ಆಶ್ವಯುಜ ಶುದ್ಧಪಾಡ್ಯಮಿಯಿಂದ ಪ್ರಾರಂಭವಾಗುವ ಶರನ್ನವರಾತ್ರಿ ಆಚರಣೆಯ ವೈಶಿಷ್ಟ್ಯವೆಂದರೆ ಜಗನ್ಮಾತೆಯಾದ ದುರ್ಗಾದೇವಿಯನ್ನು ಒಂದೊಂದು ದಿನ ಒಂದೊಂದು ರೂಪದಲ್ಲಿ, ವಿವಿಧನಾಮಗಳಿಂದ ಆರಾಧಿಸುವುದು. ಶ್ರೀ ದೇವಿಕವಚದಲ್ಲಿನ ಈ ಶ್ಲೋಕದಲ್ಲಿ ಜಗನ್ಮಾತೆಯ ಒಂಭತ್ತು ರೂಪಗಳ ಹೆಸರನ್ನು ನೀಡಲಾಗಿದ್ದು ಅವು ಹೀಗಿವೆ:
ಪ್ರಥಮಂ ಶೈಲಪುತ್ರೀಚ ದ್ವಿತೀಯಂ ಬ್ರಹ್ಮಚಾರಿಣಿ
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್
ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿಚ
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿಚಾಷ್ಟಮಮ್
ನವಮಂ ಸಿದ್ಧಿಧಾತ್ರೀಚ ನವದುರ್ಗಾ: ಪ್ರಕೀಕಿರ್ತಿತಾ:
ದಕ್ಷಿಣಭಾರತದಲ್ಲಿ ಜಗನ್ಮಾತೆಯನ್ನು ನವರಾತ್ರಿಯ ಒಂಭತ್ತು ದಿನಗಳಲ್ಲಿ ಮೂರು-ಮೂರು ದಿನಗಳ ಮೂರು ಅವಧಿಗಳಲ್ಲಿ ತ್ರಿದೇವಿಯರ ರೂಪದಲ್ಲಿ ಪೂಜಿಸಲಾಗುತ್ತದೆ; ಅಂದರೆ ಪ್ರಥಮ ಮೂರು ದಿನಗಳ ಅವಧಿಯಲ್ಲಿ (ಪಾಡ್ಯಮಿಯಿಂದ ತದಿಗೆಯವರೆಗೆ) ಪಾರ್ವತಿಯ ರೂಪದಲ್ಲೂ, ಎರಡನೆಯ ಅವಧಿಯಲ್ಲಿ (ಚತುರ್ಥಿಯಿಂದ ಷಷ್ಠಿಯವರೆಗೆ) ಶ್ರೀ ಮಹಾಲಕ್ಷ್ಮಿಯ ರೂಪದಲ್ಲೂ, ಹಾಗೂ ಮೂರನೆಯ ಅವಧಿಯಲ್ಲಿ (ಸಪ್ತಮಿಯಿಂದ ನವಮಿಯವರೆಗೆ) ವಾಗ್ದೇವಿಯಾದ ಶಾರದೆಯ ರೂಪದಲ್ಲೂ ಪೂಜಿಸಲಾಗುತ್ತದೆ.
1. ಶೈಲಪುತ್ರಿ: ಜಗನ್ಮಾತೆಯ ನವದುರ್ಗೆಯರ ಒಂಭತ್ತು ರೂಪಗಳಲ್ಲಿ ಮೊದಲನೆಯ ರೂಪವಿದು. ಶರನ್ನವರಾತ್ರಿಯ ಪ್ರಥಮ ದಿನವಾದ ಆಶ್ವಯುಜ ಶುದ್ಧ ಪಾಡ್ಯಮಿಯಂದು ಜಗನ್ಮಾತೆಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಪರ್ವತರಾಜಪುತ್ರಿ, ಗಿರಿಜೆ, ಹಿಮಗಿರಿತನಯೆ ಎಂದೂ ಕರೆಯಲ್ಪಡುವ ಈಕೆ ವೃಷಭವಾಹನೆಯಾಗಿ ಕಂಗೊಳಿಸುತ್ತಾಳೆ. ಈ ದೇವಿಯು ಶಿರದಲ್ಲಿ ಚಂದ್ರನನ್ನು ಅರ್ಧಚಂದ್ರಾಕಾರ ರೂಪದಲ್ಲಿ ಧರಿಸಿದವಳಾಗಿ ಬಲಹಸ್ತದಲ್ಲಿ ತ್ರಿಶೂಲವನ್ನೂ, ಎಡಹಸ್ತದಲ್ಲಿ ಕಮಲದ ಹೂವನ್ನೂ ಹಿಡಿದು ಶ್ವೇತವಸ್ತ್ರಧಾರಿಣಿಯಾಗಿರುತ್ತಾಳೆ. ಮಲ್ಲಿಗೆ ಇವಳಿಗೆ ಅತ್ಯಂತ ಪ್ರಿಯವಾದ ಹೂವು, ಇದರಿಂದ ಪೂಜಿಸಿದರೆ ಇಷ್ಟಾರ್ಥಸಿದ್ಧಿ. ಈಕೆಯು ಚಂದ್ರಗ್ರಹದ ಅಧಿದೇವತೆಯಾಗಿದ್ದು ಈಕೆಯನ್ನು ಆರಾಧಿಸುವುದರಿಂದ ಚಂದ್ರಗ್ರಹದಿಂದುಂಟಾದ ದೋ಼ಷಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಮೂಲಾಧಾರಚಕ್ರಸ್ಥಿತೆಯಾದ ಈ ತಾಯಿಯು ತನ್ನನ್ನು ಭಕ್ತಿಯಿಂದ ಪೂಜಿಸಿದವರಿಗೆ ಮಾತೃತ್ವ ಹಾಗೂ ಮನಸ್ಸಿನ ಏಕಾಗ್ರತೆಗಳನ್ನು ಪ್ರಸಾದಿಸುತ್ತಾಳೆ. ಈ ದಿನ ಬೂದುಬಣ್ಣ ಪ್ರಧಾನವಾಗಿರುತ್ತದೆ. ಈಕೆ ಸಾಕ್ಷಾತ್ ಪಾರ್ವತಿಯ ಪ್ರತಿರೂಪವಾಗಿದ್ದು ಮಾನಸಿಕ ದೃಢತೆ ಹಾಗೂ ನಿಶ್ಚಲತೆಗೆ ಪ್ರತೀಕವಾಗಿದ್ದಾಳೆ. ಎಷ್ಟೇ ಅಡೆ-ತಡೆಗಳು ಎದುರಾದರೂ ಪರಶಿವನನ್ನು ಪತಿಯಾಗಿ ಪಡೆಯಲು ದೃಢವಾದ ಮನಸ್ಸಿನಿಂದ ತಪಸ್ಸನ್ನಾಚರಿಸುತ್ತಾಳೆ. ಸಪ್ತಋಷಿಗಳು ಇವಳ ತಪಸ್ಸನ್ನು ಪರೀಕ್ಷಿಸಲು ಪ್ರಯತ್ನಿಸಿದಾಗಲೂ ತನ್ನ ಏಕಾಗ್ರತೆಯಿಂದ ವಿಮುಖಳಾಗದೇ ತಪಸ್ಸನ್ನು ಪೂರ್ಣಗೊಳಿಸಿ ಪರಶಿವನನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ಇವಳನ್ನು ಭಕ್ತಯಿಂದ ಆರಾಧಿಸುವ ಭಕ್ತರು ಮಾನಸಿಕ ದೃಢತೆಯನ್ನೂ, ನಿಶ್ಚಲ ಮನಸ್ಸನ್ನೂ ಹೊಂದಿ ತಮ್ಮ ಗುರಿಯಲ್ಲಿ ಯಶಸ್ಸನ್ನು ಹೊಂದುವುದರಲ್ಲಿ ಸಂಶಯವಿಲ್ಲ. ಈ ತಾಯಿಯ ಬೀಜಮಂತ್ರವನ್ನು ಕೆಳಗೆ ನೀಡಲಾಗಿದ್ದು ಇದನ್ನು ಭಕ್ತಿಭಾವದಿಂದ ಪಠಿಸಿದವರು ಎಂತಹ ಕಠಿಣ ಗುರಿಯನ್ನಾದರೂ ಸಾಧಿಸಲು ಶಕ್ತರಾಗುತ್ತಾರೆ. ಹಳದಿ ಬಣ್ಣದ ಸೀರೆ-ಕುಪ್ಪುಸಗಳನ್ನು ತಾಯಿಗೆ ಧರಿಸಿ, ಹಳದಿಬಣ್ಣದ ಹೂವು (ಸೇವಂತಿಗೆ), ಹಳದಿಬಣ್ಣದ ಅಕ್ಷತೆ ಹಾಗೂ ಗೆಜ್ಜೆ-ವಸ್ತ್ರಗಳಿಂದ ಪೂಜಿಸಲಾಗುತ್ತದೆ. ತಾಯಿಗೆ ಬ್ರಾಹ್ಮೀ ಅಲಂಕಾರ ಮಾಡಿ ಅಕ್ಕಿಯಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡಲಾಗುತ್ತದೆ. ಹಳದಿಬಣ್ಣದ ಸಿಹಿಪದಾರ್ಥವನ್ನೂ (ಕೇಸರಿ ಪಾಯಸ/ಕೇಸರಿ ಹಲ್ವಾ) ಅರ್ಪಿಸಬಹುದು. ವಾರಣಾಸಿಯ ಮಾರ್ಹಿಯಾಘಾಟ್ನಲ್ಲಿ ಈ ತಾಯಿಯ ಆಲಯವಿದ್ದು ವಿಜೃಂಭಣೆಯಿಂದ ತಾಯಿಯನ್ನು ಆರಾಧಿಸಲಾಗುತ್ತದೆ. ಈ ತಾಯಿಯ ಮೂಲಮಂತ್ರವನ್ನು ಕೆಳಗೆ ನೀಡಲಾಗಿದೆ.
