ಬೆಂಗಳೂರು: ಜಿಲ್ಲಾಧಿಕಾರಿಗಳು ಜನರ ಮತ್ತು ಸರಕಾರದ ನಡುವಿನ ಬಹುಮುಖ್ಯ ಕೊಂಡಿ. ಸ್ಪಂದನಶೀಲರಾಗಿ ಆಡಳಿತ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿರುವುದಾಗಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಮುಖ್ಯಮಂತ್ರಿಗಳು ನೀಡಿರುವ ವಿವರ ನೋಡಿದರೆ ಅವರು ಜಿಲ್ಲಾಧಿಕಾರಿಗಳಿಗೆ ಭಾರೀ ಟಾಸ್ಕ್ ನೀಡಿದ ಹಾಗಿದೆ.
ಅವರೇ ನೀಡಿರುವ ವಿವರಗಳಲ್ಲಿ ಅಡಕವಾಗಿರುವ ಅಂಶಗಳಿವು:
1. ಬಾಕಿ ಇರುವ ರೈತರ ಬೆಳೆ ಪರಿಹಾರದ ದಾಖಲೆಗಳನ್ನು ಆ್ಯಪ್ಗಳಲ್ಲಿ ಅಪ್ಲೋಡ್ ಮಾಡಲು ಜನವರಿ 7ರ ಗಡಿ ನಿಗದಿ.
2. ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ನ ಮಾರ್ಗಸೂಚಿಯಂತೆ ಮತ್ತು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಘೋಷಣೆ ಮಾಡಿರುವ ಪರಿಹಾರವನ್ನು ರಾಜ್ಯದ 14 ಲಕ್ಷ ರೈತರಿಗೆ ಸಮರ್ಪಕವಾಗಿ ಕೂಡಲೇ ನೀಡುವಂತೆ ಅಧಿಕಾರಿಗಳಿಗೆ ಸೂಚನೆ.
3. 2019-20ರಲ್ಲಿ ಹಾನಿಯಾದ ಮನೆಗಳಿಗೆ ನೀಡಿರುವ ಪರಿಹಾರ ಬಳಸಿ ಮನೆ ನಿರ್ಮಾಣ ಮಾಡದಿರುವ ಬಗ್ಗೆ ಸಭೆಯ ಗಮನಕ್ಕೆ ತಂದಿದ್ದು, ಈ ಬಗ್ಗೆ ಮತ್ತೊಮ್ಮೆ ಜಿ.ಪಿ.ಎಸ್ ಮಾಡಿಸಿ, ಮನೆ ನಿರ್ಮಾಣ ಮಾಡದವರಿಗೆ 10 ದಿನಗಳ ಗಡುವಿನ ಅಂತಿಮ ನೋಟೀಸ್ ನೀಡಲು ಮತ್ತು ಮನೆ ನಿರ್ಮಾಣಕ್ಕೆ ಫಲಾನುಭವಿಗಳ ಸ್ವಂತ ಸ್ಥಳದಲ್ಲಿಯೇ ಸ್ಥಳ ಬದಲಾವಣೆಗೂ ಅನುಮತಿ ನೀಡುವಂತೆ ಸೂಚನೆ.
4. ನಗರ ಪ್ರದೇಶದಲ್ಲಿ 2,500 ಕ್ಕಿಂತಲೂ ಹೆಚ್ಚು ಎಕರೆ ಜಮೀನು ವಸತಿ ನಿರ್ಮಾಣಕ್ಕಾಗಿ ಲಭ್ಯವಿದ್ದು, ವಸತಿ ನಿರ್ಮಾಣ ಭೂ ಪರಿವರ್ತನೆ ಮಾಡುವ ಕುರಿತು ಚರ್ಚೆ.
5. ಅಕ್ರಮ ಸಕ್ರಮದಡಿಯಲ್ಲಿ ಗೋಮಾಳ ಜಮೀನನ್ನು ಸಕ್ರಮ ಮಾಡಲು ನಮೂನೆ 53 ಮತ್ತು 67 ನಲ್ಲಿ ಬಾಕಿ ಇರುವ ಅರ್ಜಿಗಳನ್ನು ಕಾನೂನಿನಡಿಯಲ್ಲಿ ಕೆಲವೊಂದು ತಿದ್ದುಪಡಿಯ ಆವಶ್ಯಕತೆ ಇರುವ ಬಗ್ಗೆ ಚರ್ಚೆ.
6. ಡೀಮ್ಡ್ ಫಾರೆಸ್ಟ್ ಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಕೇಸ್ ವಿಚಾರವಾಗಿ ಅರಣ್ಯ ಪ್ರದೇಶದಲ್ಲಿರುವ ಜಮೀನುಗಳು ಮತ್ತು ಅರಣ್ಯ ಪ್ರದೇಶದಲ್ಲಿಲ್ಲದ ಜಮೀನುಗಳ ದಾಖಲೆಗಳನ್ನು ಪರಿಶೀಲಿಸಿ ಮತ್ತೊಮ್ಮೆ ಸರ್ವೇ ಮಾಡಿ ವರದಿಗೆ ಸಲಹೆ.
7. ಸಹಾಯಕ ಕಮೀಷನರ್ ಹಾಗೂ ತಹಶೀಲ್ದಾರ್ ಕೋರ್ಟ್ನಲ್ಲಿ ಸುಮಾರು 10-15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದು, ಇವುಗಳು ನಿಧಾನವಾಗಿ ವಿಲೇವಾರಿಯಾಗುತ್ತಿದ್ದು, ಇದನ್ನು ಕೂಡಲೇ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹೆಚ್ಚುವರಿ ಸಹಾಯಕ ಕಮೀಷನರ್, ತಹಶೀಲ್ದಾರ್ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿ ಒಂದು ವರ್ಷದೊಳಗೆ ವಿಲೇವಾರಿ ಮಾಡುವ ಬಗ್ಗೆ ತೀರ್ಮಾನ.
