ಬೆಂಗಳೂರು : ದೇಶದಲ್ಲಿ ಇದುವರೆಗೆ ಕೇವಲ ಶೇ ೨೧ ರಷ್ಟು ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಿ ಇಷ್ಟಕ್ಕೆ ಸಂಭ್ರಮಾಚರಣೆ ಮಾಡುತ್ತಾ ಸಾಧನೆ ಎಂದು ಹೇಳಿಕೊಳ್ಳುತ್ತಿರುವುದು ಆತ್ಮವಂಚನೆ ಈ ನಕಲಿ ಸಂಭ್ರಮಾಚರಣೆ ನಿಲ್ಲಿಸಿ ಲಸಿಕೆಯನ್ನು ಇನ್ನಷ್ಟು ತೀವ್ರಗತಿಯಲ್ಲಿ ಹಾಕುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ಕಿವಿ ಹಿಂಡಿದ್ದಾರೆ.
ಪ್ರಧಾನ ಮಂತ್ರಿಯವರು ಕೊರೋನ ವ್ಯಾಕ್ಸಿನ್ ವಿಚಾರಕ್ಕೆ ಸಂಬAಧಿಸಿದAತೆ ೧೦೦ ಕೋಟಿ ಡೋಸ್ ನೀಡುವುದರ ಮೂಲಕ ಜಗತ್ತಿನಲ್ಲಿಯೆ ಅಭೂತ ಪೂರ್ವ ಸಾಧನೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ೧೦೦ ಕೋಟಿ ಡೋಸ್ ನೀಡಿರುವುದೆಂದರೆ ನೂರು ಕೋಟಿ ಜನರಿಗೆ ಲಸಿಕೆ ನೀಡಿದಂತಲ್ಲ. ಮಕ್ಕಳೂ ಸೇರಿದಂತೆ ದೇಶದ ೧೪೦ ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆ ನೀಡಬೇಕೆಂದರೆ ಕನಿಷ್ಠ ೨೮೦ ಕೋಟಿ ಲಸಿಕೆ ನೀಡಬೇಕು. ಶೇ.೬ ರಷ್ಟು ಲಸಿಕೆಗಳು ವೇಸ್ಟ್ ಆಗುತ್ತಿವೆ. ಅವೂ ಸೇರಿದರೆ ಹತ್ತತ್ತಿರ ೩೦೦ ಕೋಟಿ ಲಸಿಕೆ ಬೇಕು.
ಅನೇಕ ದಶಕಗಳಿಂದ ನಮ್ಮ ದೇಶವು ಜಗತ್ತಿನ ಶೇ.೬೦ ರಷ್ಟು ಲಸಿಕೆ ಉತ್ಪಾದಿಸುವ ಶಕ್ತಿ ಹೊಂದಿದೆ. ಅಂಥದ್ದರಲ್ಲಿ ನಾವು ಲಸಿಕೆ ನೀಡಲು ಪ್ರಾರಂಭಿಸಿ ಸುಮಾರು ೧೦ ತಿಂಗಳಾದರೂ ೧೦೦ ಕೋಟಿ ಲಸಿಕೆ ನೀಡಿರುವುದು ದೊಡ್ಡ ಸಾಧನೆಯಲ್ಲ. ಎರಡೂ ಡೋಸ್ ನೀಡಿದರೆ ಮಾತ್ರ ಲಸಿಕೆ ನೀಡಿದಂತಾಗುತ್ತದೆ. ಇಲ್ಲದಿದ್ದರೆ ಲಸಿಕೆಯ ಪರಿಣಾಮ ದುರ್ಬಲವಾಗಿರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಭಾರತವು ಲಸಿಕೆಯ ವಿಚಾರದಲ್ಲಿ ಹೋಲಿಸಿಕೊಳ್ಳಬೇಕಾಗಿರುವುದು ಯುರೋಪಿನ, ಅಮೆರಿಕದ ಜೊತೆಯಲ್ಲಲ್ಲ. ಚೀನಾದ ಜೊತೆಗೆ ಹೋಲಿಸಿಕೊಳ್ಳಬೇಕು. ಚೀನಾ ದೇಶವು ಈಗಾಗಲೆ ೨೨೫ ಕೋಟಿ ಡೋಸ್ ಲಸಿಕೆಗಳನ್ನು ನೀಡಿದೆ. ತನ್ನ ಜನರಲ್ಲಿ ಅದು ಶೇ.೭೦ ರಷ್ಟು ಜನರಿಗೆ ಲಸಿಕೆ ನೀಡಿ ಮುಗಿಸಿದೆ. ಅಮೆರಿಕ ಕೂಡ ಶೇ. ೫೬ ರಷ್ಟು ಜನಸಂಖ್ಯೆಗೆ ಈಗಾಗಲೇ ಎರಡು ಡೋಸ್ ಕೊರೋನಾ ಲಸಿಕೆ ನೀಡಿದೆ. ಚೀನಾ , ಅಮೆರಿಕ ಮುಂತಾದ ದೇಶಗಳು ಬೂಸ್ಟರ್ ಲಸಿಕೆ ನೀಡುವ ಸಿದ್ದತೆಯಲ್ಲಿವೆ. ಜಗತ್ತಿನ ಅನೇಕ ದೇಶಗಳು ಮಕ್ಕಳಿಗೂ ಲಸಿಕೆ ನೀಡಿ ಮುಗಿಸಿವೆ. ಮಕ್ಕಳಿಗೆ ಲಸಿಕೆ ನೀಡುವ ವಿಚಾರದಲ್ಲಿ ನಮ್ಮಲ್ಲಿ ಈಗ ತಾನೆ ಸಿದ್ಧತೆಗಳು ಆರಂಭವಾಗಿವೆ.