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ।
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ॥
2. ಬ್ರಹ್ಮಚಾರಿಣಿ: ಎರಡನೆಯ ದಿನವಾದ ಬಿದಿಗೆಯಂದು ಜಗನ್ಮಾತೆಯಾದ ದುರ್ಗೆಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಈಕೆಯು ತನ್ನ ಬಲಹಸ್ತದಲ್ಲಿ ಗುಲಾಬಿ ಹೂವನ್ನು ಹಾಗೂ ಎಡಹಸ್ತದಲ್ಲಿ ನೀರಿನ ಕಮಂಡಲವನ್ನು ಹಿಡಿದಿದ್ದು ಮೋಕ್ಷಮಾರ್ಗವನ್ನು ತೋರುವ ಮಾತೆಯಾಗಿದ್ದಾಳೆ. ಇವಳು ಮಂಗಳಗ್ರಹದ ಅಧಿದೇವತೆಯಾಗಿದ್ದು ಈಕೆಯ ಆರಾಧನೆಯಿಂದ ಮಂಗಳಗ್ರಹದಿಂದ ಉಂಟಾದ ದೋಷಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ತಪಸ್ವಿನಿಯ ರೂಪದಲ್ಲಿ ಕಂಗೊಳಿಸುವ ಈ ತಾಯಿಯು ಗಮ್ಯವನ್ನು ತಲುಪಲು ಛಲ ಹಾಗೂ ಕಠಿಣ ಪರಿಶ್ರಮದ ಪ್ರಯತ್ನವೇ ಏಕೈಕ ಮಾರ್ಗ ಎಂಬ ಸಂದೇಶವನ್ನು ನೀಡುತ್ತಾಳೆ. ಈದಿನ ಹಸಿರುಬಣ್ಣದ ವಸ್ತ್ರಗಳಲ್ಲಿ ಅಲಂಕರಿಸಿ, ಪೂಜಿಸಿ, ಹಸಿರುಬಣ್ಣದ ಸಿಹಿ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಸ್ವಾದಿಷ್ಟಾನ ಚಕ್ರಸ್ಥಿತೆಯಾದ ಈ ತಾಯಿಯನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿದರೆ ಶೀಘ್ರ ವಿವಾಹಭಾಗ್ಯವನ್ನು ನೀಡುತ್ತಾಳೆ, ವೈವಾಹಿಕ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಪ್ರಸಾದಿಸುತ್ತಾಳೆ. ಈ ತಾಯಿಯ ಮೂಲಮಂತ್ರವನ್ನು ಕೆಳಗೆ ನೀಡಲಾಗಿದೆ.
ದಧಾನಾ ಕರಪದ್ಮಾಭ್ಯಾಮಕ್ಷಮಾಲಾ ಕಮಂಡಲೂ ।
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ॥
3. ಚಂದ್ರಘಂಟಾ: ನವರಾತ್ರಿಯ ಮೂರನೆಯ ದಿನದಂದು ತಾಯಿಯನ್ನು ಚಂದ್ರಘಂಟಾ ಎಂದು ಪೂಜಿಸಲಾಗುತ್ತದೆ. ಶಿವನು ಚಂದ್ರೇಶ್ವರನಾದಾಗ ಶಿವೆಯು ಚಂದ್ರಘಂಟಾ ರೂಪ ಹೊಂದಿ ವೈರಾಗ್ಯಮೂರ್ತಿ ಶಿವನನ್ನು ಗೃಹಸ್ಥನನ್ನಾಗಿ ಮಾಡುತ್ತಾಳೆ. ಹತ್ತು ಕೈಗಳು ಹಾಗೂ ಮೂರು ಕಣ್ಣುಗಳನ್ನು ಹೊಂದಿ ಶೋಭಿಸುವ ಈ ತಾಯಿಯು ಶಾಂತಿಪ್ರಿಯೆ. ಶುಕ್ರಗ್ರಹದ ಅಧಿದೇವತೆಯಾದ ಈ ತಾಯಿಯು ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೂ ಸಂತೋಷವನ್ನುಂಟುಮಾಡುವವಳು, ಆಹಾರದ ಕೊರತೆಯಿಲ್ಲದ ಸಮೃದ್ಧಿಯನ್ನು ಹಾಗೂ ಸಂಪತ್ತನ್ನು ನೀಡುವವಳು. ಈಕೆಯನ್ನು ಆರಾಧಿಸಿ ಇವಳ ಕೃಪೆಗೆ ಪಾತ್ರರಾದರೆ ಯಾವುದೇ ರೀತಿಯ ಭಯವಿದ್ದರೂ ನಿವಾರಣೆಯಾಗಿ ಎಲ್ಲ ಕಷ್ಟಗಳನ್ನೂ ಎದುರಿಸಿ ಜಯಶಾಲಿಯಾಗಬಲ್ಲೆ ಎನ್ನುವ ಆತ್ಮವಿಶ್ವಾಸ ಉಂಟಾಗುವುದು. