿಂದ ಹಲವಾರು ಸಾಲ ಸೌಲಭ್ಯಗಳಿದ್ದು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರಾಗುವ ಮೂಲಕ ಸ್ವಾವಲಂಬಿ ಬದುಕು ಕಟ್ಟುಕೊಳ್ಳುವಂತೆ ತಿಳಿಸಿದರು.
ಲಿಡ್ಕರ್ ವ್ಯವಸ್ಥಾಪಕ ಡಾ. ನಟರಾಜ್ ಮಾತನಾಡಿ ನಗರ ವ್ಯಾಪ್ತಿಯಲ್ಲಿ ಚರ್ಮೋದ್ಯಮ ಕುಶಲಕರ್ಮಿಗಳು ಸ್ವಾವಲಂಬಿ ಬದುಕು ನಡೆಸುವ ನಿಟ್ಟಿನಲ್ಲಿ ಅವರಿಗೆ ಅನಕೂಲವಾಗುವಂತೆ ೨೫ ಮಳಿಗೆಗಳ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು, ಬಸ್ನಿಲ್ದಾಣ, ಆಸ್ಪತ್ರೆಗಳ, ನಗರಸಭಾ ಜಾಗದಲ್ಲಿ ವೃತ್ತಿಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ಚೈತ್ರಾ, ಜಿಲ್ಲಾ ಸಂಯೋಜಕ ವೇಣುಗೋಪಾಲ್ರಾವ್, ಲಿಡ್ಕರ್ ವ್ಯವಸ್ಥಾಪಕರಾದ ರಾಮಾಂಜನೇಯಪ್ಪ, ಮಂಜುನಾಥ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಗೋಪಾಲಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.
Discussion about this post