ಚಿಕ್ಕಮಗಳೂರು : ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟವು ನವೆಂಬರ್ ೨೬ ಕ್ಕೆ ಒಂದು ವರ್ಷ ಪೂರೈಸಲಿದ್ದು, ಹಳ್ಳಿಯಿಂದ ದೆಹಲಿಗೆ ಎಂಬ ಘೋಷ ವಾಕ್ಯದೊಂದಿಗೆ ನ.೧೨ ರಿಂದ ೨೨ ರವರೆಗೆ ರೈತ ಪರ ಅಭಿಯಾನ ನಡೆಯಲಿದೆ ಎಂದು ಕರ್ನಾಟಕ ಜನಶಕ್ತಿಯ ಕಾರ್ಯದರ್ಶಿ ಕೆ.ಎನ್.ಆಶೋಕ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರೈತರಿಗೆ ಮಾರಕವಾಗಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವAತೆ ಒತ್ತಾಯಿಸಿ ದೆಹಲಿಯ ಗಡಿಭಾಗದಲ್ಲಿ ಸಾವಿರಾರು ರೈತರು ನಿರಂತರ ಚಳುವಳಿ ಹಮ್ಮಿಕೊಂಡಿದ್ದು ಆ ಐತಿಹಾಸಿಕ ಚಳುವಳಿ ನವೆಂಬರ್ ೨೬ ಕ್ಕೆ ಒಂದು ವರ್ಷ ಪೂರೈಸಲಿದೆ, ಆ ನಿಟ್ಟಿನಲ್ಲಿ ಕೇಂದ್ರದ ವಿರೋಧಿ ಧೋರಣೆ ಖಂಡಿಸಿ ಹಳ್ಳಿಯಿಂದ ದೆಹಲಿಗೆ ಎಂಬ ಘೋಷ ವಾಕ್ಯದೊಂದಿಗೆ ನ.೧೨ರಿಂದ ೨೦ ರವರೆಗೆ ಬೃಹತ್ ರೈತಪರ ಅಭಿಯಾನ ಹಾಗೂ ೨೨ ರಿಂದ ಯುವ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಅರಣ್ಯ ಕಾಯ್ದೆಯ ಉದ್ದೇಶಿತ ತಿದ್ದುಪಡಿ ಮಲೆನಾಡಿಗೆ ದೊಡ್ಡ ಕಂಟಕವಾಗಲಿದೆ. ೧೯೮೦ ರ ಮೂಲ ಅರಣ್ಯ ಕಾಯಿದೆಗೆ ತಿದ್ದುಪಡಿ ತಂದರೆ ಸಾಮಾನ್ಯ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಅರಣ್ಯ ಕಾಯ್ದೆಯ ಪ್ರತಿಕೂಲ ಪರಿಣಾಮ ಎಲ್ಲಾ ವರ್ಗದ ಜನರನ್ನು ಕಾಡಲಿದ್ದು ಮಲೆನಾಡಿನಲ್ಲಿ ಅರಾಜಕತೆಯನ್ನು ಸೃಷ್ಟಿಸಲಿದೆ ಎಂದು ಎಚ್ಚರಿಸಿದರು. ಕಾಯ್ದೆ ವಿರುದ್ದ ಕಾನೂನಾತ್ಮಕ ಮತ್ತು ಹೋರಾಟದ ಮೂಲಕ ವಿರೋಧ ದಾಖಲಿಸಬೇಕಾದ ಅಗತ್ಯವಿದೆ ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಪ್ರತಿಪಾದಿಸಬೇಕಿದೆ ಎಂದು ಕರೆ ನೀಡಿದರು.
ವಿದ್ಯುತ್ ಖಾಸಗೀಕರಣ, ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ದವೂ ಸಂಘಟಿತ ಹೋರಾಟ ಕೈಗೊಳ್ಳುವುದಾಗಿ ತಿಳಿಸಿದರು.
ಗೌಸ್ಮೊಹಿದ್ದೀನ್ ಮಾತನಾಡಿ ಮೂಡಿಗೆರೆ ತಾಲ್ಲೂಕಿನ ದೇವರಮನೆಯಲ್ಲಿ ಕದ್ದುಕಾಣದಂತೆ ಕಾಡು ನಾಶವಾಗುತ್ತಿದೆ. ಅನುಮತಿ ಇಲ್ಲದೇ ರೆಸಾರ್ಟ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಇದಕ್ಕೆ ಅರಣ್ಯಾಧಿಕಾರಿಗಳ ಕುಮ್ಮಕು ಇದೆ ಎಂದು ಆರೋಪಿಸಿದರು.
Discussion about this post