ಚಿಕ್ಕಮಗಳೂರು : ತಾಲ್ಲೂಕಿನ ಆಲ್ದೂರು ಹೋಬಳಿಯ ಬಾಳೆಹಳ್ಳಿ ಗ್ರಾಮದಲ್ಲಿ ಅಕ್ರಮ ಭೂ ಮಂಜೂರಾತಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಗೌಸ್ಮೊಹಿಯುದ್ದೀನ್ ತಿಳಿಸಿದರು.
ಚಿಕ್ಕಮಗಳೂರು ಉಪವಿಭಾಗದಲ್ಲಿ ಅಕ್ರಮವಾಗಿ ಮಂಜೂರಾಗಿದ್ದ ಭೂಮಿಯನ್ನು ರದ್ದುಪಡಿಸುವ ಮೂಲಕ ಭೂ ಕಬಳಿಕೆದಾರರಿಗೆ ಉಪವಿಭಾಗಾಧಿಕಾರಿ ಹೆಚ್.ಎಲ್.ನಾಗರಾಜ್ ಕಾನೂನಿನ ಎಚ್ಚರಿಕೆ ನೀಡಿದ್ದಾರೆ. ಇದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಲ್ದೂರು ಹೋಬಳಿ ಬಾಳೇಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ ೧೫೮ ರಲ್ಲಿ ೪.೩೫ ಎಕರೆ ಜಮೀನು ಚೇತನ್ ಬಿನ್ ರಮೇಶ್ ಇವರ ತಾಯಿ ಜಯಲಕ್ಷ್ಮೀ ಕೋಂ ರಮೇಶ ಅವರಿಗೆ ೪.೩೮ ಎಕರೆ ಜಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸಿದೆ. ಅಲ್ಲದೇ ಕೆಳಗೂರು ಗ್ರಾಮದ ಸರ್ವೆ ನಂ. ೨೦೨ ರಲ್ಲಿ ೪.೨೬ ಎಕರೆ ಜಮೀನು ಸತೀಶ್ ರವರಿಗೆ ೨೦೦೫-೦೬ ರಲ್ಲಿ ಚಿಕ್ಕಮಗಳೂರು ತಹಸೀಲ್ದಾರ್ ನೀಡಿದ್ದ ಸಾಗುವಳಿ ಚೀಟಿಯನ್ನು ರದ್ದುಪಡಿಸಿ ಪಹಣಿ ವಜಾಗೊಳಿಸಿ ಸರ್ಕಾರಕ್ಕೆ ಕಾಯ್ದಿರಿಸಲು ಆದೇಶ ನೀಡಿದ್ದಾರೆ ಎಂದು ತಿಳಿಸಿದರು.
ಸೂಕ್ತ ದಾಖಲೆಗಳಿಲ್ಲದೇ ಇದ್ದರೂ ಪುಡಿಗಾಸಿನ ಆಸೆಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಭ್ರಷ್ಟಚಾರ ನಡೆಸಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿದ್ದಾರೆ. ಮೈಸೂರಿನಲ್ಲಿ ವಾಸವಿರುವ ಚಂದ್ರಾವತಿ ಕೋಂ ಗೋಪಾಲಗೌಡ ಹಾಗೂ ಆಲ್ದೂರು ಹೋಬಳಿ ಬಾಳೆಹಳ್ಳೀ ಗ್ರಾಮದ ಸ.ನಂ ೧೫೮ ರಲ್ಲಿ ೨.೨೦ ಎಕರೆ ಪ್ರದೇಶವನ್ನು ಬಿಲ್ಲೇಶಗೌಡ ಬಿನ್ ಸಿದ್ದೇಗೌಡ ಎಂಬುವವರಿಗೆ ೨೦೧೭-೧೮ ರಲ್ಲಿ ಮಂಜೂರು ಮಾಡಿದ್ದಾರೆ. ನೈಜ ಕಡತಗಳನ್ನು ಪರಿಶೀಲಿಸಿ ಅಕ್ರಮ ಭೂ ಮಂಜೂರಾತಿ ಎಂದು ಕಂಡು ಬಂದಾಗ ಅದನ್ನು ರದ್ದುಪಡಿಸಲು ತಹಸೀಲ್ದಾರ್ಗೆ ಸೂಚಿಸಿದ್ದಾರೆ ಇಂತಹ ಪ್ರಾಮಾಣಿಕ ದಕ್ಷ ಅಧಿಕಾರಿಗಳು ಜಿಲ್ಲೆಗೆ ಅಗತ್ಯವಿದೆ ಎಂದರು.
ಅಂದಿನ ಅವಧಿಯಲ್ಲಿ ಅಕ್ರಮವಾಗಿ ಭೂ ಮಂಜೂರಾತಿ ಮಾಡಿಕೊಟ್ಟ ತಹಸೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು, ಇಂತಹ ಅಕ್ರಮಗಳಿಂದ ಬಡವರ ನಿವೇಶನಕ್ಕೆ ಜಾಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ದಿವಾಕರ್, ಗೋಪಾಲಗೌಡ, ಗಣೇಶ್, ಸೇರಿದಂತೆ ಮತ್ತಿತರರು ಇದ್ದರು.
Discussion about this post