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟೆಯ ನಾದವು ಎಲ್ಲಾ ಋಣಾತ್ಮಕ ಹಾಗೂ ದುಷ್ಟಶಕ್ತಿಗಳನ್ನೂ ದೂರಮಾಡಿ ಸಕಾರಾತ್ಮಕ ಶಕ್ತಿಗಳನ್ನು ಉದ್ದೀಪನಗೊಳಿಸುವುದು. ಜೀವನದಲ್ಲಿ ಪದೇ-ಪದೇ ಸೋಲು-ನಷ್ಟಗಳನ್ನು ಕಂಡು ಭರವಸೆಯನ್ನು ಕಳೆದುಕೊಂಡವರು ಈ ತಾಯಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸಿದರೆ ಅವರ ದಾರಿಯಲ್ಲಿನ ಎಲ್ಲಾ ಅಡೆ-ತಡೆಗಳನ್ನು ನಿವಾರಿಸಿ, ಬೆಳಕನ್ನು ಬೀರಿ, ಯಶಸ್ಸನ್ನು ದಯಪಾಲಿಸುತ್ತಾಳೆ. ಈ ದೇವಿಯನ್ನು ಬೂದುಬಣ್ಣದ ವಸ್ತ್ರಗಳಿಂದ ಅಲಂಕರಿಸಿ ಪೂಜಿಸಿ ಹಾಲುಬಾಯಿ (ಸಿಹಿ) ನೈವೇದ್ಯ ಅರ್ಪಿಸಲಾಗುತ್ತದೆ. ಮಣಿಪೂರಚಕ್ರದಲ್ಲಿ ಸ್ಥಿತಳಾದ ಈ ತಾಯಿಯನ್ನು ಪೂಜಿಸುವುದರಿಂದ ಶತೃಗಳ ದಮನವಾಗುತ್ತದೆ. ಈ ತಾಯಿಯ ಮೂಲಮಂತ್ರವನ್ನು ಕೆಳಗೆ ನೀಡಲಾಗಿದೆ.
ಪಿಂಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ ।
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ॥
4. ಕೂಷ್ಮಾಂಡಾ: ನವರಾತ್ರಿಯ ನಾಲ್ಕನೆಯ ದಿನವಾದ ಚತುರ್ಥಿಯಂದು ಪೂಜಿಸಲ್ಪಡುವ ತಾಯಿಯ ರೂಪ ಕೂಷ್ಮಾಂಡಾ. ಇದು ಯಕ್ಷಿಯ ರೂಪ. ತೇಜಸ್ಸಿನ ಚಿಕ್ಕ ಬೀಜವೊಂದರ ರೂಪದಲ್ಲಿ ಇಡೀ ಬ್ರಹ್ಮಾಂಡವನ್ನು ತನ್ನ ಗರ್ಭದಲ್ಲಿರಿಸಿಕೊಂಡು ಸಂರಕ್ಷಿಸುತ್ತಿದ್ದಾಳೆ ಈ ತಾಯಿ. ಸಿಂಹವಾಹಿನಿಯಾದ ಈಕೆಯು ಎಂಟು ಕೈಗಳನ್ನು ಹೊಂದಿ ತನ್ನ ಕೈಗಳಲ್ಲಿ ಕಮಂಡಲ, ಧನಸ್ಸು, ಜಪಮಾಲೆ, ಕಮಲ, ಗದೆ, ಅಮೃತಕಳಶ, ಚಕ್ರ, ಹಾಗೂ ಬಾಣಗಳನ್ನು ಹಿಡಿದಿದ್ದಾಳೆ. ನಿರ್ಮಲವಾದ ಮನಸ್ಸಿನಿಂದ ಹಾಗೂ ಭಕ್ತಿ-ಶ್ರದ್ಧೆಗಳಿಂದ ಆರಾಧಿಸುವ ಭಕ್ತರಿಗೆ ಶೀಘ್ರವಾಗಿ ಒಲಿಯುವ ಈಕೆಯು ಭಕ್ತರ ಎಲ್ಲಾ ಕಷ್ಟಗಳನ್ನೂ ನಿವಾರಿಸಿ ಸುಖ-ಸಂತೋಷದ ಬದುಕನ್ನು ನೀಡುತ್ತಾಳೆ. ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಮಂಗಲದ್ರವ್ಯಗಳನ್ನು ಅರ್ಪಿಸಿ ಸಿಹಿಭೋಜನದಿಂದ ಹಾಗೂ ಫಲ-ತಾಂಬೂಲಗಳಿಂದ ತೃಪ್ತಿಪಡಿಸಿದರೆ ಸಕಲ ಭಾಗ್ಯಗಳನ್ನೂ ನೀಡುತ್ತಾಳೆ ಈ ತಾಯಿ. ರವಿಗ್ರಹದ ಅಧಿದೇವತೆಯಾದ ಈ ದೇವಿಯನ್ನು ಪೂಜಿಸುವುದರಿಂದ ರವಿಗ್ರಹದಿಂದ ದೋಷಗಳೇನಾದರೂ ಉಂಟಾಗಿದ್ದರೆ ಅವುಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಈ ತಾಯಿಯನ್ನು ಕೇಸರಿಬಣ್ಣದ ವಸ್ತ್ರಗಳಿಂದ ಅಲಂಕರಿಸಿ ಕ್ಯಾರೆಟ್ ಹಲ್ವಾ ರೀತಿಯ ಸಿಹಿಪದಾರ್ಥವನ್ನು ನೈವೇದ್ಯವನ್ನಾಗಿ ಅರ್ಪಿಸುತ್ತಾರೆ. ಅನಾಹತಚಕ್ರದಲ್ಲಿ ನೆಲೆಸಿರುವ ಈ ದೇವಿಯ ಆರಾಧನೆಯಿಂದ ಉತ್ತಮ ಆರೋಗ್ಯಭಾಗ್ಯದ ಫಲ ಹಾಗೂ ಅಖಂಡ ಐಶ್ವರ್ಯ ದೊರೆಯುತ್ತದೆ. ಈ ತಾಯಿಯ ಜಪಮಾಲೆಯಲ್ಲಿ ಸಿದ್ಧಿ ಮತ್ತು ನಿಧಿ ಇರುತ್ತವೆಂದು ಗ್ರಂಥಗಳಲ್ಲಿ ಉಲ್ಲೇಖವಿದೆ. ಈ ತಾಯಿಯ ಮೂಲಮಂತ್ರವನ್ನು ಕೆಳಗೆ ನೀಡಲಾಗಿದೆ.
ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ ।
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ॥
5. ಸ್ಕಂದಮಾತಾ: ಜಗತ್ತಿಗೇ ತಾಯಿಯಾದ ದುರ್ಗಾಮಾತೆಯು ಸ್ಕಂದಮಾತೆಯಾಗಿ ಮಮತಾಮಯಿಯಾಗಿ ಕಂಗೊಳಿಸುವ ರೂಪವಿದು. ಸಿಂಹವಾಹಿನಿಯಾಗಿರುವ ಈಕೆಯು ತನ್ನ ಬಲತೊಡೆಯಮೇಲೆ ಪುತ್ರನಾದ ಸ್ಕಂದನನ್ನು ಕೂಡಿಸಿಕೊಂಡಿದ್ದು ಮಾತೃವಾತ್ಸಲ್ಯಭರಿತಳಾಗಿ ತೋರುತ್ತಾಳೆ. ನಾಲ್ಕು ಕೈಗಳನ್ನು ಹೊಂದಿರುವ ಇವಳು ಶಿವನ ಮೂರನೆಯ ಕಣ್ಣನ್ನು ತನ್ನ ಹಣೆಯಲ್ಲಿ ಧರಿಸಿ ಅಭಯಮುದ್ರೆಯಲ್ಲಿ ಕಂಗೊಳಿಸುತ್ತಾಳೆ. ತಾವರೆ ಹೂವು ಈಕೆಗೆ ಅತಿಪ್ರಿಯವಾಗಿದ್ದು ಅದರ ಮೇಲೂ ಆಸೀನಳಾಗಿ “ಪದ್ಮಾಸನಾ” ಎಂದೂ ಕರೆಯಲ್ಪಡುತ್ತಾಳೆ. ಈಕೆಯು ಬುಧಗ್ರಹದ ಅಧಿದೇವತೆಯಾಗಿದ್ದು ಈಕೆಯ ಆರಾಧನೆಯಿಂದ ಬುಧಗ್ರಹಕ್ಕೆ ಸಂಬಂಧಪಟ್ಟ ದೋಷಗಳೇನಾದರು ಇದ್ದರೆ ಅವು ನಿವಾರಣೆಯಾಗಿ ಬುಧಗ್ರಹದ ಶುಭಫಲ ಪ್ರಾಪ್ತಿಯಾಗುತ್ತದೆ. ಈಕೆಯನ್ನು ಶ್ವೇತವಸ್ತ್ರಗಳಿಂದ ಅಲಂಕರಿಸಿ ಅನ್ನದ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. ಷೋಡಶೋಪಚಾರ ಪೂಜೆಯ ಬಳಿಕ ಆರತಿಯನ್ನು ಮಾಡಲಾಗುತ್ತದೆ. ತನ್ನ ಪುತ್ರ ಸ್ಕಂದನ ರಕ್ಷಣೆಗಾಗಿ ತಾರಕಾಸುರನೊಂದಿಗೆ ಹೋರಾಡಿದ ಈ ಮಾತೆಯ ಆರಾಧನೆಯಿಂದ ಉತ್ತಮ ಸಂತಾನ ಹಾಗೂ ಆ ಸಂತಾನದ ಆಭ್ಯುದಯದ ಫಲವುಂಟಾಗುತ್ತದೆ. ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ಈ ತಾಯಿಯನ್ನು ಆರಾಧಿಸಲಾಗುತ್ತದೆ. ಭಕ್ತರ ನಿರ್ಮಲ ಭಕ್ತಿಗೆ ಬಹುಬೇಗ ಒಲಿಯುವ ಈ ಮಾತೆಯು ಅವರ ಸಕಲ ಇಷ್ಟಾರ್ಥಸಿದ್ಧಿಯ ವರ ನೀಡುತ್ತಾಳೆ ಹಾಗೂ ಭಕ್ತರ ಐಶ್ವರ್ಯಾಭಿವೃದ್ಧಿ ಉಂಟುಮಾಡುತ್ತಾಳೆ. ಈ ತಾಯಿಯ ಮೂಲಮಂತ್ರವನ್ನು ಕೆಳಗೆ ನೀಡಲಾಗಿದೆ.
