ಚಿಕ್ಕಮಗಳೂರು: ಜಿಲ್ಲೆಯ ಪ್ರತಿಯೊಬ್ಬ ಅರ್ಹ ಅಸಂಘಟಿತ ಕಾರ್ಮಿಕರು ಸಮಗ್ರ ರಾಷ್ಟ್ರೀಯ ದತ್ತಾಂಶ (ಇ-ಶ್ರಮ್) ಯೋಜನೆಯಡಿ ನೋಂದಣಿ ಮಾಡಿಕೊಂಡು ಸರ್ಕಾರದ ಸವಲತ್ತ್ತು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಅಸಂಘಟಿತ ಕಾರ್ಮಿಕ ನೋಂದಣಿಗಾಗಿ ಸಮಗ್ರ ರಾಷ್ಟ್ರೀಯ ಡೇಟಾಬೇಸ್ (ಎನ್.ಡಿ.ಯು.ಡಬ್ಲೂ) ಜಾರಿಗಾಗಿ ರಚಿಸಿರುವ ಜಿಲ್ಲಾ ಮಟ್ಟದ ಸಮಿತಿ ಮತ್ತು ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅನೇಕ ಶ್ರಮ ಜೀವಿಗಳು ಉದ್ಯೋಗಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಇ-ಶ್ರಮ್ ಪೋರ್ಟಲ್ ರೂಪಿಸಿದ್ದು ಇಲ್ಲಿ ಲಭ್ಯವಾಗುವ ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಅಧಿಕಾರಿಗಳು ಶ್ರಮಿಸಬೇಕು. ಪ್ರಸ್ತುತ ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡಿದ್ದಲ್ಲಿ ಅವರಿಗೆ ಸರ್ಕಾರದಿಂದ ಈ ಯೋಜನೆಯ ಲಾಭ ನೇರವಾಗಿ ದೊರೆಯಲಿದೆ ಎಂದರು.
ನೋಂದಣಿ ವಿಧಾನ ಮತ್ತು ಬೇಕಾಗುವ ದಾಖಲೆಗಳು ಅಸಂಘಟಿತ ಕಾರ್ಮಿಕರು ಇ-ಶ್ರಮ್ ಪೋರ್ಟಲ್ www.eshram.gov.in ನಲ್ಲಿ ಸ್ವಯಂ ಅಥವಾ ಕಾಮನ್ ಸರ್ವೀಸ್ ಸೆಂಟರ್ ಮೂಲಕ ನೋಂದಣಿ ಮಾಡಿಕೊಂಡು ಯುಎನ್ ಗುರುತಿನ ಚೀಟಿಯನ್ನು ಪಡೆಯಬಹುದಾಗಿದೆ. ನೋಂದಣಿಗೆ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರಗಳಿರಬೇಕು ಎಂದು ಹೇಳಿದರು.
ನೋಂದಣಿಗೆ ಇ-ಶ್ರಮ್ ಯೋಜನೆಯಡಿ ಕಟ್ಟಡ ಕಾರ್ಮಿಕರು, ಸಣ್ಣ ಮತ್ತು ಅತೀ ಸಣ್ಣ ರೈತರು, ಮೀನುಗಾರರು, ಕೃಷಿ ಸಂಗೋಪನಾಕಾರರು, ನೇಕಾರರು, ಬಡಗಿಗಳು, ಆಶಾಕಾರ್ಯಕರ್ತೆಯರು, ಛಾಯಾಚಿತ್ರಗ್ರಾಹಕರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಮನೆಕೆಲಸದವರು, ಪತ್ರಿಕೆ ಮಾರಾಟಗಾರರು, ನರೇಗಾ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ತರು, ಚರ್ಮ ಕೈಗಾರಿಕಾ ಕಾರ್ಮಿಕರು, ಆನ್ಲೈನ್ ಸೇವಾ ಕಾರ್ಮಿಕರು, ಟೈಲರ್ಗಳು, ಹೋಟೆಲ್ ಬೇಕರಿ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಒಟ್ಟಾರೆ ೧೫೬ ವರ್ಗಗಳ ೧೬-೫೯ ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದಾಗಿದೆ. ಇ.ಪಿ.ಎಫ್. ಮತ್ತು ಇ.ಎಸ್.ಐ.ಸಿ. ಸದಸ್ಯತ್ವ ಹೊಂದಿರದವರು ಆದಾಯ ತೆರಿಗೆ ಪಾವತಿಸದ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿಗೆ ಅರ್ಹರಾಗಿರುವುದಿಲ್ಲ ಎಂದು ತಿಳಿಸಿದರು.
ಈ ನೋಂದಣಿಯಿಂದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆ ಪಡೆಯಬಹುದಾಗಿದೆ ಎಂದರೆ ೧ ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಪ್ರಯೋಜನ (ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ರೂ. ೨ ಲಕ್ಷ ಹಾಗೂ ಭಾಗಶ: ಅಂಗವಿಕಲತೆ ಹೊಂದಿದ್ದಲ್ಲಿ ರೂ. ೧ ಲಕ್ಷ ಪಡೆಯಬಹುದಾಗಿದೆ) ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ಉಚಿತವಾಗಿದ್ದು, ನೋಂದಣಿಯ ನಂತರ ಫಲಾನುಭವಿಗಳು ಸ್ಥಳದಲ್ಲಿಯೇ ಗುರುತಿನ ಚೀಟಿಯನ್ನು ಪಡೆಯಬಹುದಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಅಸಂಘಟಿತ ಕಾರ್ಮಿಕರು ಇ-ಶ್ರಮ್ ಯೋಜನೆಯಡಿ ನೋಂದಾಯಿಸಿಕೊಂಡು ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸಭೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಕೆ.ಟಿ.ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರ, ಕೈಗಾರಿಕಾ ಇಲಾಖೆ ಜಂಟಿ ಉಪ ನಿರ್ದೇಶಕ ಸಿದ್ದರಾಜು, ಕಾರ್ಮಿಕ ಅಧಿಕಾರಿ ರವಿಕುಮಾರ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರುಗಳು ಹಾಜರಿದ್ದರು.
Discussion about this post