
ಚಿಕ್ಕಮಗಳೂರು: ಕುರುಬ ಸಮುದಾಯದ ಜನಾಂಗಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಬಿಜೆಪಿ ಶಾಸಕ ಸಿ.ಟಿ.ರವಿ ಟ್ವೀಟ್ ಮೂಲಕ ಅವಹೇಳನಕಾರಿಯಾಗಿ ನಿಂದಿಸಿದ್ದು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಹಾಗೂ ತಾಲ್ಲೂಕು ಕುರುಬ ಸಮುದಾಯದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹನುಮಂತಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಜನಾಂಗದ ಕಾರ್ಯಕರ್ತರು ಶಾಸಕ ಸಿ.ಟಿ ರವಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿ ಆಜಾದ್ ಪಾರ್ಕ್ ವೃತ್ತದ ಎದುರು ಸಮಾವೇಶಗೊಂಡರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಜನಪ್ರತಿನಿಧಿಯಾಗಿರುವ ಶಾಸಕ ಸಿ.ಟಿ.ರವಿ ಅವರು ನಾಲಿಗೆ ಹರಿಬಿಟ್ಟು ಸಿದ್ದರಾಮಯ್ಯ ವಿರುದ್ಧವಾಗಿ ಉದ್ದಟತನದ ಹೇಳಿಕೆ ನೀಡಿರುವುದು ಖಂಡನೀಯ. ದತ್ತಾತ್ರೇಯ ಸ್ವಾಮಿ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ನೀವು ಶಾಸಕರಾಗಲು ಕುರುಬ ಸಮಾಜದ ಕೊಡುಗೆ ಇದೆ ಎಂಬುದನ್ನು ಮರೆಯಬೇಡಿ ಎಂದ ಅವರು ಕ್ಷಮೆಯಾಚನೆ ಮಾಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಸಮುದಾಯದವರು ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಬಜರಂಗದಳ ಮತ್ತು ಆರ್.ಎಸ್.ಎಸ್ ಎನ್ನುವ ಶಾಸಕರು ಅದು ಹೇಳಿಕೊಟ್ಟಿರುವ ಸಂಸ್ಕಾರಯುತ ಶಿಕ್ಷಣ ಎಂದರೇ ಇದೇನಾ. ಕುರುಬ ಸಮುದಾಯದ ಎರಡು ವರ್ಷಗಳ ಇತಿಹಾಸವಿದೆ. ಕನಕದಾಸ, ಸಾಮ್ರಾಟ ಅಶೋಕ ಸೇರಿದಂತೆ ಅನೇಕರು ಸಮುದಾಯದ ಭಾಗವಾಗಿದ್ದಾರೆ. ಸಿದ್ದರಾಮಯ್ಯ ಸಮುದಾಯದ ಆರಾಧ್ಯ ದೈವವಿದ್ದಂತೆ ಅವರನ್ನು ಅವಹೇಳನಕಾರಿಯಾಗಿ ಟೋಪಿ ಹಾಕಿರುವ ನೀನು ಯಾರಿಗೆ ಹುಟ್ಟಿದ್ದೀಯಾ ಎಂದು ಪ್ರಶ್ನಿಸಿರುವುದು ಉದ್ದಟತನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮ, ಜಾತಿಗಳ ಬಗ್ಗೆ ಪ್ರಶ್ನಿಸುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡಿಸೇಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಅನೇಕ ಬಾರಿ ಆಯವ್ಯ ಮಂಡಿಸಿ ದಾಖಲೆ ಬರೆದು, ಸರ್ವರ ಏಳಿಗೆಗೆ ಶ್ರಮಿಸಿರುವ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸುವಾಗ ಪ್ರಜ್ಞೆ ಇಟ್ಟುಕೊಳ್ಳಲಿ, ಇಂತಹ ಅಸಂಬದ್ದ ಹೇಳಿಕೆಗೆ ಕೂಡಲೇ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.
