ಬೆಂಗಳೂರು: ಕೋವಿಡ್-19, ಹೊಸ ರೂಪಾಂತರ ಒಮಿಕ್ರಾನ್ ಸೋಂಕಿನ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ತಜ್ಞರು ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ. ಈಗಿರುವ ಪರಿಸ್ಥಿತಿ ಗಮನಿಸಿದರೆ ಗಾಬರಿಯಾಗಬೇಕಿಲ್ಲ. ಹಾಸ್ಟೆಲ್ ಮತ್ತು ಕ್ಲಸ್ಟರ್ಗಳ ನಿರ್ವಹಣೆಗೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ಸಚಿವ ಸಂಪುಟ ಸಭೆಯಲ್ಲಿ ತಜ್ಞರ ತಂಡದೊಂದಿಗೆ ಮಾತನಾಡಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅಲ್ಲಲ್ಲಿರುವ ಹಾಸ್ಟೆಲ್ಗಳ ನಿರ್ವಹಣೆಗೆ ಈಗಿರುವ ಎಸ್ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಪುನರ್ ಪರಿಷ್ಕರಿಸಿ ನೀಡಲಾಗುತ್ತದೆ.
ಹಾಸ್ಟೆಲ್ ನಿಭಾಯಿಸುವುದು, ಎರಡು ದಿನಗಳಿಗೊಮ್ಮೆ ಸ್ಯಾನಿಟೈಸ್ ಮಾಡುವುದು, ವಿದ್ಯಾರ್ಥಿಗಳು ಊಟ ನೀಡುವ ವೇಳೆ ಒಂದೇ ಸಲ ಬರದಂತೆ ವಿಭಾಗಿಸುವುದು, ಸಂದರ್ಶಕರಿಗೆ ನಿರ್ಬಂಧ, ಅಡುಗೆಯವರ ಸಹಿತ ಎಲ್ಲ ಸಿಬ್ಬಂದಿಗೆ ಕೋವಿಡ್ ಎರಡೂ ಲಸಿಕೆ ನೀಡುವುದು. ಐಸೋಲೇಶನ್ ಕೊಠಡಿ ಮಾಡುವುದು ಇತ್ಯಾದಿಗಳನ್ನು ಅದು ಒಳಗೊಂಡಿರುತ್ತದೆ. ಇದೇ ರೀತಿಯ ಎಸ್ಒಪಿ ಕ್ಲಸ್ಟರ್ ನಿರ್ವಹಣೆಗೂ ನೀಡಲಾಗುತ್ತದೆ ಎಂದರು.
ಇದಲ್ಲದೇ ಕೋವಿಡ್ ಲಸಿಕೆ ನೀಡುವುದಕ್ಕೆ ಈ ಹಿಂದಿನಂತೆ ವಿಶೇಷ ಅಭಿಯಾನಗಳನ್ನು ಮಾಡುವುದಕ್ಕೆ ಸಚಿವ ಸಂಪುಟ ಸಲಹೆ ಮಾಡಿದೆ. ಅದನ್ನು ಮುಂದುವರಿಸಲು ಕ್ರಮಕೈಗೊಳ್ಳಲಾಗುತ್ತದೆ. ಇದಲ್ಲದೇ ರಾಜ್ಯದ ಗಡಿಭಾಗದಲ್ಲಿರುವ ಕೋವಿಡ್ ಕಟ್ಟೆಚ್ಚರ ಮುಂದುವರಿಯುತ್ತದೆ. ಜೊತೆಗೆ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಇರುವ ಎಲ್ಲ ನಿಬಂಧನೆಗಳು ಕೂಡ ಮುಂದುವರಿಯುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Special Guideline























Discussion about this post