ಮೈಸೂರು: ಒಡೆದು ಹಂಚಿ ಹೋಗಿರುವ ರೈತ ಸಂಘಟನೆಗಳು ಮತ್ತೆ ಒಂದಾಗಿ, ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ತಿಳಿಸಿದರು.
ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ವಿಶ್ವ ರೈತ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ರೈತ ಸಮಾವೇಶ ಹಾಗೂ ರೈತ ಹೋರಾಟದಲ್ಲಿ 40ವರ್ಷ ಪೂರೈಸಿರುವ ಕುರುಬೂರು ಶಾಂತಕುಮಾರ್ ಸನ್ಮಾನ ಸಮಾರಂಭದಲ್ಲಿ ಕುರುಬೂರು ಶಾಂತಕುಮಾರ್ ಗೆ ರೈತರತ್ನ ಬಿರುದು,ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರೈತರಿಂದಲೇ ಜಗತ್ತು ಬದುಕುತ್ತಿದೆ ಎಂಬುದನ್ನು ಯಾರೂ ಮರೆಯಬಾರದು. ರೈತರು ಕೃಷಿ ಮಾಡದಿದ್ದರೆ, ಜಗತ್ತು ಉಳಿಯುವುದಿಲ್ಲ. ಹಾಗಾಗಿ ರೈತರ ಭವಿಷ್ಯದ ಬಗ್ಗೆ ಹೆಚ್ಚಿನ ಗಮನವನ್ನು ಎಲ್ಲರೂ ಹರಿಸಬೇಕಾಗಿದೆ ಎಂದು ಹೇಳಿದರು.
ರೈತರ ಬೇಡಿಕೆಗಳ ಈಡೇರಿಕೆಯ ವಿಚಾರದಲ್ಲಿ ಸರ್ಕಾರಗಳು ಉದಾಸೀನ ಮಾಡಬಾರದು. ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ರೈತರು ಎಂತಹ ಸಂದರ್ಭ ಎದುರಾದರೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು, ಯಾವುದೇ ಕಾರಣಕ್ಕೂ ಎದೆಗುಂದಬಾರದು. ಆತ್ಮಹತ್ಯೆಯಂತಹ ಕೆಟ್ಟ ಯೋಚನೆಗಳನ್ನು ಮಾಡಬಾರದು ಎಂದು ಕಿವಿ ಮಾತು ಹೇಳಿದರು.
ರೈತರು ಕೃಷಿಯಲ್ಲಿ ಹೆಚ್ಚಾಗಿ ರಾಸಾಯನಿಕವನ್ನು ಬಳಸುತ್ತಿರುವುದರಿಂದ ವಿಷ ಆಹಾರವನ್ನು ಉತ್ಪಾಧಿಸಿ, ಜನರಿಗೆ ನೀಡಲಾಗುತ್ತಿದೆ. ಅಲ್ಲದೇ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಕೂಡ ದಿನೇ ದಿನೇ ಕಡಿಮೆಯಾಗುತ್ತಿದೆ. ಇದನ್ನೆಲ್ಲಾ ತಡೆಗಟ್ಟಲು ರೈತರು ಹೆಚ್ಚಾಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕು, ಅತಿವೃಷ್ಠಿಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರವನ್ನು ರೈತರು ಕೇಳುತ್ತಾರೆ. ಸರ್ಕಾರಗಳು ಅವರ ಸಮಸ್ಯೆ, ಸಂಕಷ್ಟವನ್ನು ಪರಿಹರಿಸುವ ಪ್ರಯತ್ನ ಮಾಡಬೇಕು.
ರೈತ ಸಂಘಗಳು ಒಡೆದು ಚೂರು, ಚೂರಾಗಿರುವ ಕಾರಣ ಒಗ್ಗಟ್ಟಿನ ಹೋರಾಟ ಮಾಡದೆ, ರೈತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರೈತ ನಾಯಕರು, ಮುಖಂಡರುಗಳು ತಮ್ಮಲ್ಲಿರುವ ರಾಗ, ದ್ವೇಷ, ಪ್ರತಿಷ್ಠೆಗಳನ್ನು ಬದಿಗಿರಿಸಿ, ಎಲ್ಲರೂ ಮತ್ತೆ ಒಂದಾಗಿ ರೈತ ಸಂಘವನ್ನು ಕಟ್ಟಿ, ಒಗ್ಗಟ್ಟಿನಿಂದ ಹೋರಾಟ ನಡೆಸಿದಾಗ ಮಾತ್ರ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, 40 ವರ್ಷಗಳೇ ಕಳೆದರೂ ರೈತರ ಬದುಕು ಹಸನಾಗಿಲ್ಲ, ಹಳ್ಳಿಗಳಲ್ಲಿ ರೈತರಿಗೆ ಹೆಣ್ಣು ಕೊಡುತ್ತಿಲ್ಲ. ದೇಶದ ಕೃಷಿ ಸಂಸ್ಕೃತಿಯನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಬ್ಬಿನ ಬೆಲೆ ಪುನರ್ ಪರಿಶೀಲನೆ ಮಾಡಬೇಕು. ಭೂಸುಧಾರಣೆ ಕಾಯ್ದೆಯ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ರೈತರೊಂದಿಗೆ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು, ಶ್ರೀರಾಮ ಸಕ್ಕರೆ ಕಾರ್ಖಾನೆ, ಮೈಶುಗರ್ ಕಾರ್ಖಾನೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
If the farmers’ organisations are reunited, the solution to the problems will come
Discussion about this post