ಕಡೇನಂದಿಹಳ್ಳಿ (ಶಿಕಾರಿಪುರ ತಾಲೂಕ): ಮನುಷ್ಯನ ಜೀವನ ಗೊತ್ತು ಗುರಿಗಳಿಲ್ಲದೇ ಲಂಗು ಲಗಾಮು ಇಲ್ಲದ ಕುದುರೆಯಂತೆ ಆಗಿದೆ. ಜೀವನ ಉನ್ನತಿಗೆ ದುಡಿಮೆ ಶಾಂತಿಯ ಬದುಕಿಗೆ ಭಗವಂತನ ನೆನಹು ಇದ್ದರೆ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಕಡೇನಂದಿಹಳ್ಳಿ ಕ್ಷೇತ್ರದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭದ ೭ನೇ ದಿನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ ದೇವರು ಎಲ್ಲೆಡೆ ನೆಲೆಸಿದ್ದಾನೆ. ನಮ್ಮೆಲ್ಲರಲ್ಲಿ ದೇವರು ಇದ್ದಾನೆ ಆದರೆ ನಮ್ಮಲ್ಲಿ ದೇವರು ಇರುವನೆಂಬ ನಂಬಿಕೆ ವಿಶ್ವಾಸ ಸಂಪಾದಿಸಬೇಕು. ಚಂದ್ರಕಾಂತ ಶಿಲೆಯಲ್ಲಿ ನೀರು ಸೂರ್ಯಕಾಂತ ಶಿಲೆಯಲ್ಲಿ ಬೆಂಕಿ ಬಿತ್ತುವ ಬೀಜದಲ್ಲಿ ಅಂಕುರ ಇರುವಂತೆ ಜೀವಾತ್ಮರಲ್ಲಿ ಪರಮಾತ್ಮ ನೆಲೆಸಿದ್ದಾನೆ ಎಂದರು.
ತನ್ನನ್ನು ತಾನು ದೇವರಿಗಾಗಿ ಧರ್ಮಕ್ಕಾಗಿ ಅರ್ಪಿಸಿಕೊಂಡು ಬಾಳಿದರೆ ಜೀವನ ಉಜ್ವಲಗೊಳ್ಳುವುದು. ಜಗ ಬೆಳಗಲು ಸೂರ್ಯ ಬೇಕು. ಬದುಕು ಬೆಳೆಯಲು ಗುರು ಬೇಕು. ಪರಮಾತ್ಮನಿಗೂ ಜೀವಾತ್ಮನಿಗೂ ಇರುವ ಸಂಬಂಧವನ್ನು ಸಂಸ್ಕಾರ ಸಂಸ್ಕೃತಿಯ ಮೂಲಕ ಶ್ರೀ ಗುರು ಬಾಳಿನಲ್ಲಿ ಬೆಳಕು ಕೊಡುವವನಾಗಿದ್ದಾನೆ. ಗುರುವ ನರ ಎಂದವಗೆ ಹರನ ಶಿಲೆ ಎಂದವಗೆ ಕರುಣ ಪ್ರಸಾದ ಎಂಜಲೆಂದವಗೆ ನಾಯಕ ನರಕ ತಪ್ಪದೆಂದು ಸರ್ವಜ್ಞ ಕವಿ ಎಚ್ಚರಿಸಿದ್ದುಂಟು. ಅವ್ಯಕ್ತವಾಗಿರುವ ಭಗವಂತನನ್ನು ವ್ಯಕ್ತ ರೂಪದಲ್ಲಿ ತೋರಿಸುವಾತನೇ ಶ್ರೀ ಗುರು ಎಂಬುದನ್ನು ಮರೆಯಬಾರದು. ತನಗಾಗಿ ಬಯಸುವುದು ಜೀವ ಗುಣವಾದರೆ ಎಲ್ಲರಿಗಾಗಿ ಬಯಸುವುದು ದೇವ ಗುಣವಾಗಿದೆ. ಬೆಟ್ಟಕ್ಕೆ ಬೆಟ್ಟದ ಅವಶ್ಯಕತೆ ಇಲ್ಲದೇ ಇರಬಹುದು. ಆದರೆ ಮನುಷ್ಯನಿಗೆ ಮನುಷ್ಯನ ಅವಶ್ಯಕತೆ ಇದೆ ಎನ್ನುವುದನ್ನು ಸದಾ ನೆನಪಿಸಿಕೊಂಡು ಬಾಳಬೇಕೆಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ವೀರಶೈವ ಗುರು ಪರಂಪರೆ ಬೆಳೆಸಿದ ೯೨ನೇ ವಯಸ್ಸಿನ ಹುಮನಾಬಾದ್ ತಾಲೂಕಿನ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳವರಿಗೆ ಶಿವಾಚಾರ್ಯ ರತ್ನ ಪ್ರಶಸ್ತಿಯನ್ನಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಪ್ರಶಸ್ತಿ ಪುರಸ್ಕೃತರು ಮಾತನಾಡಿ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳ ಕೃಪಾ ಕಾರುಣ್ಯ ನಮ್ಮ ಶ್ರೀಮಠದ ಮೇಲಿರುವುದು ನನ್ನ ಭಾಗ್ಯವೆಂದು ಭಾವಿಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಮಲೆನಾಡು ಅಭಿವೃದ್ಧಿ ಮಂಡಳದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಧರ್ಮ ಮತ್ತು ಗುರುವಿನ ಅವಶ್ಯಕತೆಯ ಬಗೆಗೆ ಮಾತನಾಡಿದರು.
ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ವಿಶ್ವಬಂಧುತ್ವ ಸಾರಿದ ಆದರ್ಶ ಗುರು ಪರಂಪರೆ ಹೊಂದಿದ ವೀರಶೈವ ಧರ್ಮದ ವೈಶಿಷ್ಠ್ಯತೆ ಕುರಿತು ಉಪದೇಶಾಮೃತವನ್ನಿತ್ತರು.
ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಚನ್ನಗಿರಿ ವಿರಕ್ತಮಠದ ಡಾ|| ಬಸವ ಜಯಚಂದ್ರ ಸ್ವಾಮಿಗಳು, ಕೊಡಿಯಾಲ ಹೊಸಪೇಟೆಯ ಜಗದೀಶ್ವರ ಸ್ವಾಮಿಗಳು, ಶಿವಮೊಗ್ಗ ಉಮೇಶಾರಾಧ್ಯ, ಗಂಗಿಭಾವಿ ಶಶಿಧರ ಯಲಿಗಾರ, ರೈತಧ್ವನಿಯ ಬಸವರಾಜ ಕುರುಗೋಡಿ ಮೊದಲಾದ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತು ಆಶೀರ್ವದಿಸಿದರು. ಸಮಾರಂಭದ ಸಮ್ಮುಖವನ್ನು ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಕಡೇನಂದಿಹಳ್ಳಿ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು.
ಕುಮಾರಿ ಅನುಷಾ ಶಿವಾನಂದಪ್ಪ ಜಾಡರ ಅವರಿಂದ ಭರತ ನಾಟ್ಯ ಪ್ರದರ್ಶನ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಕಡೇನಂದಿಹಳ್ಳಿ ಮಂಜಪ್ಪ ಕೆ.ಎ. ಶಿಕ್ಷಕರು ಸ್ವಾಗತಿಸಿದರು. ಗದುಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಅರುಣಕುಮಾರ ಐನಳ್ಳಿಮಠ ಯಳಹೊಳೆ ಸಂಗೀತ ಸೇವೆ ಸಲ್ಲಿಸಿದರು. ಶಾಂತಾ ಆನಂದ ನಿರೂಪಿಸಿದರು. ಸಮಾರಂಭದ ನಂತರ ಆಕರ್ಷಕ ನಜರ್ ಸಮರ್ಪಣೆ(ಗೌರವ) ಸಮರ್ಪಣೆ ಜರುಗಿತು.
ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಆಶೀರ್ವದಿಸಿದರು.

























Discussion about this post