ಚಿಕ್ಕಮಗಳೂರು : ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಪೀಠ ಸೇರಿದಂತೆ ಗಿರಿ ಪ್ರದೇಶಗಳ ರಸ್ತೆಯ ಇಕ್ಕೆಲಗಳಲ್ಲಿರುವ ಕಸದ ತೊಟ್ಟಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕಸ ತುಂಬಿದ್ದು ಅದನ್ನು ತೆಗೆಯದೇ ಇರುವ ಕಾರಣ ರಸ್ತೆಯ ಪಕ್ಕದಲ್ಲಿ ಬಿದ್ದಿವೆ. ಪ್ಲಾಸ್ಟಿಕ್ ಬ್ಯಾಗ್ ಮತ್ತು ಚೀಲಗಳಲ್ಲಿ ಕಸ ತುಂಬಿ ಹಾಕಲಾಗಿದೆ, ಮದ್ಯದ ಬಾಟಲ್, ನೀರಿನ ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಹಲವಾರು ಪರಿಸರಕ್ಕೆ ಹಾನಿಯಾಗುವ ಕಸವನ್ನು ವ್ಯವಸ್ಥಿತವಾಗಿ ಹಾಕಲಾಗುತ್ತಿದೆ.
ಗಿರಿ ಪ್ರದೇಶದಲ್ಲಿ ನಡೆಯುತ್ತಿರುವ ಹೋಂಸ್ಟೇ ಮತ್ತು ರೆಸಾರ್ಟ್ಗಳು ತಮ್ಮಲ್ಲಿ ಸಂಗ್ರಹಿಸಿರುವ ತ್ಯಾಜ್ಯ, ಮದ್ಯದ ಬಾಟಲ್ಗಳು ಸೇರಿದಂತೆ ಹಾನಿಕಾರಕ ಕಸವನ್ನು ತಂದು ರಾತ್ರೋರಾತ್ರಿ ಕಸ ಸಂಗ್ರಹ ತೊಟ್ಟಿಗಳಲ್ಲಿ ಹಾಕಲಾಗುತ್ತಿದೆ. ಹೋಂ ಸ್ಟೇ, ರೆಸಾರ್ಟ್ ಮಾಲೀಕರ ಬೇಜವಾಬ್ದಾರಿ ಕೆಲಸದಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅನೇಕ ದಿನಗಳಿಂದ ರಜೆ ಇದ್ದ ಕಾರಣ ಹೋಂ ಸ್ಟೇಟ್ ಮತ್ತು ರೆಸಾರ್ಟ್ಗೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಅಲ್ಲಿ ಸಂಗ್ರಹವಾದ ಕಸವನ್ನು ಗಿರಿ ಪ್ರದೇಶದ ರಸ್ತೆಯಲ್ಲಿ ತಂದು ಹಾಕಲಾಗುತ್ತಿದೆ. ಹೋಂ ಸ್ಟೇ, ರೆಸಾರ್ಟ್ಗಳು ಕಸ ವಿಲೇವಾರಿ ಮಾಡಿಕೊಳ್ಳಲು ತಾವೇ ಯಾವ ವ್ಯವಸ್ಥೆ ಮಾಡಿಕೊಳ್ಳಬೇಕು, ಮಾಲಿನ್ಯ ನಿಯಂತ್ರಣ ಮಂಡಳಿ ಇದನ್ನು ಪರಿಶೀಲಿಸಿ ಅನುಮತಿ ನೀಡಬೇಕು ಎಂಬ ಮಾರ್ಗಸೂಚಿಗಳಿದ್ದರೂ ಸಹ ಅದನ್ನು ಉಲ್ಲಂಘಿಸಿದ ಪರಿಣಾಮ ಗಿರಿ ಶ್ರೇಣಿಯಲ್ಲಿ ಪರಿಸರ ಹಾಳಾಗುತ್ತಿದೆ.
