ವಿಶ್ವಕಪ್ ನಂತರ ಭಾರತಕ್ಕೆ ಹೊಸ ಕೋಚ್ ನೇಮಕವಾಗಲಿದ್ದಾರೆ. ಮೂಲಗಳ ಪ್ರಕಾರ, ಈಗಾಗಲೇ ದ್ರಾವಿಡ್ ಅವರನ್ನು ಆಯ್ಕೆ ಮಾಡಾಗಿದೆ. ಶಿಷ್ಟಾಚಾರಕ್ಕೆ ಪಾಲಿಸಲು ಅಕ್ಟೋಬರ್ 26ರಂದು ಅರ್ಜಿಯನ್ನು ಹಾಕಿಸಿಕೊಳ್ಳಲಾಗಿದೆ. ದ್ರಾವಿಡ್ ಕೋಚ್ ಆದರೆ, ಬೌಲಿಂಗ್ ಕೋಚ್ ಭರತ್, ಫೀಲ್ಡಿಂಗ್ ಕೋಚ್ ಆಗಿ ಅರುಣ್ ಮತ್ತೊಮ್ಮೆ ಬದಲಾಗಲಿದ್ದಾರೆ. ವಿಶ್ವಕಪ್ ನಂತರ ಭಾರತೀಯ ಕ್ರಿಕೆಟ್ ರಂಗದಲ್ಲಿ ಹೊಸ ಅಲೆ ಶುರುವಾಗಲಿದೆ.
ಈಗಾಗಲೇ ಇದರ ಸೂಚನೆ ಎಂಬಂತೆ ಧೋನಿಯನ್ನು ಭಾರತ ಕ್ರಿಕೆಟ್ ತಂಡದ ಮೆಂಟರ್ ಆಗಿ ನೇಮಕ ಮಾಡಲಾಗಿದೆ. ಮೆಂಟರ್ ಆಗಿ ಫೀಲ್ಡಿಗಿಳಿದ ಧೋನಿಯಿಂದಾಗಿಯೋ ಏನೋ ರವಿಶಾಸ್ತ್ರಿ ಮಂಕಾಗಿದ್ದಾರೆ. ಆಟಗಾರರ ಜೊತೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಮುಖದಲ್ಲಿ ಮೋಡ ಮುಸುಕಿದ ವಾತಾವರಣ ಕಾಣುತ್ತಿದೆ. ಅಂದರೆ, ಕೋಚ್ ಹುದ್ದೆಯಿಂದ ನಿರ್ಗಮನ ಹಾದಿ ಖಚಿತ. ನೋಟೀಸ್ ಪಿರಿಯಡ್ ನಲ್ಲಿರುವ ಬ್ಯಾಂಕ್ ಮ್ಯಾನೇಜರ್ ಯಾವ ಸಾಲಕ್ಕೂ ಸಹಿಹಾಕದ ನಿರುತ್ಸಾಹ ಅವರಲ್ಲಿ ಕಾಣುತ್ತಿದೆ.
ಆಟದ ಮೇಲೆ ಪರಿಣಾಮ
ಇದು ವಿಶ್ವಕಪ್ ಭಾರತ ತಂಡದ ಮೇಲೆ ಪರಿಣಾಮ ಬೀರದೆ ಇರುವುದಿಲ್ಲ. ತಂಡ ಶಾಸ್ತ್ರಿ ಮತ್ತು ಕೋಹ್ಲಿ ಅವರ ಲಯದಲ್ಲಿ ನಡೆಯುತ್ತಿದೆ, ಯೋಜನೆಯನ್ನು ಜಾರಿ ಮಾಡುತ್ತಿದೆ. ಈಗ ದಿಢೀರಂತ ಧೋನಿ ಆಗಮನ ಸ್ವಲ್ಪ ಗೊಂದಲ ಏರ್ಪಡಿಸಬಹುದು. ಇಬ್ಬರ ಆಲೋಚನೆ ಬೇರೆ ಬೇರೆ ಇರಬಹುದು.
