ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದ ಮುಂದಿನ ನಾಲ್ಕು ದಿನಗಳ ಕಾಲ ಅರ್ಧ ಕರ್ನಾಟಕದ ಅರ್ಧಭಾಗ ಮಳೆಯಿಂದ ನಡುಗುವ ಸಾಧ್ಯತೆ ಇದೆ. ಚಂಡಮಾರುತವು ಬುಧವಾರ ಬಂಗಾಳ ಕೊಲ್ಲಿಯಿಂದ ತಮಿಳುನಾಡು ಪ್ರವೇಶಿಸಿದ್ದು, ಪಕ್ಕದ ರಾಜ್ಯವಾಗಿರುವ ಆಂಧ್ರಪ್ರದೇಶಕ್ಕೆ ಗುರುವಾರ ತಲುಪಿದೆ. ಹೀಗಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ ಕರ್ನಾಟಕದ ಕೆಲಭಾಗಕ್ಕೆ ಆರೆಂಜ್ ಅಲರ್ಟ್, ಇನ್ನು ಕೆಲವು ಭಾಗಕ್ಕೆ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ ಮತ್ತು ತುಮಕೂರು ಜಿಲ್ಲೆಗಳು ಆರೆಂಜ್ ಅಲರ್ಟ್ ವ್ಯಾಪ್ತಿಗೆ ಬರುವ ಜಿಲ್ಲೆಗಳಾಗಿವೆ. ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ನಗರಗಳಿಗೆ ಎಲ್ಲೊ ಅಲರ್ಟ್ ಘೋಷಣೆ ಮಾಡಿದೆ.
ಗುರುವಾರ ನೈಋತ್ಯ ಭಾಗದಿಂದ ಚೆನ್ನೈ ಕಡೆಗೆ ಗಂಟೆಗೆ 130ಕಿ.ಮೀ ವೇಗದಲ್ಲಿ, ಈಶಾನ್ಯ ಭಾಗದಿಂದ ಪಾಂಡಿಚೆರಿ ಕಡೆಗೆ ಗಂಟೆಗೆ 150 ಕಿ.ಮೀವೇಗದಲ್ಲಿ ಚಂಡಮಾರುತ ಅಪ್ಪಳಿಸಿರುವ ಪರಿಣಾಮ, ಕರ್ನಾಟಕದಲ್ಲಿ ಮುಂದಿನ ಹಲವು ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ವಾಯುಭಾರದ ಕುಸಿತದ ಪರಿಣಾಮ ಮುಖ್ಯವಾಗಿ, ಕರ್ನಾಟಕದ ದಕ್ಷಿಣ ಭಾಗದ ಮೇಲೆ ಆಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಜಿಲ್ಲೆಗಳ ಮೇಲೆ ನವೆಂಬರ್ 12 ಅಂದರೆ ಶುಕ್ರವಾರದಿಂದ ಮಳೆಯ ಪ್ರಮಾಣ ಹೆಚ್ಚಾಗಿ ಸೋಮವಾರದ ತನಕ ಮುಂದುವರೆಯುವ ಸಾಧ್ಯತೆ ಇದೆ ಹವಾಮಾನ ಇಲಾಖೆಯ ನಿರ್ದೇಶಕಿ ಡಾ. ಗೀತಾ ಅಗ್ನಿಹೋತ್ರಿ ಹೇಳಿದ್ದಾರೆ.
ಮುಂದಿನ ಕೆಲ ದಿನಗಳ ಕಾಲ ಬೆಂಗಳೂರಲ್ಲಿ ಚಳಿಯ ಆರ್ಭಟ ಮುಂದುವರೆಯಲಿದೆ. ನವೆಂಬರ್ 15ರ ಸೋಮವಾರದ ತನಕ ಜಿಟಿಜಿಟಿ ಮಳೆ ಬೀಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರಿ ಮಳೆ ಸುರಿಯುತ್ತಿರುವ ತಮಿಳುನಾಡಿನಲ್ಲಿ ರೆಡ್ ಅಲರ್ಟ್
Discussion about this post