ಬೆಂಗಳೂರು:ಪುನೀತ್ ಇಹಲೋಕ ತ್ಯಜಿಸಿ ಇವತ್ತಿಗೆ ಹನ್ನೊಂದನೇ ದಿನವಾದರೂ, ಸ್ಮಾರಕಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಪುಟ್ಟಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲ ವಯೋಮಾನದವರು ಸಾಗರೋಪಾದಿಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ಕಡೆ ಹರಿದು ಬರುತ್ತಿದ್ದಾರೆ. ಸರ್ಕಾರ, ಸುಮಾರು 300 ಪೊಲೀಸರನ್ನು ಭದ್ರತೆಗಾಗಿ ನೇಮಿಸಿದೆ. ಪ್ರತಿದಿನ 12 ಗಂಟೆಗೆ ಒಂದು ಪಾಳಿಯಂತೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ, ದಿನಕ್ಕೆ ಸರಾಸರಿ 30ಸಾವಿರಕ್ಕೂ ಹೆಚ್ಚು ಪುನೀತ್ ಸ್ಮಾರಕಕ್ಕೆ ಭೇಟಿ ನೀಡುತ್ತಿದ್ದಾರೆ.
87 ವರ್ಷದ ನಂಜಮ್ಮ ಇಳಿ ವಯಸ್ಸಿನಲ್ಲಿ ಹೃದಯದಲ್ಲಿ ಪ್ರೀತಿ ತುಂಬಿಕೊಂಡು ಅಪ್ಪು ಸಮಾಧಿ ನೋಡಲು ಬಂದಿದ್ದರು. ಪೊಲೀಸರು ಈಕೆಯನ್ನು ಸರತಿಯಲ್ಲಿ ನಿಲ್ಲಿಸದೆ ನೇರವಾಗಿ ಸಮಾಧಿಯ ಬಳಿಗೇ ಬಿಟ್ಟು ಮಾನವೀಯತೆ ಮೆರೆದರು. ಪುನೀತ್ ತಂದೆ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ ನಾನು. ಆಮೇಲೆ,ಈ ಅಭಿಮಾನಿ ಪುನೀತ್ ಅವರಿಗೂ ಮುಂದುವರಿಯಿತು. ಅವನ ಎಲ್ಲ ಚಿತ್ರ ನೋಡಿದ್ದೇನೆ. ರಾಜ್ಕುಮಾರ್ ಕುಟುಂಬ ಅಂದರೆ ನನಗೆ ವಿಶೇಷ ಪ್ರೀತಿ ಇದೆ. ಪುನೀತ್ ನಿಧನ ನನ್ನ ಮಗನನ್ನೇ ಕಳೆದು ಕೊಂಡ ಅನಾಥ ಭಾವ ನೀಡಿದೆ ಎಂದು ನಂಜಮ್ಮ ನೋವನ್ನು ತೋಡಿಕೊಂಡರು.
ಮಳೆಯನ್ನು ಲೆಕ್ಕಿಸದೆ ಆಗಮಿಸುತ್ತಿರುವ ಅಭಿಮಾನಿಗಳು ಪುಟ್ಟು ಪುಟ್ಟ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದಾರೆ. ಪೊಲೀಸರು, ಛತ್ರಿ ಹಿಡಿದು, ಈ ಮಕ್ಕಳನ್ನು ಎತ್ತು ಕೊಂಡು ಪುನೀತ್ ಸಮಾಧಿ ದರ್ಶನ ಮಾಡಿಸುವುದು ಸಾಮಾನ್ಯ ಎನ್ನುವಂತಾಗಿದೆ.
ಶನಿವಾರ, ಬಳ್ಳಾರಿ ಮೂಲದ ಗುರು ತನ್ನ ಪ್ರಿಯತಮೆ ಗಂಗಾಳೊಂದಿಗೆ ಪುನೀತ್ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲೇ ಮದುವೆ ಮಾಡಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನಾನೊಬ್ಬ ಡ್ಯಾನ್ಸರ್. ನನ್ನ ಬಾಲ್ಯದಿಂದಲೂ ಪುನೀತ್ ಅವರ ಚಿತ್ರವನ್ನು ನೋಡಿ ಬೆಳೆದವನು. ಅವರನ್ನು ಭೇಟಿಯಾಗುವುದು ಕನಸಾಗಿ ಹೋಯಿತು. ಆದರೆ, ನನ್ನ ಮದುವೆ ಈಗ ದೇವಸ್ಥಾನದಂತಾಗಿರುವ ಪುನೀತ್ ಅವರ ಈ ಸ್ಮಾರಕದಲ್ಲೇ ಆಗಬೇಕು ಎನ್ನುತ್ತಾರೆ.
ಇದನ್ನೂ ಓದಿ: Vision for two: ದಾನಮಾಡಿದ ಪುನೀತ್ ರಾಜ್ಕುಮಾರ್ ಕಣ್ಣುಗಳಿಂದ ಇಬ್ಬರಿಗೆ ದೃಷ್ಠಿ
Discussion about this post