8. ಸ್ವಾಮಿತ್ವ ಯೋಜನೆಯಡಿ ಡ್ರೋನ್ ಸರ್ವೇ ಈ ವರ್ಷದ ಗುರಿಗೆ ಶೇ. 59ರಷ್ಟು ಸಾಧನೆಯಾಗಿದೆ. ಆದರೆ ಭಾರತ ಸರಕಾರದ ಸರ್ವೇಕ್ಷಣಾ ಇಲಾಖೆಯ ಡ್ರೋನ್ ಗಳನ್ನಷ್ಟೇ ಅವಲಂಬಿಸಿದರೆ ವಿಳಂಬವಾಗುವ ಸಾಧ್ಯತೆ ಇರುವುದರಿಂದ ರಾಜ್ಯ ಸರಕಾರದಿಂದ ಹೆಚ್ಚುವರಿ ಡ್ರೋನ್ ಗಳ ಮೂಲಕ ಆಸ್ತಿಗಳ ಸರ್ವೇಕ್ಷಣೆ ನಡೆಸಲು ತೀರ್ಮಾನ.
9. ರಾಜ್ಯದಲ್ಲಿ ಸುಮಾರು 4,370 ಎಕರೆ ಸ್ಮಶಾನ ಭೂಮಿ ಅಗತ್ಯವಿದ್ದು, ಮುಂದಿನ ಒಂದು ವರ್ಷದಲ್ಲಿ ವಿಶೇಷ ಅಭಿಯಾನದ ಮೂಲಕ ಸ್ಮಶಾನ ಭೂಮಿ ಒದಗಿಸಲು ಮತ್ತು ಸರಕಾರಿ ಭೂಮಿ ಇರುವಲ್ಲಿ, ಸರಕಾರಿ ಭೂಮಿ, ಲಭ್ಯವಿಲ್ಲದ ಕಡೆಗಳಲ್ಲಿ ಖಾಸಗಿ ಜಮೀನು ಖರೀದಿ ಮಾಡಿ ಸ್ವಾಧೀನ ಪಡಿಸಿಕೊಳ್ಳಲು ಸೂಚನೆ. ಅರಣ್ಯ ಪ್ರದೇಶದಲ್ಲಿರುವ ಜನವಸತಿಗಳಿಗೆ ಸ್ಮಶಾನ ಭೂಮಿ ಒದಗಿಸಲು ಇರುವ ಕಾನೂನು ತೊಡಕು ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚನೆ.
10. ಸಾಮಾಜಿಕ ಭದ್ರತೆಯಡಿ ಪಿಂಚಣಿ ಸೌಲಭ್ಯದಡಿಯಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಆಧಾರ್ ಜೋಡಣೆ ಬಾಕಿ ಇದ್ದು, 1 ತಿಂಗಳಲ್ಲಿ ಈ ಕಾರ್ಯ ಮುಗಿಸಿ, ಬೋಗಸ್ ಪ್ರಕರಣಗಳನ್ನು ನಿವಾರಿಸಿ ಪಾರದರ್ಶಕತೆ ಸಾಧಿಸುವುದಕ್ಕೆ ಸೂಚನೆ.
11. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಎಬಿ-ಎಆರ್ ಕೆ ಕಾರ್ಡುಗಳ ವಿತರಣೆ ಪ್ರಗತಿ ಕಡಿಮೆಯಾಗಿದ್ದು, ಆಧಾರ್ ಸಂಯೋಜನೆ ಆಗಿರುವ ಬಿಪಿಎಲ್ ಕಾರ್ಡುದಾರರನ್ನು ಸರಕಾರವೇ ಗುರುತಿಸಿ ಕಾರ್ಡು ವಿತರಣೆಗೆ ಕ್ರಮ.
12. ಕೋವಿಡ್ ಪರೀಕ್ಷೆಯ ಗುರಿ ಹೆಚ್ಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಈ ಗುರಿ ಸಾಧನೆಯನ್ನು ಖಾತರಿಪಡಿಸಬೇಕು. ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಬೇಕು.
13. ಎಲ್ಲ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಆಸ್ಪತ್ರೆಗಳು ಮತ್ತು ಬೆಡ್ಗಳ ಇನ್ ವೆಂಟರಿಯನ್ನು ಒದಗಿಸಬೇಕು. ಅಂತೆಯೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿ ಇನ್ ವೆಂಟರಿ ಲಭ್ಯವಿರಬೇಕು ಎಂದು ಸೂಚನೆ.
14. ಲಸಿಕೆ ಮೊದಲ ಡೋಸ್ ಶೇ. 100 ಗುರಿ ಸಾಧನೆ ಆಗಬೇಕು; ಎರಡನೇ ಡೋಸ್ ಕನಿಷ್ಠ ಶೇ. 80 ರಷ್ಟಾಗಬೇಕ್ಕೇನ್ನುವ ಗುರಿ ನೀಡಲಾಗಿದೆ.
15. 15 ರಿಂದ 18 ವರ್ಷದ ಮಕ್ಕಳಿಗೆ ಜನವರಿ 3 ರಿಂದ ಲಸಿಕೆ ನೀಡುವ ಪ್ರಕ್ರಿಯೆಯನ್ನೂ ಯಶಸ್ವಿಯಾಗಿಸಲು ಸೂಚನೆ.
Discussion about this post