ಚಿಕ್ಕಮಗಳೂರು: ವಾರಾಂತ್ಯ ಹಾಗೂ ದೀರ್ಘ ವಾರಾಂತ್ಯಗಳಲ್ಲಿ ಜಿಲ್ಲೆಯ ಸೂಕ್ಷ್ಮ ಪ್ರವಾಸಿ ತಾಣಗಳಿಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರೂ ಅಗತ್ಯಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಪರಿಸರ ಆಸಕ್ತ ಸಂಘಟನೆಗಳು ಮುಖಂಡರು ಟೀಕಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಕ್ಷಣ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕೆಂದು ಭದ್ರಾ ವೈಲ್ಡ್ಲೈಫ್ ಕನ್ಸರ್ವೇಶನ್ ಟ್ರಸ್ಟ್ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ, ವೈಲ್ಡ್ ಕ್ಯಾಟ್-ಸಿ ಶ್ರೀದೇವ್ ಹುಲಿಕೆರೆ ಹೇಳಿಕೆ ನೀಡಿ, ಜಿಲ್ಲೆಗೆ ಈ ತಿಂಗಳ ನವರಾತ್ರಿಯ ಒಂಭತ್ತು ದಿನಗಳ ಕಾಲ ಚಂದ್ರದ್ರೋಣ ಪರ್ವತದ ಪ್ರವಾಸಿಧಾಮಗಳೂ ಸೇರಿದಂತೆ ಮೂಡಿಗೆರೆಯ ದೇವರಮನೆ, ಕುದುರೆಮುಖ ಮತ್ತು ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ಈ ಎಲ್ಲಾ ಪ್ರದೇಶಗಳಲ್ಲೂ ವಾಹನ ದಟ್ಟಣೆ ವಿಪರೀತವಾಗಿತ್ತಲ್ಲದೆ, ಅಷ್ಟೇ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆದಿರುವುದು ಈ ಸೂಕ್ಷ್ಮ ಪ್ರದೇಶಗಳಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಚಂದ್ರದ್ರೋಣ ಪರ್ವತ ಶ್ರೇಣಿ ಹಾಗೂ ಕೆಮ್ಮಣ್ಣುಗುಂಡಿ, ಹೆಬ್ಬೆ ಜಲಪಾತ ಪ್ರದೇಶಗಳಿಗೆ ಪ್ರವಾಸಿಗರ ನೂಕುನುಗ್ಗಲೇ ಕಂಡುಬಂತು. ವಾಹನಗಳ ದಟ್ಟಣೆ ವಿಪರೀತವಾಗಿ ಸ್ಥಳೀಯರ ಓಡಾಟಕ್ಕೂ ತೊಡಕುಂಟಾಯಿತು. ತ್ಯಾಜ್ಯದ ಉಪಟಳದೊಂದಿಗೆ ಈ ಹಸಿರಿನ ತಾಣ ವಾಹನಗಳ ಶಬ್ದ ಹಾಗೂ ಹೊಗೆ ಉಗುಳುವಿಕೆಯಿಂದ ಕಿರಿ ಕಿರಿ ಮತ್ತು ಮಾಲಿನ್ಯಕ್ಕೆ ಒಳಗಾಗಬೇಕಾಯಿತು ಎಂದು ಹೇಳಿದ್ದಾರೆ.