ಸುಮ್ಮನೆ ಗಮನಿಸಿ ನೋಡಿ, ಧೋನಿ ಭಾರತ-ಆಸ್ಟ್ರೇಲಿಯ ಅಭ್ಯಾಸ ಪಂದ್ಯದ ಸಮಯದಲ್ಲಿ ರಿಷಭ್ ಪಂತ್ ಗೆ ತಂತ್ರಗಳನ್ನು ಹೇಳಿ ಕೊಡುತ್ತಿದ್ದರು ಅನ್ನೋದು ಅನೇಕ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಅದರಂತೆ, ಬೌಲಿಂಗ್ ವಿಚಾರದಲ್ಲಿ ಮೊಹ್ಮದ್ ಶಮಿ, ಭೂಮ್ರಾ, ಕೊಹ್ಲಿ ಜೊತೆ ದೀರ್ಘಾಲೋಚನೆ ಮಾಡುತ್ತಿದ್ದರು.
ಹಾಗೆ ನೋಡಿದರೆ, ಕೋಚ್ ಹಾಗೂ ಮೆಂಟರ್ ನಡುವೆ ಅಂಥ ದೊಡ್ಡ ಘಾತ್ರದ ಅಂತರವಿಲ್ಲ. ರವಿಶಾಸ್ತ್ರಿ ಎದುರಾಳಿ ತಂಡದ ಬೌಲರ್ ಮತ್ತು ಬ್ಯಾಟ್ಸಮನ್ ಗಳ ದೌರ್ಬಲ್ಯ, ಶಕ್ತಿಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ತಂತ್ರಗಳನ್ನು ಹೆಣೆಯುವ ಕೆಲಸ ಮಾಡುತ್ತಾರೆ. ತಂಡದ ದೌರ್ಬಲ್ಯ, ಆಟಗಾರರ ಲೋಪಗಳನ್ನು ಪಟ್ಟಿ ಮಾಡಿ ಅದನ್ನು ಸರಿಪಡಿಸುವ ಕೆಲಸವೂ
ಇವರ ಹೊಣೆ.
ಆಟಗಾರರ ಪ್ರತಿಭೆ ಗುರುತಿಸಿ, ಲೋಪಗಳಿಗೆ ಕನ್ನಡಿ ಹಿಡಿದು, ನೀನು ಹೋಡಿತೀಯಾ ಹೋಡಿ ಗುರು ಅಂಥ ಧೈರ್ಯ ತುಂಬಿ, ತಮ್ಮ ಅನುಭವ ಸೇರಿಸಿ ಆಟಗಾರರ ಮಾನಸಿಕವಾಗಿ ಗಟ್ಟಿಗೊಳಿಸುವುದು ಮೆಂಟರ್ ಆದವರ ಉದ್ಯೋಗ. ಕೋಚ್ ಕೂಡ ಇದನ್ನೇ ಪರೋಕ್ಷವಾಗಿ ಮಾಡುತ್ತಿರುತ್ತಾರೆ.
ಭಾರತ ತಂಡದಲ್ಲಿ ರವಿಶಾಸ್ತ್ರಿ ನೆಟ್ ಗೆ ಬಂದು, ಸಲಹೆ ಕೊಡುವುದೆಲ್ಲ ಈಗ ಬಂಧ್ ಆದಂತೆ ಕಾಣುತ್ತಿದೆ. ಬದಲಿಗೆ ಧೋನಿ ಬಾಲುಹಿಡಿದು ಪಂತ್ ಗೆ ತಾಲೀಮು ಕೊಡುವುದು, ಜಡೇಜಾಗಿ ಬಾಲು ಎಸೆದು ಫೀಲ್ಡಿಂಗ್ ಪಾಠ ಮಾಡುವುದೆಲ್ಲಾ ಜಗತ್ತಿಗೆ ಕಾಣುತ್ತಿದೆ.