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ ।
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ॥
6. ಕಾತ್ಯಾಯಿನಿ: ನವರಾತ್ರಿಯ ಆರನೆಯ ದಿನದಂದು ದೇವಿಯನ್ನು ಕಾತ್ಯಾಯಿನಿಯ ರೂಪದಲ್ಲಿ ಪೂಜಿಸುತ್ತಾರೆ, ಈಕೆಯನ್ನು ಗೌರಿ ಎಂದೂ ಕರೆಯಲಾಗುತ್ತದೆ. ಮಹಿಷಾಸುರನ್ನು ಮರ್ದಿಸಲು ತಮ್ಮೆಲ್ಲಾ ಶಕ್ತಿಗಳನ್ನೂ ಹಾಗೂ ಆಯುಧಗಳನ್ನೂ ತ್ರಿಮೂರ್ತಿಗಳು ಈಕೆಗೆ ನೀಡಿದರು. ಗುರುಗ್ರಹದ ಅಧಿದೇವತೆಯಾದ ಈಕೆಯ ಆರಾಧನೆಯಿಂದ ಗುರುಗ್ರಹದಿಂದುಂಟಾಗುವ ದೋಷಗಳು ನಿವಾರಣೆಯಾಗಿ ಶುಭಫಲವುಂಟಾಗುವುದು. ಸಿಂಹವಾಹಿನಿಯಾಗಿ ಚತುರ್ಭುಜೆಯಾದ ಈಕೆಯು ತನ್ನ ಬಲಹಸ್ತಗಳಲ್ಲಿ ಅಭಯಮುದ್ರೆ ಹಾಗೂ ಮಣಿಹಾರಗಳನ್ನು ಹೊಂದಿದ್ದು ಎಡಹಸ್ತಗಳಲ್ಲಿ ಕಮಲದ ದಂಟು ಹಾಗೂ ಕತ್ತಿಯನ್ನು ಹಿಡಿದಿದ್ದಾಳೆ. ಮಾನವನು ತನ್ನೊಳಗಿನ ಮೃಗೀಯಗುಣಗಳನ್ನು ನಿವಾರಸಿಕೊಳ್ಳಲು ಈ ತಾಯಿಯ ಕೃಪೆ ಅತ್ಯಗತ್ಯ. ಈಕೆಯು ಜ್ಞಾನ ಹಾಗೂ ವಿವೇಕಗಳನ್ನು ದಯಪಾಲಿಸುವವಳು. ಮೊದಲು ವಿಘ್ನನಿವಾರಕ ಗಣೇಶನ ಪೂಜೆ ಮಾಡಿದನಂತರ ತಾಯಿಯನ್ನು ಷೋಡಶೋಪಚಾರ ಪೂಜೆ ಮತ್ತು ಮಂಗಳಾರತಿಗಳಿಂದ ಪೂಜಿಸಬೇಕು. ಈ ದೇವಿಗೆ ಕೆಂಪುಗುಲಾಬಿ ಹಾಗೂ ಕದಂಬಪುಷ್ಪಗಳು ಪ್ರಿಯವಾದ್ದರಿಂದ ಅವುಗಳಿಂದ ಪೂಜಿಸಲಾಗುತ್ತದೆ. ಈ ತಾಯಿಯನ್ನು ಕೆಂಪುವಸ್ತ್ರಗಳಿಂದ ಅಲಂಕರಿಸಿ ಬೀಟ್ರೂಟ್ ಹಲ್ವಾದಂಥ ಗಾಢಬಣ್ಣದ ನೈವೇದ್ಯವನ್ನು ಅರ್ಪಿಸಬೇಕು. ಈ ತಾಯಿಯ ಮೂಲಮಂತ್ರವನ್ನು ಕೆಳಗೆ ನೀಡಲಾಗಿದೆ.
ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ ।
ಕಾತ್ಯಾಯನೀ ಶುಭಂ ದದ್ಯಾದೇವೀ ದಾನವಘಾತಿನೀ ॥
7. ಕಾಳರಾತ್ರಿ: ದೇವಿಯು ಭಯಂಕರ ರೂಪದಿಂದ ವಿಜೃಂಭಿಸುವ ತನ್ನ ಈ ರೂಪದಿಂದ ಶುಂಭ-ನಿಶುಂಭರ ಸಂಹಾರ ಮಾಡಿದಳು. ಇದು ಕೇವಲ ದುಷ್ಟಶಕ್ತಿಗಳ ದಮನಕ್ಕಾಗಿ ಧರಿಸಿದ ಭಯಯಂಕರ ರೂಪವಾಗಿದ್ದು, ತನ್ನ ಭಕ್ತರಿಗೆ ತಾಯಿಯು ರಕ್ಷಣೆಯನ್ನು ನೀಡುತ್ತಾಳೆ. ಅಜ್ಞಾನ-ಅಂಧಕಾರಗಳ ನಿವಾರಣೆಗಾಗಿ ಹಾಗೂ ಶತೃಬಾಧಾನಿವಾರಣೆಗಾಗಿ ಈ ತಾಯಿಯನ್ನು ಆರಾಧಿಸಲಾಗುತ್ತದೆ. ಮನೆ ಮತ್ತು ವ್ಯವಹಾರಗಳ ಮೇಲೆ ಮಾಂತ್ರಿಕ ಪರಿಣಾಮಗಳೇನಾದರೂ ಉಂಟಾಗಿವೆ ಎಂದೆನಿಸಿದರೆ ಈ ತಾಯಿಯ ಆರಾಧನೆಯಿಂದ ಬಿಡುಗಡೆ ದೊರೆಯುತ್ತದೆ. ಶನಿಗ್ರಹದ ಅಧಿದೇವತೆಯಾಗಿರುವ ಈ ಮಾತೆಯ ಆರಾಧನೆಯಿಂದ ಶನಿಗ್ರಹದಿಂದ ಉಂಟಾಗಬಹುದಾದ ದೋಷಗಳು ನಿವಾರಣೆಯಾಗುತ್ತವೆ. ಇಂದು ತಾಯಿಯನ್ನು ಕಡುನೀಲಿ ಬಣ್ಣದ ವಸ್ತ್ರಗಳಿಂದ ಅಲಂಕರಿಸಿ ಕಡುನೀಲಿ/ನೇರಳೆ ಬಣ್ಣದ ನೈವೇದ್ಯವನ್ನು ಅಥವಾ ನೇರಳೆಹಣ್ಣನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. ಈ ತಾಯಿಯ ಮೂಲಮಂತ್ರವನ್ನು ಕೆಳಗೆ ನೀಡಲಾಗಿದೆ.
ಏಕವೇಣೀ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ ।
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ॥
ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ ।
ವರ್ಧನಮೂರ್ಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ॥
8. ಮಹಾಗೌರಿ: ಮಹಾದೇವನಿಗೆ ಅತ್ಯಂತ ಪ್ರಿಯವಾದ ಈ ರೂಪದಲ್ಲಿ ತಾಯಿಯು ವಿಶುದ್ಧಚಕ್ರದಲ್ಲಿ ನೆಲೆಸಿ ಭಕ್ತರ ಮನಸ್ಸಿನ ವಿಸ್ಮರಣೆಯ ಕಲ್ಮಶವನ್ನು ಶುದ್ಧಿಗೊಳಿಸಿ ತನ್ನ ಪರಮಪವಿತ್ರರೂಪದ ಸಾಕ್ಷಾತ್ಕಾರ ನೀಡುತ್ತಾಳೆ. ವೃಷಭವಾಹನೆಯಾದ ಈ ಮಾತೆಯು ನಾಲ್ಕು ಕೈಗಳನ್ನು ಹೊಂದಿದವಳಾಗಿ ಎರಡು ಬಲಗೈಗಳಲ್ಲಿ ತ್ರಿಶೂಲ ಮತ್ತು ಆಭಯಮುದ್ರೆಗಳನ್ನು ಧರಿಸಿದ್ದಾಳೆ. ತನ್ನ ಎಡಗೈಗಳಲ್ಲಿ ತಂಬೂರಿ/ಡಮರು ಹಾಗೂ ಕಮಂಡಲು/ವರದಮುದ್ರೆಯನ್ನು ಹೊಂದಿದ್ದಾಳೆ. ಪರಮಪವಿತ್ರಳಾದ ಈಕೆಯು ಶುಭ್ರತೆ ಹಾಗೂ ಸ್ವಚ್ಛತೆಗಳ ಸಂಕೇತ. ಈಕೆಯು ಕ್ಷಮಿಸುವ ದೇವತೆಯಾಗಿದ್ದು ಪಾಪಿಗಳನ್ನೂ ಕ್ಷಮಿಸಿ ಅವರನ್ನು ಅವರ ಪಾಪಗಳಿಂದ ಶುದ್ಧೀಕರಿಸಿ ಉದ್ಧರಿಸುತ್ತಾಳೆ. ಈ ತಾಯಿಯನ್ನು ಗುಲಾಬಿಬಣ್ಣದ ವಸ್ತ್ರಗಳಿಂದ ಅಲಂಕರಿಸಿ ಗುಲಾಬಿ ಎಸಳಿನ ಸಿಹಿಪದಾರ್ಥದ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಈ ದೇವಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಭಕ್ತರ ಮನೆ-ಮನಗಳಲ್ಲಿ ಶಾಂತಿ-ನೆಮ್ಮದಿಗಳು ನೆಲಸುತ್ತವೆ. ಈ ತಾಯಿಯ ಮೂಲಮಂತ್ರವನ್ನು ಕೆಳಗೆ ನೀಡಲಾಗಿದೆ.
