ಚಿಕ್ಕಮಗಳೂರು : ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮಾದರಿಯಾಗಿ ಬಾಳಲು ಉತ್ತಮವಾದ ಗ್ರಂಥಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬ್ಳೆ ತಿಳಿಸಿದರು.
ನಗರ ಕೇಂದ್ರ ಗ್ರಂಥಾಯ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ರಾಮನಹಳ್ಳಿ ಸಮೀಪದ ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹ ಬಂಧಿಗಳಿಗೆ ಆಯೋಜಿಸಿದ್ದ ಪುಸ್ತಕದಿಂದ ಪರಿವರ್ತನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೋ ಆಕಸ್ಮಿಕ ಕಾರಣದಿಂದ ಕಾರಾಗೃಹದಲ್ಲಿ ಇದ್ದು, ತಮ್ಮ ಮುಂದಿನ ದಿನಗಳಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮಾದರಿಯಾಗಿ ಬಾಳಲು ಉತ್ತಮವಾದ ಗ್ರಂಥಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು, ಪುಸ್ತಕ ಓದಿನಿಂದ ಮಾನಸಿಕವಾಗಿ ಸಧೃಢರಾಗಬಹುದು ಜತೆಗೆ ಮನಃ ಪರಿವರ್ತನೆಯಾಗಲಿದೆ ಎಂದ ಅವರು ತಮ್ಮಲ್ಲಿ ವಿವಿಧ ಪ್ರತಿಭೆಗಳಿದ್ದು ಅದರ ಜತೆಗೆ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಲು ಸಹಕರಿಸುವುದಾಗಿ ತಿಳಿಸಿದರು.
ನಗರ ಕೇಂದ್ರ ಗ್ರಂಥಾಯದ ಮುಖ್ಯ ಗ್ರಂಥಾಲಯಾಧಿಕಾರಿ ಉಮೇಶ್ ಜಿ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಂಥಾಲಯವು ಪ್ರಾಚೀನ ಕಾಲದಿಂದ ಮಹತ್ವ ಪಡೆದಿದ್ದು.ರಾಜ್ಯದಲ್ಲಿ ಶರಣ ಬಸವಣ್ಣವನರ ಅನುಭವ ಮಂಟಪದಿಂದ ಗ್ರಂಥಾಲಯದ ಮತ್ತಷ್ಟು ಮಹತ್ವ ಪಡೆಯುವ ಮೂಲಕ ಮುನ್ನೆಲೆಗೆ ಬಂದಿದೆ. ಜಿಲ್ಲಾ ಕಾರಾಗೃಹದಲ್ಲಿ ಸಾಹಿತ್ಯ, ಕೃಷಿ, ಸಾಂಸ್ಕೃತಿಕ, ಕಲೆ, ಒಳಗೊಡಂತೆ ಸುಮಾರು ೭೦೦೦ ಕ್ಕೂ ಅಧಿಕವಾದ ಪುಸ್ತಕಗಳಿದ್ದು ಎಲ್ಲಾ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳು ಲಭ್ಯವಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಗ್ರಂಥಾಲಯ ಸಿಬ್ಬಂದಿ ಮಹೇಶಪ್ಪ ಜವಹಾರ್ಲಾಲ್ನೆಹರು ಹಾಗೂ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರ ಬಗ್ಗೆ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಕಾರಾಗೃಹ ಗ್ರಂಥಪಾಲಕ ರಾಜ್ಕುಮಾರ್, ಗ್ರಂಥಾಲಯ ಸಿಬ್ಬಂದಿಗಳಾದ ರಾಘವೇಂದ್ರ, ವೀಣಾ, ರೂಪಾ ಇದ್ದರು.
ಇದನ್ನೂ ಓದಿ:
Discussion about this post