ಕಸವನ್ನು ವ್ಯವಸ್ಥಿತವಾಗಿ ಗಿರಿ ಶ್ರೇಣಿಯಲ್ಲಿ ಹಾಕುತ್ತಿರುವುದರಿಂದಾಗಿ ವನ್ಯಜೀವಿಗಳು, ಪಕ್ಷಿಗಳು ಅದನ್ನು ತಿನ್ನುವ ಆತಂಕ ಕಾರಣವಾಗಿದೆ, ಅತ್ತಿಗುಂಡಿ ಸಮೀಪ ಕಡವೆ ಒಂದು ಸಾವಿಗೀಡಾಗಿದ್ದು, ಅದರ ಉದರಾದಲ್ಲಿ ೫ ಕೆಜಿ ಕಪ್ಪು ಪ್ಲಾಸ್ಟಿಕ್ ಚೀಲ ಸಿಕ್ಕಿದ ಉದಾರಹಣೆಗಳಿವೆ. ಅದಲ್ಲದೇ ಆ ಪ್ರದೇಶದಲ್ಲಿ ವಾಸಿಸುವ ಮಂಗಗಳು, ಜಿಂಕೆ ಸೇರಿದಂತೆ ಹಲವು ಪ್ರಾಣಿಗಳು ಈ ಕಸದ ತೊಟ್ಟಿಯ ಕಸವನ್ನೇ ಅಶ್ರಯಿಸಿವೆ. ಕಸದ ತೊಟ್ಟಿಯಲ್ಲಿ ಕಸ ತುಂಬಿ ರಸ್ತೆಯಲ್ಲಿ ಹರಡಿರುವುದು ಗಿರಿಯ ಸೌಂದರ್ಯಕ್ಕೆ ದಕ್ಕೆಯಾಗಿದ್ದು ಬರುವ ಪ್ರವಾಸಿಗರು ಇರಿಸುಮುರಿಸು ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಿರಿ ಪ್ರದೇಶದಲ್ಲಿ ಸ್ಥಳೀಯ ಹೋಂ ಸ್ಟೇ, ರೆಸಾರ್ಟ್, ಪ್ರವಾಸಿಗರಾಗಲಿ ಕಸ ಹಾಕುವುದನ್ನು ನಿಷೇಧಿಸಬೇಕು. ಕೈಮರ ತಪಾಸಣಾ ಗೇಟ್ ನಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ಬಾಟಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಬೇಕು. ಗಿರಿಯ ರಸ್ತೆಯಲ್ಲಿ ಕಸದ ತೊಟ್ಟಿಯಲ್ಲಿ ಕಸ ವಿಲೇವಾರಿ ದಿನಂಪ್ರತಿ ನಡೆಯಬೇಕು. ಅಗತ್ಯ ಇರುವ ಕಡೆ ಮಾತ್ರ ಕಸದ ತೊಟ್ಟಿ ಇಡಬೇಕು. ಕಸ ಹಾಕುವ ಹೋಂ ಸ್ಟೇ ರೆಸಾರ್ಟ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿಗೆ ಹೆಚ್ಚಿನ ಆದ್ಯತೆ ಜಿಲ್ಲಾಡಳಿತ ನೀಡಬೇಕು. ಇದಕ್ಕೆ ಹಣ ಮೀಸಲಿಡಬೇಕು. ಈಗಾಗಲೇ ಕೈಮರ ಚಂದ್ರದ್ರೋಣ ಅರಣ್ಯ ಸಮಿತಿಯಲ್ಲಿ ಸಾಕಷ್ಟು ಹಣವಿದ್ದು ಅದನ್ನು ಸೂಕ್ತ ರೀತಿಯಲ್ಲಿ ಉಪಯೋಗ ಮಾಡಬೇಕು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು.
ಗಿರಿ ಪ್ರದೇಶದಲ್ಲಿ ಪ್ರವಾಸಿಗರ ಸಾವಿರಾರು ವಾಹನಗಳು ಒಮ್ಮೆಲೇ ಹೋಗುತ್ತಿದು ಇದಕ್ಕೆ ಕಡಿವಾಣ ಹಾಕಿ ಸೀಮಿತವಾಗಿ ವಾಹನ ಬಿಡಬೇಕು ಎಂದು ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್ ಆಗ್ರಹಿಸಿದ್ದಾರೆ.
Discussion about this post