ನಾಲ್ಕು ಬಾರಿ ಶಾಸಕರಾಗಿ ಇಪ್ಪತ್ತು ವರ್ಷ ಕೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇನು ಎಂದು ಪ್ರಶ್ನಿಸಿದ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೋಟ್ಯಾಂತರ ಹಣವನ್ನು ಲೂಟಿ ಮಾಡಿ ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ. ಕರಗಡ ಏತಾನೀರಾವರಿ, ನಗರದ ಅಮೃತ್ ಹಾಗೂ ಯುಜಿಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನಾಲಿಗೆ ಹರಿಬಿಡುವ ಮೂಲಕ ತಮ್ಮ ನಾಯಕರ ವಿರುದ್ದ ಟೀಕೆ ಮಾಡಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಕುರುಬ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮಾಜದಲ್ಲಿ ಹುಟ್ಟಿರುವುದು ಜನಾಂಗದವರಿಗೆ ವರವಿದ್ದಂತೆ. ಅವರ ಆಡಳಿತವಧಿಯಲ್ಲಿ ಯಾವುದೇ ಧರ್ಮ, ಜಾತಿ ಎನ್ನದೇ ಸರ್ವರಿಗೂ ಸಮಾನ ರೀತಿಯಲ್ಲಿ ಶ್ರಮಿಸಿದ್ದಾರೆ. ಅಂತಹ ನಾಯಕನನ್ನು ಶಾಸಕರು ಟ್ವೀಟ್ ಮೂಲಕ ಮುಸ್ಲಿಂ ಟೋಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ ಎಂದು ಪೋಸ್ಟ್ ಮೂಲಕ ಟೀಕಿಸಿರುವುದು ಇಡೀ ಕುರುಬ ಸಮುದಾಯ ಮಾತ್ರವಲ್ಲದೇ, ದೇಶಕ್ಕೆ ಮತ್ತು ನಾಡಿನ ತಾಯಂದಿರಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಜಿಲ್ಲೆಯಲ್ಲಿ ಕುರುಬ ಸಮಾಜದ ಒಗ್ಗಟ್ಟು ಪ್ರದರ್ಶನವಾಗಬೇಕಾದರೆ ತಮ್ಮ ನಾಯಕ ಸಿದ್ದರಾಮಯ್ಯರನ್ನು ಟೀಕಿಸಿರುವ ಇಲ್ಲಿನ ಶಾಸಕರಿಗೆ ಚುನಾವಣೆಯಲ್ಲಿ ಮತದಾನದ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಅಧಿಕಾರದ ದರ್ಪದಿಂದ ಬಾಯಿಗೆ ಬಂದಂತೆ ಹೇಳಿಕೆ ನೀಡುವ ಡೋಂಗಿ ರಾಜಕಾರಣಿ ಕ್ಷೇತ್ರದ ಶಾಸಕನಾಗಿರುವುದು ನಾಚಿಕೆಗೇಡಿನ ಸಂಗತಿ. ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಗಳು ಭ್ರಷ್ಟಾಚಾರ, ಕಳಪೆಯಿಂದ ಕೂಡಿದ್ದ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರನ್ನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿ ಸಿದರು.
ಕಾಂಗ್ರೆಸ್ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಕುರುಬ ಸಮುದಾಯಕ್ಕೆ ಕಂಬಳಿ ಎನ್ನುವುದು ಶುಭ ಸಂಕೇತವಿದ್ದಂತೆ, ಪವಿತ್ರ ಸಂಸ್ಕೃತಿ ಹೊಂದಿರುವ ಸಮಾಜಕ್ಕೆ ಅವಹೇಳನ ಮಾಡಿರುವುದು ಸರಿಯಲ್ಲ ಎಂದ ಅವರು ಹಿಂಬಾಲಕರಿಂದ ಈ ಬಗ್ಗೆ ಸಮರ್ಥನೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ , ರಾಜ್ಯ ಕುರುಬರ ಸಂಘದ ನಿರ್ದೇಶಕ ವಕೀಲ ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ರೈತಮುಖಂಡ ಗುರುಶಾಂತಪ್ಪ, ಸಿಪಿಐ ಮುಖಂಡ ರೇಣುಕರಾಧ್ಯ, ಸಿ.ಪಿ.ಐ ಅಮ್ಜದ್, ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಕಡೂರಿನ ಕಾಂಗ್ರೆಸ್ ಮುಖಂಡ ಆನಂದ್, ರೂಬೆನ್ಮೋಸಸ್, ಹರ್ಷ, ರಂಗನಾಥ್.ಡಿ.ಜಿ., ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್, ಮರ್ಲೆ ಅಣ್ಣಯ್ಯ, ಕೆ.ಎಸ್.ಶಾಂತೇಗೌಡ ಸೇರಿದಂತೆ ಸಮಾಜದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

























Discussion about this post