ನವದೆಹಲಿ: ವಾಯು ಪ್ರದೂಷಣೆ ಕಡಿಮೆ ಮಾಡಲು ದೆಹಲಿಗೆ ಹೊಂದಿಕೊಂಡಿರುವ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನಗಳ ಎನ್ಸಿಆರ್ನಲ್ಲಿ ಶಾಲಾ-ಕಾಲೇಜುಗಳಿಗೆ ಮುಂದಿನ ಸೂಚನೆಯವರೆಗೆ ರಜೆ ರಜೆ ಘೋಷಿಸಲಾಗಿದೆ. ಜತೆಗೆ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿಗೆ ನವೆಂಬರ್ 21ರವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ (ವರ್ಕ್ ಫ್ರಂ ಹೋಮ್) ಸೂಚಿಸಲಾಗಿದೆ. ಇದು ಖಾಸಗಿ ಕಂಪನಿಗಳಿಗಳಿಗೂ ಅನ್ವಯ ಆಗಲಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಸಮಿತಿ (ಸಿಎಕ್ಯೂಎಂ) ಮಂಗಳವಾರ ರಾತ್ರಿ ತಿಳಿಸಿದೆ. ಕೋವಿಡ್ ಸಾಂಕ್ರಾಮಿಕ ಕಾರಣ ವಿಧಿಸಲಾಗಿದ್ದ ನಿರ್ಬಂಧದ ವೇಳೆ ತರಗತಿಗಳು ಆನ್ಲೈನ್ ಮೂಲಕ ನಡೆಯುತ್ತಿದ್ದಂತೆ ಈಗಲೂ ನಡೆಸಬಹುದು ಎಂದು ಹೇಳಿದೆ.
ಇನ್ನಿತರ ನಿರ್ಬಂಧ:
ಕಟ್ಟಡ ಇನ್ನಿತರ ನಿರ್ಮಾಣ ಕಾಮಗಾರಿಗಳನ್ನೂ ನ.21ರವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಆದರೆ, ರೈಲ್ವೆ, ಮೆಟ್ರೋ, ಏರ್ಪೋರ್ಟ್, ಬಸ್ ನಿಲ್ದಾಣ, ರಕ್ಷಣಾ ಸಂಬಂಧಿಸಿದ ಕಾಮಗಾರಿಗೆ ಇದು ಅನ್ವಯ ಆಗುವುದಿಲ್ಲ.
ಎನ್ಸಿಆರ್ ವ್ಯಾಪ್ತಿಯಲ್ಲಿರುವ 11 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಪೈಕಿ ಐದು ಮಾತ್ರ ಕಾರ್ಯನಿರ್ವಹಿಸಬೇಕು. ದೆಹಲಿಗೆ ನ.21ರವರೆಗೆ ಟ್ರಕ್ ಪ್ರವೇಶ ನಿಷೇಧಿಸಲಾಗಿದೆ. ಆದರೆ, ಅತ್ಯಾವಶ್ಯಕ ಸರಕಗಳ ವಾಹನಕ್ಕೆ ಯಾವುದೇ ನಿರ್ಬಂಧ ಇಲ್ಲ. 15 ಮತ್ತು 10 ವರ್ಷಗಳಷ್ಟ ಹಳೆಯದಾದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ. ಉಳಿದ ವಾಹನಗಳಿಗೆ ಎಮಿಷನ್ ಟೆಸ್ಟ್ ಕಡ್ಡಾಯ.
ಹಿನ್ನೆಲೆ:
ದೆಹಲಿ ಗಡಿಗೆ ಹೊಂದಿಕೊಂಡಿರುವ ಹೊಲಗಳಲ್ಲಿ ಫಸಲು ಕಟಾವಿನ ನಂತರ ಉಳಿಯುವ ಕೂಳೆಗೆ ಬೆಂಕಿ ಹಚ್ಚುವ ಕಾರಣ ಮತ್ತು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ದೆಹಲಿಯಲ್ಲಿ ಪ್ರತಿವರ್ಷ ನವೆಂಬರ್ ವೇಳೆಯಲ್ಲಿ ವಾಯು ಪ್ರದೂಷಣೆ ಉಂಟಾಗುತ್ತದೆ. ಈ ಸಾರಿ ದೀಪಾವಳಿಗೂ ಮುಂಚೆಯಿಂದಲೇ ಈ ಸಮಸ್ಯೆ ಕಾಡಲಾರಂಭಿಸಿದೆ. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದೆಹಲಿ, ಹರಿಯಾಣ, ಪಂಜಾಬ್ಗಳು ಜತೆ ಸಭೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೋಮವಾರ ಸೂಚಿಸಿತ್ತು. ಇದರಂತೆ ಮಂಗಳವಾರ ನಡೆದ ಸಭೆಯಲ್ಲಿ ಈ ಮೂರೂ ರಾಜ್ಯಗಳ ಜತಗೆ ಉತ್ತರ ಪ್ರದೇಶದ ಸರ್ಕಾರದ ಸಚಿವರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ವರ್ಕ್ ಫ್ರಂ ಹೋಮ್ ಮತ್ತು ವಾರಾಂತ್ಯದ ಲಾಕ್ಡೌನ್ಗೆ ಸಿದ್ಧ ಎಂದು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.
Schools, Colleges Closed In NCR, Offices Advised 50% WFH
ಇದನ್ನು ಓದಿ: Air pollution: ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ
ಇದನ್ನು ಓದಿ: Air pollution: ದೆಹಲಿ: ದೀಪಾವಳಿ ಪಟಾಕಿಯಿಂದ ಅಪಾಯಕಾರಿ ಮಟ್ಟ ಮೀರಿದ ವಾಯುಮಾಲಿನ್ಯ
Discussion about this post