ಬೆಂಗಳೂರು: ರಾಜ್ಯದಲ್ಲಿ ಸೈಕ್ಲೋನ್ ಪರಿಣಾಮ ಸುರಿಯುತ್ತಿರುವ ಮಳೆ ಬುಧವಾರದವರೆಗೂ ಮುಂದುವರಿಯಲಿದೆ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕ, ಕೇರಳಗಳ ಕರಾವಳಿ ಜಿಲ್ಲೆಗಳು, ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿಯಲಿದೆ. ಕೇರಳದ 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಮಧ್ಯೆ, ಕೇರಳದಲ್ಲಿ ಮಳೆಯ ಕಾರಣ ನಾಲ್ವರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಕಳೆದ ತಿಂಗಳ ಅಂತ್ಯದಲ್ಲಿ ವ್ಯಾಪಕ ಮಳೆ ಸುರಿದಿತ್ತು.
ಮಳೆಯಿಂದ ತತ್ತರಿಸಿರುವ ತಮಿಳುನಾಡಿನಲ್ಲಿ ಮತ್ತೆ ವ್ಯಾಪಕ ಮಳೆ ಸುರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಆಂಧ್ರದ ಕರಾವಳಿ ಮತ್ತು ಸೀಮಾಂಧ್ರ ಭಾಗದಲ್ಲೂ ವರ್ಷಧಾರೆ ಆಗಲಿದೆ. ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಕೆಲ ಭಾಗದಲ್ಲಿ ಮಳೆಯ ನಿರೀಕ್ಷೆ ಇದೆ ಎಂದು ಐಎಂಡಿ ಹೇಳಿದೆ. ಭಾರಿ ಮಳೆಯ ಕಾರಣ ತಮಿಳುನಾಡಿನಲ್ಲಿ ಕಳೆದ ವಾರ 14 ಮಂದಿ ಸಾವನ್ನಪ್ಪಿದ್ದರು.
ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಜಲಾಶಯ 11 ವರ್ಷದ ನಂತರ ಭರ್ತಿಯಾಗಿದ್ದು, 900 ಕ್ಯೂಸೆಕ್ಸ್ ನೀರನ್ನು ಎರಡು ಗೇಟ್ಗಳ ಮೂಲಕ ಬಿಡಲಾಗಿದೆ. ಕರ್ನಾಟಕದಲ್ಲಿ ಕಳೆದ ವಾರ 14 ಜಿಲ್ಲೆಗಳಲ್ಲಿ ವರ್ಷಧಾರೆ ಆಗಿದ್ದು, ಗರ್ಭಿಣಿ ಸೇರಿ ನಾಲ್ವರು ಸಾವನ್ನಪ್ಪಿದ್ದರು. 15 ಮನೆಗಳು ಕುಸಿದಿವೆ.
ಬೆಂಗಳೂರಿನಲ್ಲಿ ಚಳಿ ಹೆಚ್ಚಳ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತಾಪಮಾನ 20ರಿಂದ 25 ಡಿಗ್ರಿ ಸೆಲ್ಷಿಯಸ್ಗೆ ಇಳಿಯುವ ಸಾಧ್ಯತೆ ಇದೆ. ಕಳೆದ ವಾರ ಬೆಂಗಳೂರಿನಲ್ಲಿ ತಾಪಮಾನ 18 ಡಿಗ್ರಿ ಸೆಲ್ಷಿಯಸ್ಗಿಂತ ಕಡಿಮೆ ಆಗಿತ್ತು.
ಇದನ್ನೂ ಓದಿ: ಕೆಟ್ಟು ಹೋದ 24 ಗಂಟೆಯೊಳಗೆ ಪರಿವರ್ತಕ ಬದಲಾವಣೆ ಮಾಡಬೇಕು
Discussion about this post