ಉಜಿರೆ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಹಲವು ಸಂಘಸಂಸ್ಥೆಗಳು ಅಭಿನಂದಿಸುತ್ತಿವೆ. ಸನ್ಮಾನಿಸುತ್ತಿವೆ. ಇವುಗಳ ನಡುವೆ ಉಜಿರೆಯಲ್ಲಿ ಹರೇಕಳ ಹಾಜಬ್ಬ ಅವರನ್ನು ಅಭಿನಂದಿಸಿದ ರೀತಿ ವಿಭಿನ್ನವಾಗಿತ್ತು. ಕಾರ್ಯಕ್ರಮ ಕೇವಲ ಶಾಲು, ಹಾರಗಳಿಂದ ವಿಜೃಂಭಿಸದೆ ಸರಳ ಮತ್ತು ಸಹಜವಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಗೆ ದೀಪ ಪ್ರಜ್ವಲನೆ ಇರಲಿಲ್ಲ. ಬದಲಿಗೆ ವಿದ್ಯಾರ್ಥಿ ಪ್ರತಿನಿಧಿಗಳಿಂದ ಹರೇಕಳ ಹಾಜಬ್ಬ ಅವರ ಕನಸಿನ ಶಾಲೆಗೆ ಪುಸ್ತಕ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಬೆಳ್ತಂಗಡಿಯ ಹರೇಕಳ ಹಾಜಬ್ಬ ಅಭಿನಂದನಾ ಸಮಿತಿಯ ನೇತೃತ್ವದಲ್ಲಿ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಬೆಳ್ತಂಗಡಿ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಮಾನವ ರೂಪವೆತ್ತಿದ ಸರಳತೆ
ಸರಳತೆಯೇ ಮಾನವ ರೂಪವೆತ್ತಂತಿದ್ದರು ಹರೇಕಳ ಹಾಜಬ್ಬ. ಬಿಳಿಯ ಪಂಚೆ, ಬಿಳಿ ಅಂಗಿ, ಕೈಯಲ್ಲೊಂದು ಪುಟ್ಟ ಕರವಸ್ತ್ರ ಹಿಡಿದು ವೇಗದ ನಡಿಗೆಯ ಮೂಲಕ ವೇದಿಕೆಯ ಮುಂಭಾಗದಲ್ಲಿ ನಡೆದು ಬರುವಾಗ ಎಲ್ಲರ ಕಾತರದ ಕಣ್ಣುಗಳು ಅವರನ್ನೇ ದಿಟ್ಟಿಸುತ್ತಿದ್ದವು.
ವೇದಿಕೆಯಲ್ಲಿ ಆಸೀನರಾಗಿದ್ದ ಹಾಜಬ್ಬ ಅವರು ಪ್ರತಿಯೊಬ್ಬ ಗಣ್ಯರ ಮಾತುಗಳನ್ನು ಆಲಿಸುತ್ತಾ ಅವರನ್ನು ಅಭಿನಂದಿಸಿ ಪ್ರತಿ ಬಾರಿಯೂ ಎದ್ದು ನಿಂತು ಎರಡೂ ಕೈ ಜೋಡಿಸಿ ಸಭೆಗೆ ನಮಸ್ಕರಿಸುತ್ತಿದ್ದರು. ಮುಖ್ಯವಾಗಿ ಸಭಿಕರನ್ನಾಗಿ ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿತ್ತು. ಶಿಕ್ಷಣ ದೊರಕದಿದ್ದರೂ ನಿರಂತರ ಪ್ರಯತ್ನದ ಮೂಲಕ ಶಾಲೆ ನಿರ್ಮಿಸಿದ ಅಕ್ಷರ ಸಂತ ಅಕ್ಷರ ಕಲಿತ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂಬುದೇ ವಿದ್ಯಾರ್ಥಿಗಳನ್ನು ಸಭಿಕರನ್ನಾಗಿಸಿದ ಉದ್ದೇಶವಾಗಿತ್ತು. ವಿದ್ಯಾರ್ಥಿಗಳು ಹಾಜಬ್ಬರ ಸರಳತೆ, ನಡವಳಿಕೆ ಮತ್ತು ಅಕ್ಷರ ಪ್ರೇಮವನ್ನು ಪ್ರತ್ಯಕ್ಷವಾಗಿ ಗಮನಿಸಬೇಕು ಎಂಬ ಸದುದ್ದೇಶ ಆಯೋಜಕರದ್ದಾಗಿತ್ತು.
“ಸಾಮಾನ್ಯನಾಗಿದ್ದ ನನ್ನನ್ನು ಗುರುತಿಸಿ ಗೌರವಿಸಿದ ಎಲ್ಲರನ್ನೂ ಸ್ಮರಿಸುತ್ತೇನೆ ಎನ್ನುತ್ತ ಭೂಮಿ ಸ್ಪರ್ಶಿಸಿ ನಮಸ್ಕರಿಸಿದರು . ಅವರ ಕನಸಿನ ಶಿಕ್ಷಣ ಸಂಸ್ಥೆಗೆ ಅಗತ್ಯವಿರುವ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು. ಈವೇಳೆ ನೆಲಕ್ಕೆ ಬಿದ್ದ ಆಟದ ವಸ್ತುವೊಂದನ್ನು ಅವರು ಸ್ವತಃ ಪ್ರೀತಿಯಿಂದ ಎತ್ತಿ ಕೈಯಲ್ಲಿ ಹಿಡಿದುಕೊಂಡದ್ದು ಹಾಜಬ್ಬರ ಮುಗ್ಧತೆಗೆ ಸಾಕ್ಷಿಯಾಯಿತು.
ಹರೇಕಳ ಹಾಜಬ್ಬರನ್ನು ನೇರವಾಗಿ ನೋಡಿ, ಅವರ ಮಾತುಗಳನ್ನು ಕೇಳಿದ ಸಭಿಕರ ಮನಸಲ್ಲಿ ಧನ್ಯತಾ ಭಾವ, ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗುವ ಪ್ರೇರಣೆ ಹುಟ್ಟಿದ್ದಂತೂ ಸತ್ಯ.
ವರದಿ: ಸುಮಾ ಕಂಚೀಪಾಲ್
ಇದನ್ನೂ ಓದಿ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ `ಮಾಮ್ ಇನ್ಸ್ಪೈರ್ ಅವಾರ್ಡ್’ ಪ್ರದಾನಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ
Discussion about this post