ಚಿಕ್ಕಮಗಳೂರು: ಅಂತರಂಗದ ಅಭಿವ್ಯಕ್ತಿಯು ಕಾವ್ಯ, ಕೃತಿಗಳಾಗಿ ಹೊರಹೊಮ್ಮಿದಾಗ ಅದು ಓದುಗರನ್ನೂ ಸೆಳೆಯುತ್ತದೆ. ಓದುಗರ ಹೃದ್ಗತವಾದಾಗ ಮಾತ್ರಾ ಸಾಹಿತ್ಯ ಶಾಶ್ವತವಾಗುತ್ತದೆ. ಬರವಣಿಗೆಯೆಂಬುದು ಸಹಜತೆಯ ಚಿತ್ರಣವನ್ನು ರೂಪಕ, ಪ್ರತಿಮೆಗಳಿಂದ ಕೂಡಿದಾಗ ಆಕರ್ಷಣೀಯವಾಗುತ್ತದೆ” ಎಂದು ಹಿರಿಯ ಪತ್ರಕರ್ತ , ಕುವೆಂಪು ಭಾಷಾ ಭಾರತಿ ಸದಸ್ಯ ಸ. ಗಿರಿಜಾಶಂಕರ ಹೇಳಿದರು.
ಅವರು ನಗರದ ಬಸವನಹಳ್ಳಿಯ ಶಂಕರ ಮಠದ ಪ್ರವಚನ ಮಂದಿರದಲ್ಲಿ ಕಲ್ಕಟ್ಟೆ ಪುಸ್ತಕದ ಮನೆಯ ಹದಿನೆಂಟನೇ ವಾರ್ಷಿಕೋತ್ಸವದ ಪ್ರಯುಕ್ತ, ಕಲ್ಕಟ್ಟೆ ಪುಸ್ತಕದ ಮನೆ, ನಾದಚೈತನ್ಯ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಅಜ್ಜಂಪುರ ಸಾಂಸ್ಕೃತಿಕ ಪ್ರತಿಷ್ಠಾನ ಏರ್ಪಡಿಸಿದ್ದ ” ಸಂಜೆ ಹೊತ್ತುಗೆ” ಕಾರ್ಯಕ್ರಮದಲ್ಲಿ ಜಿಲ್ಲೆಯ ಮೂವರು ಯುವ ಪ್ರತಿಭಾವಂತ ಯುವ ಸಾಹಿತಿಗಳಾದ ತನ್ಮಯಿ ಪ್ರೇಮ ಕುಮಾರ್ , ಪೃಥ್ವಿಸೂರಿ, ವೈಷ್ಣವಿ ಎನ್ ರಾವ್ ರವರು ಕ್ರಮವಾಗಿ ಬರೆದ ಭಾವಮೊಹರು( ಕವನ ಸಂಕಲನ), ಬೈ ಟು ಕಾಫಿ( ಲೇಖನಗಳ ಸಂಗ್ರಹ), ಬಲಾ ಚ ಪೃಥ್ವಿ( ನಾಟಕ) ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
” ತನ್ಮಯಿ ತನ್ನ ಕವನಗಳಲ್ಲಿ ವಾಸ್ತವದ ಚಿತ್ರಣವನ್ನು ನೀಡಿದ್ದಾರೆ, ಸಾಮಾಜಿಕ ಸ್ಪಂದನೆಯ ಜೊತೆ ಜೊತೆಯಲ್ಲಿ ಹೋರಾಟ, ವ್ಯಕ್ತಿ ಚಿತ್ರಣ, ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆಗಳೆಲ್ಲವೂ ಇವರ ಕವನಗಳಲ್ಲಿವೆ. ಪೂರ್ವಸೂರಿಗಳ ರಸಪಾಕವನ್ನು ಹೀರಿಕೊಂಡು ಸ್ವಂತಿಕೆಯ ಪ್ರಭಾವಳಿಯನ್ನು ತಾಳಿರುವ ಯುವ ಪ್ರತಿಭೆಯನ್ನು ಈ ಕೃತಿಯಲ್ಲಿ ಕಾಣಬಹುದು. ಒಂದು ಗಟ್ಟಿಯಾದ ಕೃತಿ ನಮ್ಮ ನೆಲದಿಂದ ಮೂಡಿ ಬಂದಿದೆ” ಎಂದು ಅವರು ನುಡಿದರು.
ವಿಮರ್ಶಕ ಡಾ.ಹೆಚ್. ಎಸ್ ಸತ್ಯನಾರಾಯಣ ಮಾತನಾಡಿ ” ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು ಪೃಥ್ವಿಸೂರಿ ತನ್ನ ಬೈಟು ಕಾಫಿಯಲ್ಲಿ ನೀಡಿದರೆ, ಕೊರೋನಾ ಕಾಲದಲ್ಲಿ ನಾವು ಗಮನಿಸಬಹುದಾಗಿದ್ದ ಸಕಾರಾತ್ಮಕ ಚಿಂತನೆಗಳನ್ನು ವೈಷ್ಣವಿ ತನ್ನ ಬಲಾ ಚ ಪೃಥ್ವಿ ಯಲ್ಲಿ ನೀಡಿದ್ದಾರೆ. ದೇಶ ವಿದೇಶಗಳ ಗಣ್ಯರ ಸಾಧನೆಯ ಜೊತೆಗೆ ಸ್ಥಳೀಯರಾದ ವಿವಿಧ ವೇಷ ಚತುರ ಬ್ಯಾಗಡೇಹಳ್ಳಿ ಬಸವರಾಜ್ ರಂಥವರನ್ನು ನೆನೆದು ಬರೆದ ಲೇಖನಗಳು ಸ್ಪೂರ್ತಿದಾಯಕವಾಗಿವೆ ಹಾಗೇ ನಾಟಕ ಕೃತಿಯಲ್ಲಿ ವಿಕಾಸವಾದದ ಡಾರ್ವಿನ್ ಇದೇ ಮೊದಲಬಾರಿ ಕಾಣಿಸಿಕೊಂಡರೆ, ಸ್ಯಾನಿಟೈಜರ್, ಮಾಸ್ಕ್ ಗಳೂ ಪಾತ್ರಗಳಾಗಿರುವುದು, ನಾಟಕ ಸ್ವರ್ಗದಲ್ಲಿ ಪ್ರಾರಂಭವಾಗಿ ಸ್ವರ್ಗದಲ್ಲಿಯೇ ಮುಗಿಯುವುದು ಧನಾತ್ಮಕ ಅಂಶವಾಗಿದೆ” ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಕಲಾಪೋಷಕ ಜಯರಾಮ್ ಬಾಣಸವಾಡಿ ” ಮಲೆನಾಡ ಪ್ರತಿಭಾಸಂಗಮ ದಂತಿರುವ ಈ ಕಾರ್ಯಕ್ರಮ ನಿಜಕ್ಕೂ ಸಮಾಜಮುಖಿಯಾದುದು. ಕ್ಲಬ್ ಹೌಸ್ ಮೂಲಕ ಪ್ರಾರಂಭವಾದ ಕಲ್ಕಟ್ಟೆ ಪುಸ್ತಕದ ಮನೆಯ ಬಂಧವು ಹೊಸ ದಿಕ್ಕಿನೆಡೆಗೆ ನನ್ನನ್ನು ಹೊರಳುವಂತೆ ಮಾಡಿದೆ. ಕಲೆಯ ನೆರಳಲ್ಲಿ ನೆಮ್ಮದಿ ಹೊಂದಲು ಸಾಧ್ಯ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ” ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೇಖಾನಾಗರಾಜರಾವ್ ” ಸಾಂಸ್ಕೃತಿಕ ಸಂಘಟನೆಗಳ ಉದ್ದೇಶ ಒಂದೇ ಆಗಿರುವಾಗ ಸಂಘಟನಾತ್ಮಕವಾಗಿ ನಡೆವ ಕಾರ್ಯಕ್ರಮಗಳು ಸತ್ಫಲ ನೀಡುತ್ತವೆ. ಈ ದಿಸೆಯಲ್ಲಿ ಕಲ್ಕಟ್ಟೆ ಪುಸ್ತಕದ ಮನೆ ಈ ದಿನ ಯುವಪ್ರತಿಭೆಗಳ ಪುಸ್ತಕಗಳನ್ನು ಲೋಕಾರ್ಪಣೆ ಗೊಳಿಸುತ್ತಿದೆ” ಎಂದರು.
ತಮ್ಮ ಕೃತಿಗಳ ರಚನೆಗೆ, ಲೋಕಾರ್ಪಣೆಗೆ ಕಾರಣರಾದವರಿಗೆ ತನ್ಮಯಿ, ಪೃಥ್ವಿ, ವೈಷ್ಣವಿ ಇದೇ ವೇಳೆ ತಮಗೆ ನೀಡಿದ ಪ್ರತಿಭಾಪುರಸ್ಕಾರ ಸ್ವೀಕರಿಸಿ ಕೃತಜ್ಞತೆ ಅರ್ಪಿಸಿದರು. ಜ್ಯೂನಿಯರ್ ಎಸ್ ಜಾನಕಿ ಎಂದು ಗೌರವ ಪಡೆದ ಬೆಂಗಳೂರಿನ ಹಿನ್ನೆಲೆಗಾಯಕಿ ಶ್ರೀದೇವಿಯವರ ಗೀತಗಾಯನ ಕೇಳುಗರಲ್ಲಿ ರೋಮಾಂಚನ ತಂತು. ಅಪೂರ್ವ ಒಡನಾಟ ಕೃತಿಗಾಗಿ ಹಲವು ಪ್ರಶಸ್ತಿ ಪಡೆದ ಡಾ.ಸತ್ಯನಾರಾಯಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಸೂರಿಶ್ರೀನಿವಾಸ್, ಗಾಯಕಿ ಶ್ರೀದೇವಿ ಯವರನ್ನು ಇದೇ ವೇಳೆ ಸನ್ಮಾನಿಸಲಾಯ್ತು. ಮಲ್ಲಿಗೆ ಸುಧೀರ್ ಸ್ವಾಗತಿಸಿ , ನಾಗರಾಜರಾವ್ ಕಲ್ಕಟ್ಟೆ ನಿರೂಪಿಸಿ, ರೇಖಾ ಪ್ರೇಮ್ ಕುಮಾರ್ ವಂದಿಸಿದರು.
“Kalkatta Kannada 18”
Discussion about this post