ನವದೆಹಲಿ: ಹಸಿರು ಪಟಾಕಿ ಮತ್ತು ಕಡಿಮೆ ಮಾಲಿನ್ಯಕಾರಕ ವಸ್ತುಗಳನ್ನು ಬಳಸಿ ತಯಾರಿಸಿದ ಪಟಾಕಿಗಳನ್ನು ದೀಪಾವಳಿ ಹಬ್ಬದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಕೋವಿಡ್ ಸಾಂಕ್ರಾಮಿಕ ಹಾಗೂ ವಾಯುಮಾಲಿನ್ಯದ ನಡುವೆ ಪಟಾಕಿ ಸಂಪೂರ್ಣ ನಿಷೇಧಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಪಟಾಕಿ ಉತ್ಪಾದಿಸುವ ಕಂಪನಿಗಳು ಸುಪ್ರೀಂ ಮೊರೆ ಹೋಗಿದ್ದವು.
ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಆಗುವುದಿಲ್ಲ. ದುರುಪಯೋಗವನ್ನು ತಡೆಯಲು ಕಾರ್ಯವಿಧಾನವನ್ನು ಬಲಪಡಿಸಿ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ಅಜಯ್ ರಸ್ತೋಗಿ ಅವರಿದ್ದ ಪೀಠ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿಷೇಧಿತ ಪಟಾಕಿ ಮತ್ತು ಸಂಬಂಧಿತ ವಸ್ತುಗಳನ್ನು ರಾಜ್ಯದಲ್ಲಿ ಆಮದು ಮಾಡಿಕೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳುವ ಸಾಧ್ಯತೆ ಕುರಿತು ಪರಿಶೀಲಿಸುವಂತೆ ಸೂಚಿಸಿತು.
ಹಸಿರು ಪಟಾಕಿಗಳ ಬಗ್ಗೆ ಸುಪ್ರೀಂ ಕೋರ್ಟ್ನ ಮೂರು ಆದೇಶಗಳು ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಎರಡು ಆದೇಶಗಳ ಹೊರತಾಗಿಯೂ ಕೋಲ್ಕತ್ತಾ ಹೈಕೋರ್ಟ್ ಹಸಿರು ಪಟಾಕಿಗಳನ್ನು ನಿಷೇಧಿಸಿದೆ. ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಉತ್ತಮವಾಗಿದ್ದರೆ ಹಸಿರು ಪಟಾಕಿಗಳನ್ನು ಬಳಸಲು ಅನುಮತಿ ನೀಡುಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಗಳು ಹೇಳುತ್ತವೆ ಎಂದು ಪಟಾಕಿ ತಯಾಕರ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಭಟ್ನಾಗರ್ ಸೋಮವಾರ ಹೇಳಿದರು.
ಪರಿಸರ ಸಂರಕ್ಷಣೆ ಹಾಗೂ ಜನರ ಹಕ್ಕುಗಳ ರಕ್ಷಣೆ ಉದ್ದೇಶದಿಂದ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧಿಸುವಂತೆ ಕೋರಿ ಪರಿಸರ ಕಾರ್ಯಕರ್ತೆ ರೋಶನಿ ಅಲಿ ಸಲ್ಲಿಸಿದ್ದ ಸರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಕೋಲ್ಕತ್ತಾ ಹೈಕೋರ್ಟ್ ಆದೇಶ ಬಂದಿತ್ತು.
ಭಾರತದ ಅನೇಕ ನಗರಗಳಂತೆ ಬಂಗಾಳದ ರಾಜಧಾನಿ ಕೋಲ್ಕತ್ತಾವು ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ವಾಯುಮಾಲಿನ್ಯ ಮಟ್ಟವನ್ನು ದಾಖಲಿಸಿದೆ. 2019ರಲ್ಲಿ ದಾಖಲಾದ ಗುಣಮಟ್ಟವು ಹಾಗೆಯೇ ಮುಂದುವರಿದರೆ ಇಲ್ಲಿನ ಜನತೆ 9 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಸಂಶೋಧಕರ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿತ್ತು.
ಇದನ್ನೂ ಓದಿ: e Paper – November 2, 2021
Fireworks can’t be completely banned

























Discussion about this post