ಪ್ರಧಾನ ಮಂತ್ರಿಗಳ ಭಾಷಣ ಕೊರೋನ ಕಳಪೆ ನಿರ್ವಹಣೆ ಕಾರಣದಿಂದ ಮೃತಪಟ್ಟ, ತಮ್ಮವರನ್ನು ಕಳೆದುಕೊಂಡು ಅನಾಥರಾಗಿರುವ ಕುಟುಂಬಗಳಿಗೆ ಮಾಡಿದ ಅವಮಾನದಂತಿತ್ತು. ತಮ್ಮ ಕಳಪೆ ನಿರ್ವಹಣೆ, ಬೇಜವಾಬ್ದಾರಿತನದಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದರು ಎನ್ನುವ ಸಣ್ಣದೊಂದು ಪಶ್ಚತ್ತಾಪದ ಗೆರೆಯೂ ಅವರ ಮುಖದಲ್ಲಿ ಇಂದು ಕಾಣಲಿಲ್ಲ. ಪ್ರಾಯಶ್ಚಿತ್ತದ ಒಂದು ಮಾತೂ ಪ್ರಧಾನಿ ಅವರ ಬಾಯಲ್ಲಿ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಬ್ರೆಜಿಲ್ ದೇಶದ ಸೆನೆಟ್ ಸಮಿತಿ ಅಲ್ಲಿನ ಅಧ್ಯಕ್ಷರಾದ ಬೊಲ್ಸೆನಾರೊ ವಿರುದ್ಧ ಕೋವಿಡ್ ಪ್ರಮಾದಕ್ಕೆ ನರಹತ್ಯೆ ಮತ್ತು ಮಾನವತೆಯ ವಿರುದ್ಧದ ಅಪರಾಧದ ಪ್ರಕರಣ ದಾಖಲಿಸಲು ಶಿಫಾರಸ್ಸು ಮಾಡಿದೆ. ಕೋವಿಡ್ನ ಕಳಪೆ ಮತ್ತು ಬೇಜವಾಬ್ಧಾರಿತನದಿಂದಾಗಿ ಜನ ಮರಣ ಹೊಂದಿದ್ದಾರೆ. ಹಾಗಾಗಿ ಇದನ್ನು ಕೊಲೆ ಎಂದು ಪರಿಗಣಿಸಿ ತನಿಖೆ ನಡೆಯಬೇಕೆಂದು ಶಿಫಾರಸ್ಸು ಮಾಡಿದ್ದಾರೆ. ನಮ್ಮಲ್ಲಿ ಬ್ರೆಜಿಲ್ಗಿಂತ ಭೀಕರವಾಗಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳು ಅಪರಾಧ ಎಸಗಿವೆ. ಸರ್ಕಾರಗಳ ಅದಕ್ಷತೆ, ನಿರ್ಲಕ್ಷ್ಯ ಧೋರಣೆ, ಕಳಪೆ ನಿರ್ವಹಣೆ ಮತ್ತು ಭ್ರಷ್ಟತೆಯಿಂದಾಗಿ ಕರ್ನಾಟಕವೊಂದರಲ್ಲೆ ಸುಮಾರು ೪ ಲಕ್ಷ ಜನರನ್ನು ಕೊಂದು ಹಾಕಲಾಗಿದೆ. ಹಾಗಾಗಿ ನಮ್ಮಲ್ಲಿಯೂ ಕೋವಿಡ್ ನಿರ್ವಹಣೆ ಕುರಿತಂತೆ ಸಮರ್ಪಕವಾದ ವಿಚಾರಣೆ, ತನಿಖೆ ನಡೆಯಬೇಕಾಗಿದೆ.
