2 ವರ್ಷಗಳ ನಂತರ ಬೆಂಗಳೂರು ಬಸವಗುಡಿಯ ಕಡಲೆಕಾಯಿ ಪರಿಷೆ ಇಂದು (ನವೆಂಬರ 29) ಆರಂಭವಾಗಲಿದೆ. ನಿಧಾನವಾಗಿ ಹೆಚ್ಚುತ್ತಿರುವ ಕೊವಿಡ್ ಸೋಂಕಿನ ನೆರಳಿನ ನಡುವೆಯೇ ಕಡಲೆಕಾಯಿ ಪರಿಷೆಯಲ್ಲಿ ಭಾಗವಹಿಸಲು ಸಾವಿರಾರು ಜನರು ಸೇರಲಿದ್ದಾರೆ. ಕಾರ್ತಿಕ ಮಾಸದ ಕೊನೆ ಸೋಮವಾರದಂದು ನಡೆಯುವ ಕಡಲೇಕಾಯಿ ಪರಿಷೆ ಈ ಬಾರಿ ನವೆಂಬರ್ 29ರಿಂದ ಡಿಸೆಂಬರ್ 1ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಕಡಲೆಕಾಯಿ ಪರಿಷೆ ನಡೆಯುವ ಸ್ಥಳದಲ್ಲಿಯೇ ಕೊವಿಡ್ ಟೆಸ್ಟಿಂಗ್ ಸೆಂಟರ್ ಹಾಗೂ ವ್ಯಾಕ್ಸಿನೇಷನ್ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಪರಿಷೆಗೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.
ಕರ್ನಾಟಕ ಪ್ರವಾಸೊದ್ಯಮ ಇಲಾಖೆಯ ವೆಬ್ಸೈಟ್ನಲ್ಲಿ ದಾಖಲಾಗಿರುವ ಮಾಹಿತಿಯಂತೆ, ಬೆಂಗಳೂರು ಗಾತ್ರದಲ್ಲಿ ಬೆಳೆದು ಮಹಾ ನಗರವಾಗುವ ಮೊದಲು, ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ (ಶೇಂಗಾ) ಬೆಳೆಯುತ್ತಿದ್ದರು. ಆದರೆ ಕಟಾವಿಗೆ ಸಿದ್ಧವಾದ ನೆಲಗಡಲೆಯನ್ನೆಲ್ಲ ಗದ್ದೆಗೆ ದಾಳಿ ಇಡುತ್ತಿದ್ದ ಬಸವವೊಂದು ನಾಶಪಡಿಸುತ್ತಿತ್ತು. ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಬಸವ (ನಂದಿ)ನನ್ನ ಪ್ರಾರ್ಥಿಸಲು ಆರಂಭಿಸಿದರು. ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು ಮತ್ತು ಈ ಸ್ಥಳದಲ್ಲಿ ಕೆಂಪೇಗೌಡರು 16 ನೇಶತಮಾನದಲ್ಲಿ ನಂದಿಯ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನ ಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಕರೆಯಲಾಗುತ್ತದೆ. ಕಡಲೆ ಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ.
ಕಡಲೆಕಾಯಿ ಪರಿಷೆ ಸಮಯದಲ್ಲಿ ಗ್ರಾಹಕರು ನೆಲಗಡಲೆಗಳನ್ನು ರೈತರಿಂದ ನೇರವಾಗಿ ಮಾರುಕಟ್ಟೆ ದರಕ್ಕಿಂತ ಅಗ್ಗವಾಗಿ ಖರೀದಿಸುತ್ತಾರೆ. ಕಡಲೆಕಾಯಿ ಪರಿಷೆಯ ಸಂದರ್ಭದಲ್ಲಿ ಬಸವನ ಗುಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಯುತ್ತದೆ. ಅಲಂಕೃತ ಬೀದಿಗಳಲ್ಲಿ ಸಾಕಷ್ಟು ಶಾಪಿಂಗ್ ಆಯ್ಕೆಗಳು, ಆಹಾರ ಮಳಿಗೆಗಳು, ಆಟಗಳು ಮತ್ತು ಮಕ್ಕಳಿಗೆ ಆಟಿಕೆಗಳು ಇರುತ್ತವೆ. ಬಸವನಗುಡಿ ಮತ್ತು ಸುತ್ತಮುತ್ತಲಿನ ಜನರು ಕಡಲೆಕಾಯಿ ಪರಿಷೆಯನ್ನು ಕಾತರದಿಂದ ಎದುರು ನೋಡುತ್ತಾರೆ ಮತ್ತು ಸಂಭ್ರಮಾಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ: ಏಷ್ಯಾ ವಿಮಾನ ನಿಲ್ದಾಣಗಳಲ್ಲೇ ಬೆಂಗಳೂರು ವಿಮಾನ ನಿಲ್ದಾಣ ಸಿಬ್ಬಂದಿ ಸೇವೆ ಪ್ರಶಂಸೆ ಗರಿ
Discussion about this post