
ಚಿಕ್ಕಮಗಳೂರು: ಕನ್ನಡಾಂಬೆಗೆ ರಾಜ್ಯೋತ್ಸವ ಅಂಗವಾಗಿ ನಗರದ ಸಂಗೀತ ಸಂಸ್ಥೆ ಸುಗಮ ಸಂಗೀತ ಗಂಗಾ ಸ್ವರಾಭಿಷೇಕ ನಡೆಸಿತು.
ನಗರದ ಕುವೆಂಪು ಕಲಾಮಂದಿರದಲ್ಲಿ ಕನ್ನಡ-ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕನ್ನಡದ ಪ್ರಮುಖ ಕವಿಗಳ ಹತ್ತು ಗೀತೆಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸಂಸ್ಥೆಯ ಗಾಯಕರು ತಮ್ಮ ಸುಶ್ರಾವ್ಯ ಕಂಠದಿಂದ ಕನ್ನಡಾಂಬೆಗೆ ಗೀತನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂದೇಶ ನೀಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಎಸ್.ಎಸ್.ವೆಂಕಟೇಶ್,ಕನ್ನಡ ಭಾಷೆ ಅತ್ಯಂತ ಉತ್ಕೃಷ್ಟ ಭಾಷಾ ಸಂಪತ್ತಿನಿಂದ ಕೂಡಿದ್ದು,ಪಂಪನಿಂದ ಕುವೆಂಪುವರೆಗೆ,ಅಲ್ಲಿಂದ ಮುಂದಕ್ಕೂ ಸಹ ಕನ್ನಡದ ಹಿರಿಮೆಯನ್ನು ಅತ್ಯಂತ ಮೇಲ್ಮಟ್ಟಕ್ಕೇರಿಸಿದ್ದಾರೆಂದು ನುಡಿದರು.
ಸುಗಮ ಸಂಗೀತ ಗಂಗಾ ಉಪಾಧ್ಯಕ್ಷ ಸ.ಗಿರಿಜಾಶಂಕರ ಮಾತನಾಡಿ ಕನ್ನಡ ಭಾಷೆ ಅತ್ಯಂತ ವೈವಿಧ್ಯಮಯ ಸಾಹಿತ್ಯ ಶ್ರೇಣಿಯನ್ನು ಹೊಂದಿದೆ. ಒಮ್ಮೆ ಭಾಷೆ ಕ್ಷೀಣಿಸಿದರೆ,ನಮ್ಮ ಸಂಸ್ಕೃತಿಯೂ ಮರೆಯಾಗುತ್ತದೆ,ಕನ್ನಡತನದಿಂದ ವಂಚಿತರಾಗುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಗೀತ ನಮನ ಹುಯಲಗೋಳ ನಾರಾಯಣರಾಯರ ಪ್ರಸಿದ್ಧ ಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಮೂಲಕ ಆರಂಭವಾಗಿ ಆ ಗೀತೆ ಅಂದು ಮೂಡಿಸಿದ ಕನ್ನಡ ಉಳಿಸಿ-ಬೆಳೆಸುವ ಪ್ರೇರಣೆಯ ಮೆಲಕನ್ನು ತಮ್ಮ ಶಾರೀರದ ಸೊಬಗಿನಿಂದ ಗಾಯಕ ಎಂ.ಎಸ್.ಸುಧೀರ್ ಮತ್ತು ತಂಡ ನೆನಪಿಸಿತು.
ಆ ನಂತರ ರಾಷ್ಟ್ರಕವಿ ಶಿವರುದ್ರಪ್ಪ ಅವರ ನವೋದಯದ ಕಿರಣ ಲೀಲೆ ಗೀತೆ ಶ್ರೋತೃಗಳಿಗೆ ನವೋದಯ ಕಿರಣ ಬೀರಿದ ಹೊಸ ಬೆಳಗನ್ನು ತಮ್ಮ ಸಿರಿಕಂಠದಿಂದ ಹೃದಯ ಹೊಕ್ಕುವಂತೆ ಮಾಡಿದವರು ಗಾಯಕಿ ರೇಖಾ ಪ್ರೇಮಕುಮಾರ್.
ವರಕವಿ ದ.ರಾ.ಬೇಂದ್ರೆಯವರ ನನ್ನದೇ ಕನ್ನಡ ಈ ಕನ್ನಡನಾಡು ಕನ್ನಡತನವನ್ನು ಹೊರಹೊಮ್ಮಿಸಿದ್ದು ಗಾಯಕರಾದ ರೂಪಾ ಅಶ್ವಿನ್ ಮತ್ತು ಪ್ರಣಮ್ಯ ಅವರ ಧ್ವನಿಯಿಂದ. ಆ ಗೀತೆ ಮುಗಿದಾಕ್ಷಣ ಗಾಯಕಿ ಲಾಲಿತ್ಯ ಅನ್ವೇಕರ್ ಸುಶ್ರಾವ್ಯವಾಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದಪೈಗಳ ತಾಯಾಬಾರ ಮೊಗವ ತೋರ ಹಾಡುವ ಮೂಲಕ ಕರ್ನಾಟಕದ ಸೊಬಗನ್ನು ನೆನಪಿಸುವಂತೆ ಮಾಡಿದರು.