ಮೊದಲ ಅಲೆ ಕೊನೆಗೊಳ್ಳುವ ಮೊದಲೇ ಪ್ರಧಾನಿ ಮೋದಿ ಅವರು ಇದೇ ರೀತಿ ಸಂಭ್ರಮಾಚರಣೆಗಳನ್ನು ಮಾಡಿ, ಭಾರತ ಕೊರೋನಾ ಗೆದ್ದೇಬಿಟ್ಟಿತು ಎಂದು ಕುಣಿದಿದ್ದರು. ಅಂತಾರಾಷ್ಟಿಯ ವೇದಿಕೆಗಳಲ್ಲೂ ಭಾರತ ಏಕಾಂಗಿಯಾಗಿ ಕೊರೋನಾ ಗೆದ್ದುಬಿಟ್ಟಿತು ಎಂದು ಹೇಳಿಕೆ ನೀಡಿ ಹಾಸ್ಯಾಸ್ಪದ ಆಗಿದ್ದರು. ಈ ಬಾರಿಯೂ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಥದ್ದರ ಮಧ್ಯೆಯೂ ದೇಶದಲ್ಲಿ ೧೦೦ ಕೋಟಿ ಲಸಿಕೆ ನೀಡಲಾಗಿದೆ. ಕೊರೋನ ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು, ನಿಷ್ಠೆಯಿಂದ ಕೆಲಸ ಮಾಡಿದ ವೈದ್ಯ, ದಾದಿಯರ ವೃಂದ ಮತ್ತು ದೇಶದ ಜನರಿಗೆ ಇದೇ ಸಮಯದಲ್ಲಿ ನಾನು ಅಭಿನಂದನೆ ಸಲ್ಲಿಸುತ್ತೇನೆ.
ಸವಾಲು ಮುಗಿದಿಲ್ಲ. ಭಾರತಕ್ಕಿಂತ ಮರ್ನಾಲ್ಕು ಪಟ್ಟು ಅಧಿಕ ಲಸಿಕೆಯಲ್ಲಿ ಸಾಧನೆಮಾಡಿರುವ ದೇಶಗಳಲ್ಲೂ ಈಗಾಗಲೇ ಕೊರೋನ ನಾಲ್ಕನೇ ಅಲೆ ಅಪ್ಪಳಿಸುತ್ತಿದೆ. ಶೇ.೭೦ ರಷ್ಟು ಲಸಿಕೆ ನೀಡಿರುವ ಚೀನಾದಲ್ಲಿ ದಿನನಿತ್ಯ ೧.೨೫ ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿವೆ. ಅಮೆರಿಕ, ರಷ್ಯಾ, ಇಂಗ್ಲೆAಡ್ ಮುಂತಾದ ಕಡೆಯೂ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಇದು ನಮ್ಮ ದೇಶಕ್ಕೂ ಎಚ್ಚರಿಕೆಯ ಗಂಟೆ ಆಗಿದೆ. ಆದ್ದರಿಂದ ದೇಶದಲ್ಲಿ ಕನಿಷ್ಠ ಶೇ ೬೦-೭೦ ರಷ್ಟು ಜನಕ್ಕೆ ಎರಡೂ ಡೋಸ್ ಲಸಿಕೆ ಹಾಕಿಸಿದ್ದರೆ ಮಾತ್ರ ನಾವು ಅಪಾಯದಿಂದ ರಕ್ಷಣೆ ಪಡೆದುಕೊಳ್ಳಬಹುದಾಗಿದೆ.
ಡೆಲ್ಟಾ ಪ್ಲಸ್ ವೈರಸ್ಸು ಅತ್ಯಂತ ವೇಗವಾಗಿ ರೂಪಾಂತರ ಹೊಂದುತ್ತಿರುವುದಾಗಿ ಮತ್ತು ಅಪಾಯಕಾರಿಯಾಗುತ್ತಿರುವುದರ ಕುರಿತು ಹಲವು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಲಸಿಕೆ ನೀಡುವಿಕೆ ನಿಧಾನವಾದಂತೆಲ್ಲ ವೈರಸ್ಸಿನ ಉಗ್ರತೆಗೆ ನಾವೆ ಕಾರಣವಾದಂತಾಗುತ್ತದೆ. ಕೋವಿಡ್ ರಕ್ಷಣೆ ಪಡೆಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಮೊದಲ ಅಲೆಯ ನಂತರ ಗೆದುಬಿಟ್ಟಿದ್ದೇವೆಂಬ ಹುಸಿ ಭ್ರಮೆಯಲ್ಲಿ ಜನರನ್ನು ತೇಲಾಡಿಸಿ ಇತಿಹಾಸದ ದೊಡ್ಡ ದುರಂತಗಳ ಜೊತೆಗೆ ದೇಶವನ್ನು ಸೇರಿಸಿದ್ದು ಸಾಕು.
ಸಮರೋಪಾದಿಯಲ್ಲಿ ಲಸಿಕೆ ಅಭಿಯಾನವನ್ನು ನೆರವೇರಿಸಬೇಕಾಗಿದೆ. ಹೀಗಾಗಿ ಈ ನಕಲಿ ಸಂಭ್ರಮಾಚರಣೆ ನಿಲ್ಲಿಸಿ ಲಸಿಕೆಯನ್ನು ಇನ್ನಷ್ಟು ತೀವ್ರಗತಿಯಲ್ಲಿ ಹಾಕುವಂತೆ ನಾನು ಒತ್ತಾಯಿಸುತ್ತೇನೆ. ದೇಶದ ಎಲ್ಲರಿಗೂ ಶೀಘ್ರವಾಗಿ ಲಸಿಕೆ ನೀಡಿ ಜನರನ್ನು ರಕ್ಷಿಸುವಂತೆ ಆಗ್ರಹಿಸಿದ್ದಾರೆ.
e̲̲-papr:e Paper – October 24, 2021

























Discussion about this post