ಬೆಂಗಳೂರು: ರಾಜ್ಯದಲ್ಲಿ ಒಟ್ಟಾರೆ 7 ಕೋಟಿ 50 ಲಕ್ಷ ಡೋಸ್ ಲಸಿಕೆ ನೀಡಲಾಗಿದ್ದು, ಬುಧವಾರ ಒಂದೇ ದಿನ 9 ಲಕ್ಷ ಡೋಸ್ ಲಸಿಕೆ ನೀಡಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. 92 ಜನರು ಮೊದಲ ಡೋಸ್ ಪಡೆದಿದ್ದರೇ, ಶೇ.62 ರಷ್ಟು ಜನರಿಗೆ ಸೆಕೆಂಡ್ ಡೋಸ್ ನೀಡಲಾಗಿದೆ. ಇಡೀ ದೇಶದಲ್ಲೇ ನಮ್ಮ ರಾಜ್ಯ ಲಸಿಕೆ ನೀಡುವುದರಲ್ಲಿ 2-3ನೇ ಸ್ಥಾನದಲ್ಲಿ ಇದ್ದೇವೆ. ಇದಕ್ಕೆ ಸಿಎಂ ಕೂಡಾ ಹೆಚ್ಚು ಸಹಕಾರ ನೀಡಿದ್ದಾರೆ. ಹಾಗೆಯೇ ಆರೋಗ್ಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಸಿಕೆ ಪಡೆದ ಜನರಿಗೂ ಅಭಿನಂದನೆ ಸಲ್ಲಿಸಿದ ಅವರು, ಜನರು ಆದಷ್ಟು ಬೇಗ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.
ಒಂದು ಡೋಸ್ ಲಸಿಕೆ ಪಡೆದರೆ, ಸ್ಪಲ್ಪ ರೋಗನಿರೋಧಕ ಶಕ್ತಿ ಬರುತ್ತದೆ. ಸಂಪೂರ್ಣ ರೋಗ ನಿರೋಧಕ ಶಕ್ತಿ ಬರಬೇಕಾದರೆ, 2 ಡೋಸ್ ಪಡೆಯಲೇಬೇಕು. ಹೀಗಾಗಿ ಜನ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದು ಸೂಚಿಸಿದರು.
ಓಮಿಕ್ರಾನ್ ಆತಂಕ: ಕೊರೊನಾ ರೂಪಾಂತರಿ ಓಮಿಕ್ರಾನ್ ಆತಂಕದಿಂದಾಗಿ ಏರ್ಪೋರ್ಟ್ನಲ್ಲಿ ವಿದೇಶಿ ಪ್ರಯಾಣಿಕರ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿದ್ದೇವೆ. ಈ ಬಗ್ಗೆ ಖುದ್ದಾಗಿ ಹೋಗಿ ಪರಿಶೀಲನೆ ಮಾಡಿದ್ದೇನೆ. ಎಲ್ಲರಿಗೂ ಕಡ್ಡಾಯ ಟೆಸ್ಟ್ ಮಾಡಲಾಗುತ್ತದೆ. ಜೊತೆಗೆ ಟೆಸ್ಟ್ ವರದಿ 3-4 ಗಂಟೆ ಒಳಗೆ ಬರೋ ಹಾಗೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಇದಕ್ಕೆ ಸಹಕಾರ ನೀಡಬೇಕು ಎಂದರು.
ಅಬೋರ್ಡ್ ಟೆಸ್ಟ್: ತಕ್ಷಣವೇ ರಿಪೋರ್ಟ್ ಬರಲು ಅಬೋಡ್ ಟೆಸ್ಟ್ ಮಾಡಲಾಗುತ್ತಿದೆ. ಈ ಅಬೋರ್ಡ್ ಟೆಸ್ಟ್ಗೆ ಕೇಂದ್ರವೇ ದರ ನಿಗದಿಗೊಳಿಸಿದೆ. ಈ ಟೆಸ್ಟ್ಗೆ 3 ಸಾವಿರ ರೂ. ನೀಡಬೇಕು. ಅಬೋರ್ಡ್ ಟೆಸ್ಟ್ 1-2 ಗಂಟೆಯಲ್ಲಿ ಬರುತ್ತದೆ. ಈ ಟೆಸ್ಟ್ ಕೂಡಾ ನಿಖರವಾದ ವರದಿ ನೀಡುತ್ತದೆ. ಜೊತೆಗೆ ಆರ್ಟಿಪಿಸಿಆರ್ ಟೆಸ್ಟ್ ಕೂಡಾ 3-4 ಗಂಟೆ ಒಳಗೆ ರಿಪೋರ್ಟ್ ನೀಡಲು ಕ್ರಮವಹಿಸಲಾಗಿದೆ ಎಂದರು.
ಕೆಲ ಎಂಎನ್ಸಿ ಕಂಪನಿ ಅವರು ನಮ್ಮ ಬಿಡಿ ಅಮೇಲೆ ಟ್ರ್ಯಾಕ್ ಮಾಡಿ ಅಂತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಈ ಬಗ್ಗೆ ನಮಗೆ ಎರಡು ವರ್ಷಗಳ ಅನುಭವ ಆಗಿದೆ. ಹೀಗಾಗಿ ಎಲ್ಲರಿಗೂ ಟೆಸ್ಟ್ ಕಡ್ಡಾಯ ಮಾಡಿದ್ದೇವೆ. ಪ್ರಯಾಣಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಮಾಲ್ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಬಿಬಿಎಂಪಿಯಿಂದ ಈಗಾಗಲೇ ನಮಗೆ ಮನವಿ ಬಂದಿದೆ. ಆದರೆ ಇಂದು ಮುಖ್ಯಮಂತ್ರಿ ಅವರು ದೆಹಲಿಗೆ ತೆರಳುತ್ತಾರೆ. ದೆಹಲಿಯಿಂದ ಅವರು ಬಂದ ಕೂಡಲೇ ಚರ್ಚೆ ಮಾಡಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಅಗತ್ಯ ಇರುವ ಕಡೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.
ಸಾರ್ವಜನಿಕ ಪ್ರದೇಶದಲ್ಲಿ ನಿರ್ಬಂಧದ ಕುರಿತು ಮಾತನಾಡಿದ ಅವರು, ಇನ್ನೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಎರಡು ಡೋಸ್ ಆಗದವರಿಗೆ ನಿರ್ಬಂಧ ವಿಧಿಸುವ ಬಗ್ಗೆ ನಿರ್ಧಾರ ಆಗಿಲ್ಲ. ಆ ಬಗ್ಗೆ ಸಲಹೆಗಳು ಬಂದಿವೆ. ಇವೆಲ್ಲವನ್ನು ಸಿಎಂ ದೆಹಲಿಯಿಂದ ವಾಪಸಾದ ಬಳಿಕ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.
7 crore 50 lakh doses vaccine in the state
Discussion about this post