ಚಿಕ್ಕಮಗಳೂರು: ದತ್ತಪೀಠದ ವಿವಾಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಆಕ್ಷೇಪಣೆಗಳನ್ನು ಆಹ್ವಾನಿಸಿ, ಅಹವಾಲುಗಳನ್ನು ಆಲಿಸಿ ಅಂತಿಮ ತೀರ್ಮಾನವನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಈ ವಿಚಾರದಲ್ಲಿ ಒಂದು ತೀರ್ಮಾನ ತೆಗೆದುಕೊಂಡು ನ್ಯಾಯಾಲಯಕ್ಕೆ ಬನ್ನಿ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅದನ್ನು ನಾವು ಮಾಡಲೇ ಬೇಕಿದೆ. ಅದು ನಮ್ಮ ಜವಾಬ್ದಾರಿ ಇದೆ ಎಂದರು.
ದತ್ತಪೀಠದ ಸಂಪುಟ ಉಪ ಸಮಿತಿಗೆ ನಾವೇ ಅಧ್ಯಕ್ಷರಾಗಿದ್ದೇವೆ. ನಮ್ಮೊಂದಿಗೆ ಸಚಿವರಾದ ಅಂಗಾರ, ಶಶಿಕಲಾ ಜೊಲ್ಲೆ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ನಾವಂತು ಬಹಳ ಶೀಘ್ರದಲ್ಲಿ ತೀರ್ಮಾನ ಮಾಡಬೇಕು ಎನ್ನುವ ಹುಮ್ಮಸ್ಸಿನಲ್ಲಿದ್ದೇನೆ. ಸಾರ್ವಜನಿಕರು ಸಹಕಾರ ಮಾಡಿದರೆ ಬೇಗನೆ ಆಗುತ್ತದೆ ಎಂದರು.
ನಾವು ಈಗಾಗಲೇ ಪ್ರಾಥಮಿಕ ಹಂತದ ಸಭೆಯನ್ನ ಅಧಿಕಾರಿಗಳ ಜೊತೆ ಮಾಡಿದ್ದೇವೆ. ಕೋರ್ಟ್ ಆದೇಶದ ಪ್ರಕಾರ ಯಾವುದೇ ಆಕ್ಷೇಗಳಿದ್ದರೂ ಆಲಿಸಿ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕಿದೆ. ಆಸಕ್ತಿಉಳ್ಳ ವ್ಯಕ್ತಿಗಳು ನಮ್ಮ ಬಳಿ ಬಂದು ಹೇಳಿಕೊಳ್ಳಬಹುದು ಎಂದರು.
ಈ ಸಂಬಂಧ ನಾವು ಪತ್ರಿಕಾ ಪ್ರಕಟಣೆ ನೀಡಿ ಸಮಯವನ್ನೂ ಕೊಡುತೇವೆ. ಇದಕ್ಕೆ ಸಂಬಂಧ ಪಟ್ಟವರು ಯಾರಿದ್ದರೂ ದಾಖಲೆ ಸಹಿತ ವಾದ ಮತ್ತು ಅಭಿಪ್ರಾಯ ಮಂಡಿಸಬಹುದು ಎಂದು ತಿಳಿಸಿದರು.
ಈ ವಿಚಾರದಲ್ಲಿ ನಾವು ಬಹಳ ಸ್ಪಷ್ಟವಾಗಿದ್ದೇವೆ. ಯಾರಾದರೂ ಮಾತನಾಡಬೇಕು ಎಂದಿದ್ದರೆ ದಾಖಲೆಗಳ ಸಹಿತ ಬರಬೇಕು. ಈಗಾಗಲೇ ಸಾಕಷ್ಟು ಸಮಯ ಹಾಳಾಗಿದೆ. ಸುಮ್ಮನೆ ಅರ್ಜಿಗಳನ್ನು ತೆಗೆದುಕೊಳ್ಳುವ ಬದಲು ಒಂದಷ್ಟು ದಾಖಲೆಗಳಿದ್ದರೆ ನಾವು ೨೦ ದಿನ ಅಥವಾ ೧ ತಿಂಗಳು ಕಾಲಾವಕಾಶ ಕೊಟ್ಟು ಮುಜುರಾಯಿ ಆಯುಕ್ತರ ಕಚೇರಿ ಅಥವಾ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ಅದನ್ನು ಆಲಿಸುತ್ತೇವೆ ಎಂದರು.
ಒಂದು ವೇಳೆ ಅರ್ಜಿಗಳ ಸಂಖ್ಯೆ ಹೆಚ್ಚಾದಲ್ಲಿ ನಾವು ಚಿಕ್ಕಮಗಳೂರಿಗೆ ಬಂದು ಆಲಿಸುತ್ತೇವೆ. ಕಡಿಮೆ ಅರ್ಜಿಗಳಿದ್ದರೆ ಸನ್ನಿವೇಶ ನೋಡಿಕೊಂಡು ಎಲ್ಲಿ ಆಲಿಸಬೇಕು ಎನ್ನುವ ಕುರಿತು ನಾವೊಂದು ತೀರ್ಮಾನಕ್ಕೆ ಬರುತ್ತೇವೆ ಎಂದು ತಿಳಿಸಿದರು.
ಯಾರ್ಯಾರು ಏನೇನು ಆಕ್ಷೇಪಗಳನ್ನು ಸಲ್ಲಿಸುತ್ತಾರೆ ಎನ್ನುವುದರ ಮೇಲೆ ಎಷ್ಟು ಅವಧಿಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು ಎನ್ನುವುದು ನಿರ್ಧಾರವಾಗುತ್ತದೆ. ಆಕ್ಷೇಪ ಸಲ್ಲಿಸಲು ಅವಕಾಶ ಕೊಡದೇ ಏನೇ ತೀರ್ಮಾನ ಮಾಡಿದರೂ ಕೋರ್ಟ್ ಮತ್ತೆ ಈಬಗ್ಗೆ ಸರ್ಕಾರವನ್ನು ಪ್ರಶ್ನಿಸುತ್ತದೆ ಎಂದು ಹೇಳಿದರು.
Discussion about this post