ಚಿಕ್ಕಮಗಳೂರು : ದತ್ತ ಜಯಂತಿ ಉತ್ಸವದ ಅಂಗವಾಗಿ ಡಿಸೆಂಬರ್ ೧೭ ರಿಂದ ೧೯ ರವರೆಗೆ ದತ್ತಪೀಠದಲ್ಲಿ ವಿವಿಧ ಧಾರ್ಮಿಕ ವಿಧಿ, ವಿಧಾನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಡಿ.೧೭ ರಂದು ಅನುಸೂಯ ಮಾತ ಪೂಜಾ ಅಂಗವಾಗಿ ಮಹಿಳೆಯರಿಂದ ಸಂಕೀರ್ತನ ಯಾತ್ರೆ ನಡೆಯಲಿದೆ. ಅಂದು ಬೆಳಗ್ಗೆ ೯.೩೦ ಕ್ಕೆ ಬೋಳ ರಾಮೇಶ್ವರ ದೇವಸ್ಥಾನದಿಂದ ಕಾಮಧೇನು ಗಣಪತಿ ದೇವಸ್ಥಾನದವರೆಗೂ ಸಂಕಿರ್ತನ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಡಿ.೧೮ ರಂದು ಮಧ್ಯಾಹ್ನ ೨ ಗಂಟೆಗೆ ರತ್ನಗಿರಿ ರಸ್ತೆಯ ಕಾಮದೇನು ಗಣಪತಿ ದೇವಸ್ಥಾನದಿಂದ ಶೋಭಾ ಯಾತ್ರೆಯು ವಿಶೇಷ ವಾದ್ಯ ಮೇಳ, ಕಲಾತಂಡದೊಂದಿಗೆ ಬಸವನಹಳ್ಳಿಯ ಮುಖ್ಯ ರಸ್ತೆ ಹನುಮಂತಪ್ಪ ವೃತ್ತದಿಂದ ಸಾಗಲಿದೆ. ಬಳಿಕ ಸಾರ್ವಜನಿಕ ಸಭೆ ನಡೆಯಲಿದೆ. ಡಿ೧೯ ಕ್ಕೆ ಕಾಲ್ನಡಿಗೆಯಲ್ಲಿ ಭಜನೆ, ಸಂಕಿರ್ತನೆಯೊಂದಿಗೆ ದತ್ತಪೀಠ ತಲುಪಿ ಗುಹಾಂತರ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ದತ್ತಪಾದುಕೆ ದರ್ಶನ ಪಡೆಯಲಾಗುವುದು. ವಿಶೇಷವಾಗಿ ಗಣಪತಿ ಹೋಮ, ದತ್ತಹೋಮ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಶೋಭಾಯಾತ್ರೆ ಹಾಗೂ ಸಂಕೀರ್ತನಾ ಯಾತ್ರೆ ಕೋವಿಡ್ ನಿಯಮಾನುಸಾರ ಆಚರಿಸಲಾಗುವುದು ಇದಕ್ಕಾಗಿ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಪ್ರಧಾನ ಕಾರ್ಯದರ್ಶಿ ಆರ್.ಡಿ, ಮಹೇಂದ್ರ, ಯೋಗೀಶ್ ರಾಜ್ ಅರಸ್, ಭಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ ಹೇರೂರು ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ:
Birth: ದತ್ತಾತ್ರೇಯರ ಕೃಪೆಯಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನ್ಮ
Discussion about this post