ಅಂತರ ಕಾಪಾಡಿಕೊಂಡಂತಿರುವ ರವಿಶಾಸ್ತ್ರಿ ಜಾಗದಲ್ಲಿ ಧೋನಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ, ಟಿ.20 ವಿಶ್ವಕಪ್ ಸೋಲು, ಗೆಲುವುಗಳ ವಾರಸುದಾರರು ಧೋನಿಯ ಹೆಗಲಿಗೆ ಬೀಳುವ ಸಾಧ್ಯತೆ ಇದೆ. ಭಾರತ-ಪಾಕಿಸ್ತಾನ ಪಂದ್ಯದ ಸೋಲಿಗೆ ತಂಡದ ಒಳಗಿನ ಈ ಸ್ಥಿತ್ಯಂತರವೂ ಕಾರಣವಾಗಿರಬಹುದು.
ರಾಹುಲ್ ದ್ರಾವಿಡ್ ಆಗಮನದ ನಂತರ ಕೋಚ್-ಮೆಂಟರ್ ನಡುವಿನ ಅಂತರ ಜಾಸ್ತಿಯಾದರೆ, ಅದು ಆಟಗಾರರ ಪ್ರದರ್ಶನದ ಮೇಲೆ ಪ್ರಭಾವ ಬೀರುವುದರಲ್ಲಿ ಅನುಮಾನವಿಲ್ಲ. ಈ ಇಬ್ಬರ ಮನೋಹೊಂದಾಣಿಕೆ- ಕೆಲಸದ ಹಂಚಿಕೆ ಗೆಲುವಿನ ಪ್ರಮುಖ ಪಾತ್ರವಹಿಸುತ್ತದೆ. ಇದೊಂದು ಪೂರ್ವ ನಿರ್ಧಾರಿತವಾಗಿ ಹೆಣೆದ ತಂತ್ರ ಅನಿಸುತ್ತಿದೆ.
ಧೋನಿ ಚೆನ್ನೈ ಸೂಪರ್ ಕಿಂಗ್ ತಂಡವನ್ನು ಐಪಿಎಲ್ ಫೈನ್ ಗೆ ಕರೆದೊಯ್ಯುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರಿಗೆ, ದುಬೈ ಕ್ರೀಡಾಂಗಣದ ಪಿಚ್ ಗಳ ವರ್ತನೆಯನ್ನು ಅಳೆಯುವ, ಎದುರಾಳಿಗಳ ನೂನ್ಯತೆಯನ್ನು ತಿಳಿಯುವ ಚಮತ್ಕಾರಿ ಅನುಭವ ಇದೆ ಅನ್ನೋದರಲ್ಲಿ ಎರಡು ಮಾತಿಲ್ಲ.
ಆದರೆ, ಈತನಕ ನಡೆದಿರುವ ಪಂದ್ಯಗಳನ್ನು ಗಮನಿಸಿದರೆ, ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದಿರುವ ಪ್ರಮಾಣ ಹೆಚ್ಚು. ಪಿಚ್ ಬಹಳ ನಿಧಾನಗತಿಯಲ್ಲಿ ವರ್ತಿಸುತ್ತಿದೆ. ತಾಳ್ಮೆ ಇದ್ದವರಷ್ಟು ರನ್ ಗಳಿಸಲು ಸಾಧ್ಯವಾಗುತ್ತಿದೆ. ಆದರೆ, ಐಪಿಎಲ್ ನಲ್ಲಿ ಈ ರೀತಿಯ ಪಿಚ್ ಇರಲಿಲ್ಲ. ರನ್ ಗಳ ಸುರಿಮಳೆ ಹರಿಸಲು ನೆರವಾಗುತ್ತಿತ್ತು. ವಿಶ್ವಕಪ್ ಗೂ ಅದೇ ಪಿಚ್ ಇದೆ ಅಂತ ನಂಬುವುದು ಮೂರ್ಖ ತನವಾದೀತು.
ತಂಡದ ಆಂತರಿಕ ಬದಲಾವಣೆ ವಿಶ್ವಕಪ್ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಅನ್ನೋದು ಭಾನುವಾರ ನಡೆಯಲಿರುವ ಭಾರತ-ನ್ಯೂಜಿಲ್ಯಾಂಡ್ ಪಂದ್ಯದ ಫಲಿತಾಂಶ ಹೇಳಲಿದೆ.
Discussion about this post