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ ।
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ॥
9. ಸಿದ್ಧಿದಾತ್ರಿ: ಜಗನ್ಮಾತೆಯ ಒಂಭತ್ತನೆಯ ರೂಪವಿದಾಗಿದ್ದು ಜ್ಞಾನ ಮತು ಬುದ್ಧಿಯ ಪ್ರತೀಕವಾದ ಈಕೆ ಸಕಲ ಸಿದ್ಧಿಗಳನ್ನೂ ಕರುಣಿಸುವವಳು. ಮಾರ್ಕಂಡೇಯ ಪುರಾಣದಲ್ಲಿ ಹೇಳಲಾಗಿರುವ ಅಷ್ಟಸಿದ್ಧಿಗಳಾದ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಹಾಗೂ ವಶಿತ್ವಗಳನ್ನು ದಯಪಾಲಿಸುವ ತಾಯಿ ಇವಳು. ಚತುರ್ಭುಜೆಯಾದ ಈ ದೇವಿಯು ತನ್ನ ಕೈಗಳಲ್ಲಿ ಚಕ್ರ, ಶಂಖ, ಗದೆ ಹಾಗೂ ಕಮಲಪುಷ್ಪಗಳನ್ನು ಧರಿಸಿದ್ದಾಳೆ. ಮಹಾದೇವನ ನಾಭಿಯಿಂದ ಮೂಡಿದ ಈ ತಾಯಿಯು ಸಕಲ ಸಿದ್ಧಿಗಳ ಒಡತಿ. ಸಿದ್ಧರು, ಯಕ್ಷರು, ಗಂಧರ್ವರು, ಕಿನ್ನರರು, ಕಿಂಪುರುಷರು, ಅಸುರರು, ಹಾಗೂ ದೇವತೆಗಳು ತಾವು ಬಯಸಿದ ಸಿದ್ಧಿಗಳನ್ನು ಹೊಂದಲು ಈ ತಾಯಿಯನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆರಾಧಿಸುತ್ತಾರೆ. ಎಲ್ಲಾ ರೀತಿಯ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಈ ತಾಯಿ ಹೊಂದಿದ್ದಾಳೆ. ಈ ತಾಯಿಯನ್ನು ಆಕಾಶನೀಲಿ ಅಥವಾ ನೇರಳೆಬಣ್ಣದ ವಸ್ತ್ರಗಳಿಂದ ಅಲಂಕರಿಸಿ ಅಂಜೂರದ ಸಿಹಿತಿನಿಸನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. ಈ ತಾಯಿಯ ಮೂಲಮಂತ್ರವನ್ನು ಕೆಳಗೆ ನೀಡಲಾಗಿದೆ.
ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ ।
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ॥
ಪರ್ವತರಾಜನ ಮಗಳಾಗಿ ಭೂಲೋಕದಲ್ಲಿ ಮಾನವಳಾಗಿ ಜನಿಸಿದರೂ ತನ್ನ ಅಪ್ರತಿಮ ಸಾಧನೆಯಿಂದಾಗಿ ಮಹಾದೇವನ ಮಡದಿಯಾದ ಹಾಗೂ ಜಗದ್ರಕ್ಷಣೆಗಾಗಿ ಹಲವು ರೂಪಗಳನ್ನು ಧರಿಸಿ ಅನೇಕ ಕ್ರೂರ ರಾಕ್ಷಸರ ವಿರುದ್ಧ ಹೋರಾಡಿ ಜಯಿಸಿ ಲೋಕರಕ್ಷಣೆ ಮಾಡಿದ ಜಗನ್ಮಾತೆಯನ್ನು ಭಕ್ತಿಯಿಂದ ಸ್ಮರಿಸಿ ಪ್ರಾರ್ಥಿಸುವ ಪಾವನ ಪರ್ವವೇ ನವರಾತ್ರಿ. ಜಗನ್ಮಾತೆಯು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ.
Discussion about this post