ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇತ್ತೀಚಿನ ಸುರಿದ ಭಾರೀ ಮಳೆಯಿಂದ ಆದ ಬೆಳೆ ಹಾನಿ, ಮೂಲಸೌಕರ್ಯಗಳ ಹಾನಿ ಸೇರಿದಂತೆ ನಿಖರವಾದ ನಷ್ಟ ಅಂದಾಜನ್ನು ಅಧಿಕಾರಿಗಳು ತ್ವರಿತಗತಿಯಲ್ಲಿ ನಡೆಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ. ಶಿಖಾ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಾಕೃತಿಕ ವಿಕೋಪದಿಂದಾದ ಹಾನಿಯ ಬಗ್ಗೆ ಪರಿಶೀಲಿನೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮನೆ, ರಸ್ತೆ, ಶಾಲಾ ಕಟ್ಟಡ, ವಿದ್ಯುತ್ ಕಂಬಗಳು, ಬೆಳೆ ಹಾನಿ, ಕೃಷಿ, ಕಾಫಿ ತೋಟ ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿರುವ ನಷ್ಟವನ್ನು ವಿಳಂಬವಿಲ್ಲದೆ ಸಂಬಂಧಪಟ್ಟ ಇಲಾಖೆಯವರು ನಡೆಸಬೇಕು. ಇದರಿಂದ ಪರಿಹಾರವನ್ನು ತ್ವರಿತವಾಗಿ ಸಂತ್ರಸ್ತರಿಗೆ ವಿತರಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಬೆಳೆನಷ್ಟವನ್ನು ಕಂದಾಯ ಇಲಾಖೆಯೊಂದಿಗೆ ಜಂಟಿಯಾಗಿ ಸಂಬಂಧಿಸಿದ ಇಲಾಖೆಯವರು ನಡೆಸಬೇಕು. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ನಿಖರವಾದ ನಷ್ಟ ಅಂದಾಜಿಸಿ, ದಾಖಲಿಸಬೇಕು. ರೈತರಿಂದ ಅಗತ್ಯ ದಾಖಲೆಗಳನ್ನು ಪರಸ್ಪರ ಸಮನ್ವಯದಿಂದ ಪಡೆದು ಸರಕಾರದ ನಿಗದಿತ ಪೋರ್ಟಲ್ನಲ್ಲಿ ನಮೂದು ಮಾಡಬೇಕು ಎಂದು ಅವರು ಹೇಳಿದರು.
ಭಾರೀ ಮಳೆಯಿಂದ ರಸ್ತೆ ಸೇರಿದಂತೆ ಸಂಪರ್ಕ ವ್ಯವಸ್ಥೆ ತೀವ್ರ ಹಾನಿಗೀಡಾದರೆ ಅಥವಾ ಕಡಿತಗೊಂಡರೆ, ಅದನ್ನು ಮರುಜೋಡಿಸಲು ಆದ್ಯತೆ ನೀಡಬೇಕು. ಶಾಲಾ ಮತ್ತು ಅಂಗನವಾಡಿ ಕಟ್ಟಡಗಳು ಹಾನಿಗೀಡಾಗಿದ್ದರೆ, ಸಂಬಂಧಪಟ್ಟ ಇಲಾಖೆಯು ಈ ಬಗ್ಗೆ ಶೀಘ್ರಗತಿಯಲ್ಲಿ ಮಾಹಿತಿ ನೀಡಬೇಕು, ಮಳೆಯಿಂದ ಮೂಲಸೌಕರ್ಯಗಳು ಹಾನಿಯಾದ ಸಂದರ್ಭದಲ್ಲಿ ಇಲಾಖಾಧಿಕಾರಿಗಳು ವಿಳಂಬ ಮಾಡಲದೆ ಮುಂದಿನ ಕ್ರಮಗಳನ್ನು ನಡೆಸಬೇಕು ಎಂದು ಸೂಚಿಸಿದರು.
ಮಾನವ ಜೀವಹಾನಿಯಾದ ಪ್ರಕರಣಗಳಲ್ಲಿ ಅವರ ಕುಟುಂಬಕ್ಕೆ ಪರಿಹಾರ ವಿತರಣೆಯನ್ನು ಅತಿ ಶೀಘ್ರದಲ್ಲಿ ಮಂಜೂರು ಮಾಡಿ ವಿತರಿಸಬೇಕು. ಈ ಬಗ್ಗೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ಗಳು ಸ್ವತ: ಮುತುವರ್ಜಿ ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ೨೦೨೧ರ ಜೂನ್ ೧ರಿಂದ ನವೆಂಬರ್ ೨೫ರವರೆಗೆ ೧೧,೪೪೨ ಹೆಕ್ಟೇರ್ ತೋಟಗಾರಿಕೆ ಹಾಗೂ ೧೯,೦೪೦ ಹೆಕ್ಟೇರ್ ಕೃಷಿ ಬೆಳೆ ಹಾನಿಗೀಡಾಗಿದೆ. ವಿಮಾ ಸಂಸ್ಥೆಯಿಂದ ಪರಿಹಾರ ನೀಡಲು ಈಗಾಗಲೇ ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೃಷಿಕರು, ಬೆಳೆಗಾರರೊಂದಿಗೆ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಎಚ್. ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
Crop damage survey: 15-20 ದಿನಗಳ ಕಾಲ ಬೆಳೆಹಾನಿ ಸಮೀಕ್ಷೆ- ಅಧಿಕಾರಿಗಳಿಗೆ ಸಿಎಂ ನಿರ್ದೇಶನ
Discussion about this post