ನಾಲಗೆಸೀಳಿಸಿ ಬಾಯಿ ಹೊಲಿದರೂ ಮೂಗಿನಲ್ಲಿ ಕನ್ನಡ ಪದ ಹಾಡುವೆ ಎಂದ ಜಿ.ಪಿ.ರಾಜರತ್ನಂ ಅವರ ಗೀತೆ ಎಂಡ ಎಡ್ತಿ ……ಅಂದ್ರೆ ರತ್ನಂಗ್ ಪ್ರಾಣ ಗೀತೆ ಅನುರಣಿಸಿದ್ದು ಗಾಯಕ ಮಲ್ಲಿಗೆ ಸುಧೀರ ಕಂಚಿನ ಕಂಠದಿಂದ.
ಕವಿ ಬಿ.ಆರ್.ಲಕ್ಷ್ಮಣರಾಯರು ರಚಿಸಿದ ಹೂವಿನ ಭಾಷೆ ಸುಗಂಧ ಭಿನ್ನತೆಯಲ್ಲೂ ಏಕತೆ ಹೇಗೆ ಅಂತರ್ಗತನಾಗಿದೆ ಹಾಗೆಯೇ ಹೂಗಳ ಬಣ್ಣ ವೈವಿಧ್ಯಮಯನಾದರೂ ಸುಗಂಧ ;ಸೊಗಡು ಎಷ್ಟು ವಿಶಿಷ್ಠ ಎಂಬುದು ಸುಗಮ ಸಂಗೀತ ಗಂಗಾದ ಪುಟ್ಟಗಾಯಕರ ಸಮೂಹದಿಂದ ಬಂದು ಹೃದ್ಯವಾಯಿತು.
ಪ್ರಣಮ್ಯಕಶ್ಯಪ್ ಮತ್ತು ಅಭಿಷೇಕ್ ಕೆ.ಎಸ್.ನ ಅವರ ಪಡುವಣ ಕಡಲಿನ ನೀಲಿಯ ಬಣ್ಣ ಗೀತೆಯಲ್ಲಿ ಹುದುಗಿರುವ ನಾಡಿನ ಪ್ರಾಕೃತಿಕ ಸೌಂದರ್ಯವನ್ನು ರಾಗಬದ್ಧವಾಗಿ ಹಾಡಿ ರಂಜಿಸಿದರು.
ಕನ್ನಡ ಪ್ರೀತಿಯ ಬಾಗಿನದ ಹಿರಿಮೆಯನ್ನು ಡಾ. ಲಕ್ಷ್ಮೀನಾರಾಯಣ ಭಟ್ಟರು ಹಾಡಾಗಿ ನೀಡಿದ್ದು ಅದನ್ನು ಗಾಯಕಿ ಅನುಷಾಅಂಚನ್ ಹಾಡಿದರೆ, ಸಹ್ಯಾದ್ರಿಯ ಕಾಡು ಬೆಳಗೊಳ ಹಳೇಬೀಡು ಗೀತ ಗಾಯನ ರೂಪ ಅಶ್ವಿನ್ ಅವರ ಸ್ವರಮಾಧುರ್ಯದಲ್ಲಿ ಮೂಡಿತು.
ನಮಿಸುವೆನು ತಾಯೆ ಹಸಿರುಡೆಯ ಮಾಯೆ ಕವಿ ಸುಬ್ರಾಯ ಚೊಕ್ಕಾಡಿ ಅವರ ಸುಂದರ ಗೀತೆಯನ್ನು ಸುಗಮ ಸಂಗೀತ ಗಂಗಾದ ಎಲ್ಲಾ ಗಾಯಕರು ಹಾಡಿ ತಾಯಿ ಭುವನೇಶ್ವರಿಗೆ ವಂದಿಸಿದರು. ಕಾರ್ಯಕ್ರಮವನ್ನು ಅತ್ಯಂತ ಅರ್ಥಗರ್ಭಿತವಾಗಿ ಹೇಳಿ ನಿರೂಪಿಸಿದವರು ನಿರೂಪಕಿ ಸುಮಾಪ್ರಸಾದ್. ಸುಗಮ ಸಂಗೀತ ಗಂಗಾ ಕಾರ್ಯದರ್ಶಿ ಮಂಜುನಾಥ ಕಾಮತ್,ಅರವಿಂದ ದೀಕ್ಷಿತ್,ದೀಪಕ್ ದೊಡ್ಡಯ್ಯ ಇದ್ದರು.
ಇದನ್ನೂ ಓದಿ: Jd(S) novel protest: ರಸ್ತೆಯಲ್ಲಿ ಮೀನು ಹಿಡಿಯುವ ಮೂಲಕ ಜೆಡಿಯು ವಿನೂತನ ಪ್ರತಿಭಟನೆ
ಇದನ್ನೂ ಓದಿ: e Paper – November 24, 2021
Gitanamana to Kannadambe

























Discussion about this post