ಚಿಕ್ಕಮಗಳೂರು : ಕೇಂದ್ರದ ಸರ್ವಾಧಿಕಾರಿ ಧೋರಣೆ ಖಂಡಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸಿದ ಚಳುವಳಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆ ನವೆಂಬರ್ ೨೬ ರಂದು ಬೆಳಗ್ಗೆ ೧೧.೦೦ ಗಂಟೆಗೆ ಜಿಲ್ಲಾ ಪಂಚಾಯಿತಿ ಎದುರು ಚಿಕ್ಕಮಗಳೂರು-ಕಡೂರು ಹೆದ್ದಾರಿ ತಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದುಗ್ಗಪ್ಪಗೌಡ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರೈತ ವಿರೋಧಿ ಮಾರಕ ಕೃಷಿ ಕಾಯ್ದೆಗಳನ್ನು ನಿರಂತರ ಹೋರಾಟದ ಬಳಿಕ ಕೇಂದ್ರ ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಕೇವಲ ಹೇಳಿಕೆ ಮೂಲಕ ಹಿಂಪಡೆಯುವುದಾಗಿ ತಿಳಿಸಿದೆ. ಸಂಸತ್ತಿನಲ್ಲಿ ಮಂಡಿಸಿ ಕಾಯ್ದೆ ರದ್ದಾಗುವವರೆಗೂ, ರೈತರ ಬೆಳೆಗಳಿಗೆ ಬೆಲೆ ಖಾತ್ರಿ ಕಾಯ್ದೆ, ಜತೆಗೆ ರೈತರ ಹತ್ಯೆ ಆರೋಪಿಗಳನ್ನು ಶಿಕ್ಷಿಸುವವರೆಗೂ ರೈತ ಚಳುವಳಿ ಮುಂದುವರಿಯಲಿದ್ದು ಅದಕ್ಕೆ ರೈತ ಸಂಘಟನೆಗಳು ಬೆಂಬಲಿಸಲಿವೆ ಎಂದರು.
ಕೃಷಿ ಮಸೂದೆ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸಿದ ಚಳುವಳಿ ನವೆಂಬರ್ ೨೬ ಕ್ಕೆ ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆ ಸಂಯುಕ್ತಾ ಕಿಸಾನ್ ಮೋರ್ಚಾ ರೈತ ಸಂಘಟನೆಗಳ ಒಕ್ಕೂಟ ದೇಶಾದ್ಯಂತ ಹೆದ್ದಾರಿ ತಡೆ ಚಳುವಳಿಗೆೆ ಕರೆ ನೀಡಿವೆ. ಆದ್ದರಿಂದ ಜಿಲ್ಲೆಯ ಎಲ್ಲಾ ರೈತರು, ಕಾರ್ಮಿಕರು, ಕನ್ನಡ ಪರ ಸಂಘಟನೆಗಳು, ಬೆಂಬಲಿಸುವಂತೆ ಕೋರಿದರು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳಲ್ಲಿ ಸೆರ್ಫಸಿ ಕಾಯ್ದೆ ದುರ್ಬಳಕೆಯಾಗುತ್ತಿದೆ. ಸಾಲ ನೀಡಿದ ಸಂಸ್ಥೆ ರೈತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳವುದನ್ನು ಈ ಕಾಯ್ದೆ ಕಾನೂನು ಬದ್ದಗೊಳಿಸುತ್ತಿದೆ. ಇದರಿಂದಾಗಿ ರೈತರು ಆತ್ಮಹತ್ಯೆ ದಾರಿ ಹಿಡಿಯುವ ಸ್ಥಿತಿ ನಿರ್ಮಾಣವಾಗಲಿದೆ. ಇದು ಸಂಪೂರ್ಣ ರೈತ ವಿರೋಧಿಯಾಗಿದ್ದು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯಗಳು ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿವೆ. ಬಂಡವಾಳ ಷಾಹಿಗಳಿಗೆ ಪೂರಕವಾಗಿರುವ ಎಲ್ಲಾ ಕಾಯ್ದೆಗಳನ್ನು ರದ್ದುಗೊಳಿಸಬೇಕು, ಈ ಮೂಲಕ ಸಮಾಜದ ಹಿತ ಕಾಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ದಯಾಕರ್, ಹಸಿರು ಸೇನೆ ಸಂಚಾಲಕ ದಯಾಕರ್, ಕಳಸಾ ಹೋಬಳಿ ಅಧ್ಯಕ್ಷ ಸುರೇಶ್, ಮನು, ಬಾಲು ಉಪಸ್ಥಿತರಿದ್ದರು.
ಇದನ್ನೂ ಓದಿ:
Farm Laws: ವಿವಾದಿತ ಕೃಷಿಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ
Farm Laws : ಕೃಷಿ ಮಸೂದೆ ವಾಪಾಸ್ ನಿರ್ಧಾರ ಜಿಲ್ಲೆಯಲ್ಲಿ ರೈತರ ವಿಜಯೋತ್ಸವ
Discussion about this post