ಬೆಂಗಳೂರು: ಐಎನ್ಎಸ್ ವಿಶಾಖಪಟ್ಟಣಮ್ ಹೆಸರಿನ ಅತ್ಯಾಧುನಿಕ ರಹಸ್ಯ ಕ್ಷಿಪಣಿ ವಿಧ್ವಂಸಕ ಹಡಗನ್ನು ಇಂದು ಕೇಂದ್ರ ರಕ್ಷಣಾ ಸಚಿವ ರಾಜಾನಾಥ್ ಸಿಂಗ್ ಅಧಿಕೃತವಾಗಿ ನಿಯೋಜಿಸುವ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಈ ಹಡಗನ್ನು ದೇಶೀಯವಾಗಿ ತಯಾರಾದ ಡಿಎಮ್ಆರ್ 249A ಉಕ್ಕನ್ನು ಬಳಸಿ ನಿರ್ಮಿಸಲಾಗಿದ್ದು 163 ಮೀಟರ್ ಉದ್ದವಾಗಿದೆ ಹಾಗೂ ಸುಮಾರು 7400 ಟನ್ ಭಾರವನ್ನು ಹೊಂದಿದೆ. ಇದೇ ಮಾದರಿಯ ನಾಲ್ಕು ಹಡಗುಗಳಲ್ಲಿ ಇದು ಮೊದಲನೆಯದಾಗಿದೆ.
ಸೂಚ್ಯವಾಗಿ ಪಕ್ಕದ ರಾಷ್ಟ್ರವನ್ನು ಟೀಕಿಸಿದ ರಾಜನಾಥ್ ಸಿಂಗ್ ವಿಶ್ವಸಂಸ್ಥೆಯ ಕಾನೂನುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿಕೊಂಡು ಅವುಗಳನ್ನು ದುರ್ಬಲಗೊಳಿಸಲಾಗುತ್ತಿದೆಯೆಂದು ಟೀಕಿಸಿದರು.
ಇಂಡೋ-ಪ್ಯಾಸಿಫಿಕ್ ಸಾಗರಮಾರ್ಗವು ವಿಶ್ವದ ಆರ್ಥಿಕತೆಗೆ ಬಹು ಮುಖ್ಯವಾಗಿದ್ದು ಅದನ್ನು ಸುರಕ್ಷಿತವಾಗಿಡುವುದು ಭಾರತೀಯ ನೌಕದಳದ ಪ್ರಮುಖ ಗುರಿಯಾಗಿದೆಯೆಂದು ಅವರು ತಿಳಿಸಿದರು.
ಮುಂಬರುವ ವರ್ಷಗಳಲ್ಲಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ತಮ್ಮ ಸೈನ್ಯ ಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದು ರಕ್ಷಣಾ ವೆಚ್ಚಗಳು ಏರಲಿವೆ ಎಂದ ರಾಜನಾಥ್ ಸಿಂಗ್ ಭಾರತವು ತನ್ನ ರಕ್ಷಣಾ ಅವಶ್ಯಕತೆಗಳನ್ನು ದೇಶದಲ್ಲಿಯೇ ನಿರ್ಮಿಸಿಕೊಳ್ಳುವ ಸ್ಥಿತಿಯಲ್ಲಿದ್ದು ಹಡಗು ನಿರ್ಮಾಣದ ಪ್ರಮುಖ ಕೇಂದ್ರವಾಗಿದೆಯೆಂದರು.
ಭಾರತದ ನೌಕಾದಳವು 41 ಯುದ್ಧನೌಕೆಗಳಿಗಾಗಿ ಬೇಡಿಕೆಯನ್ನು ಇಟ್ಟಿದ್ದು ಅವುಗಳಲ್ಲಿ 38 ನೌಕೆಗಳನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆಯೆಂದ ಅವರು ಇದು ಭಾರತವು ಸ್ವಾವಲಂಬನೆಯತ್ತ ದಾಪುಗಾಲು ಇಡುತ್ತಿರುವುದನ್ನು ಸೂಚಿಸುತ್ತದೆ ಎಂದರು.
ಈ ಯುದ್ಧನೌಕೆಯ ಪ್ರತಿಶತ 75 ಭಾಗವನ್ನು ದೇಶೀಯವಾಗಿಯೇ ನಿರ್ಮಿಸಲಾಗಿದೆಯೆಂದ ಅವರು ಈ ಮೂಲಕ ನಾವು “ಆತ್ಮನಿರ್ಭರ ಭಾರತ”ಕ್ಕೆ ನೀಡುತ್ತಿರುವ ಕೊಡುಗೆ ಇದಾಗಿದೆ ಎಂದೂ ಹೇಳಿದರು.
ಈ ಯುದ್ಧನೌಕೆಯು ಅತ್ಯಾಧುನಿಕ ಆಯುಧಗಳು ಹಾಗೂ ಸೆನ್ಸರ್ಗಳನ್ನು ಹೊಂದಿರುವುದಲ್ಲದೇ ಭೂಮಿಯಿಂದ ಭೂಮಿಗೆ ಹಾಗೂ ಭೂಮಿಯಂದ ಆಕಾಶಕ್ಕೆ ಪ್ರಯೋಗಿಸಬಲ್ಲ ಸೂಪರ್ಸಾನಿಕ್ ಕ್ಷಿಪಣಿಗಳು, ಮಧ್ಯಮ ಹಾಗೂ ಕಡಿಮೆ ದೂರದ ಗನ್ಗಳು, ಜಲಾಂತರ್ಗಾಮೀ ನಿರೋಧಕ ಕ್ಷಿಪಣಿಗಳು, ಹಾಗೂ ಅಭಿವೃದ್ಧಿಪಡಿಸಲಾದ ಎಲೆಕ್ಟ್ರಾನಿಕ್ ಯುದ್ಧ ಹಾಗೂ ಸಂವಹನ ಸೌಲಭ್ಯಗಳನ್ನು ಹೊಂದಿದೆ ಎನ್ನಲಾಗಿದೆ.
ಶತೃದೇಶದ ಕ್ಷಿಪಣಿ ಅಥವಾ ವಿಮಾನಗಳನ್ನು ಸುಮಾರು 70 ಕಿ.ಮಿ. ಅಂತರದಲ್ಲೇ ಗುರುತಿಸಿ ಅವನ್ನು ಧ್ವಂಸಗೊಳಿಸುವ ಸಾಮರ್ಥ್ಯ ಈ ಯುದ್ಧನೌಕೆಗೆ ಇದೆ ಎನ್ನಲಾಗಿದೆ. ಸಂಪೂರ್ಣವಾಗಿ ಅನಿಲಚಾಲಿತವಾಗಿರುವ ಈ ನೌಕೆಯು ಗಂಟೆಗೆ 56 ಕಿ.ಮೀ ವೇಗದ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.
Stealth Warship INS Visakapatnam Inducted into Indian Navy Service by Rajnath Singh
ಇದನ್ನೂ ಓದಿ: ರಫೇಲ್ ಯುದ್ಧ ವಿಮಾನ ವಿಚಾರ; ಕಾಂಗ್ರೆಸ್-ಬಿಜೆಪಿ ತೀವ್ರ ವಾಕ್ಸಮರ
ಇದನ್ನೂ ಓದಿ: Deputy Admiral: ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಉಪ ಅಡ್ಮಿರಲ್ ಆರ್. ಹರಿ ನೇಮಕ
Discussion about this post