ಚಿಕ್ಕಮಗಳೂರು: ರಾಜ್ಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಎತ್ತರದ ಗಿಡಗಂಟಿಗಳು ಬೆಳೆದಿದ್ದು, ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಗುತ್ತಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ಎ.ಕೃಷ್ಣಪ್ಪ ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿ ಮಾತನಾಡಿ, ಸಂತವೇರಿಯಿಂದ ಚಿಕ್ಕಮಗಳೂರು ಮಾರ್ಗವಾಗಿ ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಉದ್ದವಾಗಿ ಬೆಳೆದು ರಸ್ತೆಗೆ ವಾಲಿಕೊಂಡಿವೆ. ಇದರಿಂದ ರಸ್ತೆಯ ತಿರುವುಗಳಲ್ಲಿ ಎದುರಿಗೆ ಬರುವ ವಾಹನಗಳು ಗೋಚರಿಸುವುದಿಲ್ಲ ಇದರಿಂದ ಪ್ರತಿನಿತ್ಯ ವಾಹನಗಳ ಅಪಘಾತ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ರಸ್ತೆಯ ಅಕ್ಕಪಕ್ಕದ ಚರಂಡಿಗಳು ಸಹ ಮುಚ್ಚಿದ್ದು, ಮಳೆಗಾಲದಲ್ಲಿ ಈ ಭಾಗದಲ್ಲಿ ಜೋರಾಗಿ ಮಳೆ ಬರುವುದರಿಂದ ಎತ್ತರದ ಪ್ರದೇಶದಿಂದ ನೀರು ಹರಿಯುವಾಗ ಕಲ್ಲು, ಮಣ್ಣು ತಂದು ರಸ್ತೆಗೆ ಹರಡುತ್ತಿದ್ದು, ರಸ್ತೆಯ ತುಂಬೆಲ್ಲ ಎತ್ತರವಾಗಿ ಮಣ್ಣು ರಾಶಿಯಾಗಿ ಬೀಳುವುದರಿಂದ ವಾಹನ ಸವಾರರು ಆಯಾ ತಪ್ಪಿ ಬಿದ್ದು ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಘಾಟಿ ಭೂತಪ್ಪ ದೇವಸ್ಥಾನದಿಂದ ಗಂಗೂರು ಗೇಟಿನವರೆಗೂ ರಸ್ತೆ ಬಹಳ ಚಿಕ್ಕದಾಗಿರುವುದರಿಂದ ಎದುರಿಗೆ ಬರುವ ವಾಹನಗಳಿಗೆ ಜಾಗ ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದ ವಾಹನಗಳು ಜಾಮ್ ಆಗಿ ಗಂಟೆಗಟ್ಟಲೆ ವಾಹನ ತೆರವಿಗೆ ಕಾಯುವ ಸ್ಥಿತಿ ಉಂಟಾಗಿದೆ. ಆದ್ದರಿಂದ ಈ ಭಾಗದಲ್ಲಿ ರಸ್ತೆಯನ್ನು ಅಗಲೀಕರಣ ಮಾಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದಿದ್ದಾರೆ.
ಸಂಬಂಧಪಟ್ಟವರು ರಸ್ತೆಯ ಬದಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು ಹಾಗೂ ಘಾಟಿ ರಸ್ತೆಯನ್ನು ಅಗಲೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಸಂಬಂಧಿಸಿದ ಇಲಾಖೆಯ ಎದುರು ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Demand for plant cover
Discussion about this post