ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಮಲೆನಾಡು ಮತ್ತು ಬಯಲು ಸೀಮೆಗಳಲ್ಲಿ ಬೆಳೆದು ಕಟಾವಿಗೆ ಬಂದಿದ್ದ ಬೆಳೆಗಳು ಹಾನಿಗೊಳಗಾಗಿ ನೂರಾರು ಕೋಟಿ ರೂ.ಗಳ ನಷ್ಟ ಸಂಭವಿಸಿದ್ದು, ಸಮೀಕ್ಷೆಯ ಮೂಲಕ ನಷ್ಟವನ್ನು ಅಂದಾಜಿಸಿ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯ ಜೊತೆಗೆ ಅಕಾಲಿಕ ಮಳೆಯಾಗಿದ್ದರಿಂದ ಮಲೆನಾಡಿನಲ್ಲಿ ಕಟಾವಿಗೆ ಬಂದಿದ್ದ ಕಾಫಿ, ಮೆಣಸು ಬೆಳೆಗಳು ದೊಡ್ಡ ಪ್ರಮಾಣದಲ್ಲಿ ಹಾನಿಗೊಂಡಿವೆ. ಬಯಲು ಸೀಮೆಯಲ್ಲಿ ಕಟಾವಿಗೆ ಬಂದಿದ್ದ ಈರುಳ್ಳಿ, ರಾಗಿ, ಜೋಳ ಪೂರ್ಣ ಹಾನಿಗೆ ಒಳಗಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ ಬಿದ್ದಿದ್ದ ಅಕಾಲಿಕ ಮಳೆಯಿಂದ ಕಾಫಿ, ಕಾಳು ಮೆಣಸು, ಬತ್ತ, ರಾಗಿ, ಈರುಳ್ಳಿ, ಜೋಳ ಸೇರಿದಂತೆ ಅನೇಕ ವಾಣಿಜ್ಯ ಬೆಳೆಗಳು ಹಾನಿಗೊಂಡು ೭೦೦ ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ಸಂಭವಿಸಿತ್ತು. ಜೊತೆಗೆ ಭೂ ಕುಸಿತ, ಕಾಲುವೆಗಳು ಕೊಚ್ಚಿ ಹೋಗಿ ಹಾನಿ, ಮನೆಗಳಿಗೆ ಹಾನಿ ಜೊತೆಗೆ ಪ್ರಾಣ ಹಾನಿಯೂ ಸಂಭವಿಸಿತ್ತು. ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಾಗಿತ್ತೇ ವಿನಾ ಬೆಳೆಗಾರರಿಗೆ ಯಾವುದೇ ಪರಿಹಾರಗಳು ದೊರಕದೆ ತೊಂದರೆಗೆ ಸಿಲುಕಿದ್ದಾರೆ. ಬೆಳೆಗಾರರಿಗೆ ಅನುಕೂಲವಾಗದಿರುವುದನ್ನು ಗಮನಿಸಿದಾಗ ಸಮೀಕ್ಷೆ ಕೇವಲ ಕಣ್ಣೊರೆಸುವ ತಂತ್ರವಾಗಿ ನಡೆದಿತ್ತೆಂಬ ಸಂಶಯ ಮೂಡಿದೆ ಎಂದು ಆರೋಪಿಸಲಾಗಿದೆ.
ಈ ಬಾರಿಯ ಅಕಾಲಿಕ ಮಳೆಯಿಂದ ಹಿಂದೆಂದಿಗಿಂತಲೂ ಹೆಚ್ಚಿನ ಬೆಳೆಗಳು ಹಾನಿಗೆ ಒಳಗಾಗಿವೆ. ಕಾಫಿ ಬೆಳೆ ಕಟಾವಿಗೆ ಬಂದಿದ್ದು, ಮಳೆ ಮತ್ತು ವಾತಾವರಣ ವೈಪರಿತ್ಯದಿಂದ ಹಣ್ಣುಗಳು ಕೆಳ ಉದುರುತ್ತಿವೆ. ಕ್ರಿಮಿನಾಶಕ ಸಿಂಪಡಿಸಲು ಸಾಧ್ಯವಾಗದ ಕಾರಣದಿಂದ ಎಲೆ ಚುಕ್ಕೆ ರೋಗದ ಭೀತಿಯು ಎದುರಾಗಿದೆ. ಗಿಡದಿಂದ ಉದುರಿರುವ ಕಾಫಿ ಹಣ್ಣು ಎರಕಲು ಕಾರ್ಮಿಕರ ಕೊರತೆ ಎದುರಾಗಿದೆ. ಕಳೆದೆಲ್ಲ ವರ್ಷಗಳಿಗಿಂತ ಈ ವರ್ಷ ಕಾಫಿ ಬೆಳೆಗಾರರು ದೊಡ್ಡ ಮಟ್ಟದ ನಷ್ಟಕ್ಕೆ ಒಳಗಾಗಲಿದ್ದಾರೆ. ಕಾಳು ಮೆಣಸು ಬೆಳೆಯ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅಕಾಲಿಕ ಮಳೆ ನಿರಂತರ ಸುರಿದ ಪರಿಣಾಮ ಬಳ್ಳಿಗಳಲ್ಲಿ ಕಾಳು ಮೆಣಸು ಗೊನೆ ಕಟ್ಟಲು ಸಾಧ್ಯವಾಗದೆ ಫಸಲಿನ ಇಳುವರಿ ಕ್ಷೀಣಿಸಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಕಾಳು ಮೆಣಸನ್ನೆ ನಂಬಿದ್ದ ಬೆಳೆಗಾರರು ಸಂಪೂರ್ಣವಾಗಿ ನೆಲ ಕಚ್ಚಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯ ಚಿಕ್ಕಮಗಳೂರು, ತರೀಕೆರೆ, ಅಜ್ಜಂಪುರ, ಕಡೂರು ತಾಲೂಕುಗಳಲ್ಲಿ ಕಟಾವಿಗೆ ಬಂದಿದ್ದ ಈರುಳ್ಳಿ ಮಳೆಯಿಂದ ಪೂರ್ಣ ಕೊಳೆತು ಬೆಳೆಗಾರರು ಕೈ ಸುಟ್ಟುಕೊಂಡಿದ್ದಾರೆ. ಕಟಾವು ಮಾಡಿ ಹೊಲಗಳಲ್ಲಿ ಹಾಕಲಾಗಿದ್ದ ಈರುಳ್ಳಿ ರಾಶಿ ಕರಗಿ ಹೋಗಿದೆ. ಅದರಿಂದ ಬೀಜ, ಗೊಬ್ಬರದ ಖರ್ಚು ಬೆಳೆಗಾರರಿಗೆ ಸಿಕ್ಕದಂತ ಕೆಟ್ಟ ಪರಿಸ್ಥಿತಿ ಎದುರಾಗಿದೆ ಅಲ್ಲದೇ ಈ ಭಾಗದಲ್ಲಿ ಹೆಚ್ಚಾಗಿ ಜೋಳ ಬೆಳೆದಿದ್ದು, ಇಳುವರಿ ಉತ್ತಮವಾಗಿತ್ತು. ಅಕಾಲಿಕ ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗದೆ ಗಿಡದಲ್ಲೇ ಜೋಳ ಮೊಳಕೆಯೊಡೆದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ರಾಗಿ ಬೆಳೆ ಪೂರ್ಣ ಮಲಗಿಕೊಂಡಿರುವುದರಿAದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ತಲುಪಿದೆ ಎಂದು ತಿಳಿಸಿದ್ದಾರೆ.
ಒಂದು ಕಡೆ ಕೃಷಿ ಸಲಕರಣೆಗಳು, ಗೊಬ್ಬರ ಬೆಲೆಯಲ್ಲಿ ಹೆಚ್ಚಳ, ಕಾರ್ಮಿಕರ ಕೊರತೆ. ಇನ್ನೊಂದು ಕಡೆ ಅಕಾಲಿಕ ಮಳೆಯಿಂದ ಬೆಳೆ ಹಾನಿ. ಕಟಾವಿಗೆ ಬಂದ ಬೆಳೆ ಕೈಗೆ ಬಾರದ ಕಾರಣದಿಂದ ಜಿಲ್ಲೆಯಲ್ಲಿ ಬಹುತೇಕ ಬೆಳೆಗಾರರು ನಷ್ಟ ಅನುಭವಿಸಿದ್ದು, ವಿವಿಧ ಬ್ಯಾಂಕುಗಳಿಂದ ಬೆಳೆದ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗದೆ ಆತಂಕಕ್ಕೆ ಒಳಗಾಗಿದ್ದಾರೆ . ಕೇಂದ್ರದ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಅತಿಥಿಗಳಂತೆ ಆಗೊಮ್ಮೆ ಈಗೊಮ್ಮೆ ಜಿಲ್ಲೆಗೆ ಮುಖ ತೋರಿಸಿ ಹೋಗುತ್ತಿದ್ದು, ತಮ್ಮ ಅಳಲನ್ನು ಯಾರ ಮುಂದೆ ಹೇಳಿಕೊಳ್ಳಬೇಕು ಎಂಬ ಕೆಟ್ಟ ಪರಿಸ್ಥಿತಿಯನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬೆಳೆ ಹಾನಿ ಸಮೀಕ್ಷೆಗೆ ಸೂಚನೆ ನೀಡಬೇಕು, ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿರುವುದರಿಂದ ಸೂಕ್ತವಾದ ಪರಿಹಾರ ಕ್ರಮಗಳನ್ನು ಕೈಗೊಳ್ಳುವವರಿಗೂ ಬ್ಯಾಂಕುಗಳು ಯಾವುದೇ ಸಾಲ ವಸೂಲಾತಿಗೆ ಮುಂದಾಗಬಾರದು ಎಂದು ಆಗ್ರಹಿಸಲಾಗಿದೆ.
Discussion about this post