ಈ ಪ್ರದೇಶ ಜಲಮೂಲಗಳೂ ಆಗಿದ್ದು ಕೆಲವು ಕಡೆ ಅವು ಹುಟ್ಟುವ ಜಾಗದಲ್ಲೇ ಅನೇಕ ಪ್ರವಾಸಿಗರು ತಮ್ಮ ಶರೀರ ಶುದ್ಧಿಗೂ ಮುಂದಾಗಿದ್ದರೆ, ಮಾಲಿನ್ಯಗೊಂಡ ನೀರು ತಪ್ಪಲಿನ ನಿವಾಸಿಗಳ ಕುಡಿಯುವ ನೀರಿನ ಮೂಲವೂ ಆಗಿದ್ದರ ಪರಿವೇ ಇರಲಿಲ್ಲ. ಆ ಬಗ್ಗೆ ಯಾವುದೇ ರೀತಿಯ ಕಟ್ಟುಪಾಡು ಇಲ್ಲದಂತೆ ಈ ಜಲಮೂಲಗಳು ಮಾಲಿನ್ಯಕ್ಕೆ ಒಳಗಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸೂಕ್ಷ್ಮ ಪ್ರದೇಶಗಳಿಗೆ ಆ ಪ್ರದೇಶಗಳ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರಿಗೆ ಅನುಮತಿ ನೀಡುವ ಯಾವುದೇ ಕನಿಷ್ಠ ಕ್ರಮವನ್ನೂ ಜಿಲ್ಲಾಡಳಿತ ಕೈಗೊಳ್ಳಲಿಲ್ಲ, ಇತ್ತೀಚೆಗೆ ಕೆಲವು ದಿನಗಳ ಹಿಂದೆ ವಾರಾಂತ್ಯದಲ್ಲಿ ಜಿಲ್ಲಾಡಳಿತ ಒಂದು ದಿನಕ್ಕೆ ೩೦೦ ವಾಹನ ಮಾತ್ರ ತೆರಳಲು ಅನುಮತಿ ನೀಡಿ, ಹೋಗಿ ಬರಲು ಸಮಯ ನಿಗದಿ ಮಾಡಿತ್ತು. ಆದರೆ ಯಾವುದೋ ಒತ್ತಡಕ್ಕೆ ಒಳಗಾಗಿ ಜಿಲ್ಲಾಡಳಿತ ಈ ಒಂದು ನಿಯಂತ್ರಣವನ್ನು ದಸರಾ ಹಬ್ಬದ ಸಮಯದಲ್ಲಿ ಜಾರಿಗೊಳಿಸದೆ ಸಡಿಲಗೊಳಿಸಿದ್ದರಿಂದ ಈ ಸೂಕ್ಷ್ಮ ಪ್ರದೇಶಗಳು ಜನ ಹಾಗೂ ವಾಹನ ದಟ್ಟಣೆಯಿಂದ ನಲುಗಿದವು ಎಂದಿದ್ದಾರೆ.
ಈ ಪ್ರವಾಸಿಗರ ನೂಕುನುಗ್ಗಲನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಪರಿಸರಾಸಕ್ತರು ಹಾಗೂ ಜಿಲ್ಲೆಯ ಹಲವು ನಾಗರಿಕರು ಜಿಲ್ಲಾಡಳಿತವನ್ನು ಪದೇ ಪದೇ ಒತ್ತಾಯಿಸುತ್ತಿದ್ದಾರೆ. ಆದರೆ ಈ ಬಗ್ಗೆ ಒಂದು ಖಾಯಂ ಪರಿಹಾರವನ್ನು ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಸೇರಿದಂತೆ ಕಂದಾಯ, ಪೊಲೀಸ್ ಹಾಗೂ ಅರಣ್ಯ ಇಲಾಖೆಗಳು ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ಮುಂದಾಗದೆ, ಈ ಪ್ರದೇಶದ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಯಾವುದೇ ರೀತಿಯ ಜವಾಬ್ದಾರಿ ವಹಿಸದೆ ಮೌನವಾಗಿವೆ ಎಂದು ತಿಳಿಸಿದ್ದಾರೆ.
ಈ ಜಿಲ್ಲೆಯ ಸುಂದರ ತಾಣಗಳನ್ನು ನೋಡಲು ಪ್ರವಾಸಿಗರು ಆಗಮಿಸುವುದಕ್ಕೆ ಯಾರದೇ ಆಕ್ಷೇಪವಿಲ್ಲ. ಆದರೆ ಅಲ್ಲಿ ಪ್ರವಾಸಿ ದಂಡು ಬಂದು ಮೋಜು-ಮಸ್ತಿ ಮಾಡುತ್ತಾ ಮದ್ಯದ ಸೀಸೆ ಹಾಗೂ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಅಗಾಧ ಪ್ರಮಾಣದಲ್ಲಿ ಬಿಸಾಡಿ ಹೋಗುತ್ತಿರುವುದು ಆ ಪ್ರದೇಶದ ಸೂಕ್ಷ್ಮ ಪರಿಸರವನ್ನು ಹಾಳುಗೆಡವುತ್ತಿದೆಯಲ್ಲದೆ, ಶುದ್ಧ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ ಎಂದು ಹೇಳಿದ್ದಾರೆ.

























Discussion about this post