ಚಿಕ್ಕಮಗಳೂರು : ರಾಜ್ಯದ ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ಕೈಬಿಡುವಂತೆ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಶನಿವಾರ ಭೇಟಿ ಮಾಡಿದ ಪಕ್ಷದ ಮುಖಂಡರು ಈ ಸಂಬಂಧ ಮನವಿ ಸಲ್ಲಿಸಿ ಗೃಹ ಸಚಿವರ ನಡೆಯನ್ನು ಖಂಡಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ರಾಜ್ಯ ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಇಡೀ ಪೊಲೀಸ್ ವ್ಯವಸ್ಥೆಯನ್ನು ಅವಹೇಳನ ಮಾಡಿದಂತಾಗಿದೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆಯಲ್ಲೂ ದಕ್ಷ, ಪ್ರಾಮಾಣಿಕ, ನಿಷ್ಟಾವಂತ ಅಧಿಕಾರಿಗಳಿದ್ದಾರೆ. ಅಂತಹ ಅಧಿಕಾರಿಗಳಿಂದಾಗಿ ಇಲಾಖೆಯ ಬಗ್ಗೆ ಜನಸಾಮಾನ್ಯರಲ್ಲಿ ಇನ್ನೂ ಗೌರವವಿದ್ದು ಗೃಹ ಸಚಿವರು ಇದನ್ನು ಅರಿಯಬೇಕು. ಯಾರೋ ಒಬ್ಬಿಬ್ಬರ ತಪ್ಪಿಗೆ ಎಲ್ಲಾ ಪೊಲೀಸರನ್ನೂ ಅವಹೇಳನ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಗೃಹ ಸಚಿವರ ಅವಹೇಳನಕಾರಿ ಮಾತುಗಳಿಂದಾಗಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಮತ್ತು ಅವರ ಕುಟುಂಬದವರು ಮಾನಸಿಕವಾಗಿ ನೊಂದಿದ್ದಾರೆ. ಅವರ ಮನಸ್ಸಿಗೆ ಘಾಸಿಯುಂಟಾಗಿದೆ ಎಂದ ಮುಖಂಡರು ಜವಾಬ್ದಾರಿಯುತವಾಗಿ ಮಾತನಾಡದ ಹಿನ್ನೆಲೆಯಲ್ಲಿ ಗೃಹ ಸಚಿವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಪಕ್ಷದ ಮುಖಂಡರಾದ ಕೆ.ಆರ್.ಗಂಗಾಧರ್, ವಸಂತ, ಧನಂಜಯ, ನವೀನ್, ವಿನಯ್, ಕಲಾ, ರವಿಕುಮಾರ್ ಹಾಜರಿದ್ದರು.
Discussion about this post