ಚಿಕ್ಕಮಗಳೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದರೆ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯವನ್ನು ಸಾಹಿತ್ಯಾಭಿಮಾನಿಗಳು, ಚಿಂತಕರ ರಾಜಾಶ್ರಯದೊಂದಿಗೆ ಆಯೋಜಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧಿ ಸೂರಿ ಶ್ರೀನಿವಾಸ್ ತಿಳಿಸಿದರು .
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಹೋಬಳಿ ಮಟ್ಟದಿಂದ ಗ್ರಾಮ ಪಂಚಾಯಿತಿ ಘಟಕಗಳಾಗಿ ವಿಸ್ತರಿಸಿ ಘಟಕಗಳನ್ನು ಪ್ರಾರಂಭಿಸಿ ಗ್ರಾಮ, ಗ್ರಾಮಗಳಿಗೆ ಸಾಹಿತ್ಯ ಪರಿಷತ್ತನ್ನು ಪರಿಚಯಿಸುವ ಕೆಲಸ ಮಾಡಲಾಗುವುದು, ದತ್ತಿ ದಾನಿಗಳ ಆಶಯಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ದತ್ತಿ ಉಪನ್ಯಾಸಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
೧೯೮೧ ರಲ್ಲಿ ಪುತಿನ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ಅ.ಭಾ.ಕ.ಸಾ. ಪರಿಷತ್ ಸಮ್ಮೇಳನ ಜರುಗಿದ್ದು ಇದುವರೆಗೂ ಜಿಲ್ಲೆಯಲ್ಲಿ ಆ ಸಮ್ಮೇಳನ ನಡೆದಿಲ್ಲ, ಸಾಹಿತ್ಯಾಸಕ್ತರು, ಚಿಂತಕರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಅ.ಭಾ.ಕ.ಸಾ. ಪರಿಷತ್ ಸಮ್ಮೇಳನ ಆಯೋಜಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಉದಯೋನ್ಮುಖ ಬರಹಗಾರರಿಗೆ ವೇದಿಕೆ ಕಲ್ಪಿಸಿ ಬರಹಗಳಿಗೆ ಉತ್ತೇಜಿಸಲಾಗುವುದು, ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ, ಮಕ್ಕಳ, ಮಹಿಳಾ ಸಮ್ಮೇಳನ ಆಯೋಜಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಕಥಾ ಕಮ್ಮಟ, ರಸಗ್ರಹಣ ಕಮ್ಮಟ, ಹಳೆಗನ್ನಡ ಓದು ಗ್ರಹಿಕೆಯ ಕಾರ್ಯಕ್ರಮ ಏರ್ಪಡಿಸುವುದು, ಎ.ಆರ್ಕೃಷ್ಣ ಶಾಸ್ತ್ರೀ, ತೇಜಸ್ವಿ, ಕುವೆಂಪು ಅವರ ಸ್ಮರಣೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸುವುದು, ಜಿಲ್ಲೆಯ ಉದಯೋನ್ಮುಖ ಸಾಹಿತಿಗಳಿಗೆ ಅವಕಾಶ ಕಲ್ಪಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿಸುವ ಆಶಯ ಹೊಂದಲಾಗಿದೆ ಎಂದರು.
ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳನ್ನು ೪೫ ದಿನದೊಳಗೆ ಮಂಡನೆ ಮಾಡಲಾಗುವುದು. ಈ ಹಿಂದೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಒಟ್ಟುಗೊಡಿಸಿ ಜಿಲ್ಲೆಯಲ್ಲಿ ಸಂವಾದ ನಡೆಸುವ ಮೂಲಕ ಅಭಿಪ್ರಾಯಗಳನ್ನು ಸಂಗ್ರಹಿಸಿ ಅನುಷ್ಠಾನಗೊಳಿಸಲು ಶ್ರಮಿಸಲಾಗುವುದು, ವಿಶೇಷವಾಗಿ ಕನ್ನಡ ಶಾಲೆಗಳ ಉಳಿವಿಗೆ ಕ್ರಮ ವಹಿಸಲಾಗುವುದು, ಪುಸ್ತಕ ಪರಿಷೆ ಆಯೋಜನೆ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣವನ್ನು ಪುಸ್ತಕ ರೂಪದಲ್ಲಿ ತರಲು ಪ್ರಯತ್ನಿಸಲಾಗುವುದು. ಎಂದು ತಿಳಿಸಿದರು.
ಕಸಾಪ ಹಿರಿಯ ಸದಸ್ಯ ಗುರುವೇಶ್ ಮಾತನಾಡಿ ಮುಳ್ಳಯ್ಯನಗಿರಿಯಲ್ಲಿ ಕನ್ನಡ ಧ್ವಜ ಸ್ಥಂಬ ನಿರ್ಮಾಣಕ್ಕೆ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದ್ದು ಈ ಕಾರ್ಯಚಾಲ್ತಿಗೆ ಬರಲಿದೆ. ಇನ್ನು ಸರ್ಕಾರಿ ಬಸ್ಗಳಲ್ಲಿ ಕಡ್ಡಾಯವಾಗಿ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಅಳವಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗಿರಿಧರ್ ಯತೀಶ್, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಅನಿಲ್ಕುಮಾರ್, ರಂಗಕರ್ಮಿ ಮಲ್ಲಿಕಾರ್ಜುನ, ಭೈರೇಗೌಡ, ದಯಾನಂದ್, ಬೆನೆಡಿಕ್ಟ್ ಜೇಮ್ಸ್, ಉಪಸ್ಥಿತರಿದ್ದರು.
ಇದನ್ನೂ ಓದಿ:
Kannada Sahitya Parishad: ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢವಾಗಿ ಕಟ್ಟುವ ಆಶಯ
Discussion about this post