ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯನಟ ಶಿವರಾಂ(84) ಹೊಸಕೆರೆಯಲ್ಲಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. 3 ದಿನಗಳ ಹಿಂದೆ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದ್ದು, ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. ಆದರೆ ಈಗ ಮತ್ತೆ ಅವರನ್ನು ಐಸಿಯು ಗೆ ದಾಖಲಿಸಲಾಗಿದೆ.
ಮನೆಯಲ್ಲಿ ಅಯ್ಯಪ್ಪ ಪೂಜೆಗೆಂದು ರೂಮ್ಗೆ ಹೋಗುವ ವೇಳೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು, ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದೇ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಹೇಳಿದ್ದು, ವಯಸ್ಸಾದ ಕಾರಣ ಅದೂ ಕಷ್ಟ ಎಂದು ಶಿವರಾಮ್ ಅವರ ಹಿರಿ ಮಗ ರವಿಶಂಕರ್ ಮಾಹಿತಿ ನೀಡಿದ್ದಾರೆ.
ಸುಮಾರು ಆರು ದಶಕಗಳಿಂದ ಸಕ್ರಿಯವಾಗಿ ಕಿರಿತೆರೆ ಹಾಗೂ ಹಿರಿತೆರೆ ಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ ಇವರು ನಿರ್ಮಾಪಕನಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.
ತಾವು ಸ್ಥಾಪಿಸಿದ ರಾಶಿ ಬ್ರದರ್ಸ್ ಸಂಸ್ಥೆ ಮೂಲಕ ‘ಗೆಜ್ಜೆಪೂಜೆ’, ‘ಉಪಾಸನೆ’, ‘ನಾನೊಬ್ಬ ಕಳ್ಳ’, ‘ಡ್ರೈವರ್ ಹನುಮಂತು, ‘ಬಹಳ ಚೆನ್ನಾಗಿದೆ’ ಸಿನಿಮಾ ನಿರ್ಮಿಸಿದ್ದಾರೆ. ಸಿಂಗೀತಮ್ ಶ್ರೀನಿವಾಸರಾವ್ ನಿರ್ದೇಶನದ ರಾಜಕುಮಾರ್ ನಟನೆಯ ಏಳು ಚಿತ್ರಗಳಿದ್ದು, ಈ ಏಳರಲ್ಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜೊತೆಯೂ ಕೆಲಸ ಮಾಡಿದ್ದು, ಚಿತ್ರ ರಂಗದಲ್ಲಿ ಶಿವರಾಮಣ್ಣ ಎಂದೇ ಕರೆಯಲ್ಪಟ್ಟ ಹೆಗ್ಗಳಿಕೆ ಅವರದ್ದಾಗಿತ್ತು.
ಹಿರಿಯ ನಟ ಶಿವರಾಂ ಅವರ ಆರೋಗ್ಯ ಚೇತರಿಕೆಗೆ ಕರ್ನಾಟಕ ಮತ್ತು ಭಾರತದಾದ್ಯಂತ ಅವರ ಅಭಿಮಾನಿ ವರ್ಗ ಪ್ರಾರ್ಥನೆಯ ಮೊರೆಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಂ ಅವರ ಚೇತರಿಕೆಗೆ ಪ್ರಾರ್ಥಿಸಿ ಪೋಸ್ಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ
(Kannada Senior Actor Shivaram health serious treatment continues)
Discussion about this post